ಕರ್ನಾಟಕ

karnataka

ಮಾನವ ದೇಹದ ಅಂಗ ಹೋಲುವ ಚುನಾವಣಾ ಚಿಹ್ನೆ ನಿರ್ಬಂಧಿಸುವಂತೆ ಪಿಐಎಲ್​: ಸೋಮವಾರ ಸುಪ್ರೀಂಕೋರ್ಟ್​ ವಿಚಾರಣೆ - PIL in SC

By ETV Bharat Karnataka Team

Published : Aug 4, 2024, 7:45 PM IST

ಮಾನವ ದೇಹದ ಅಂಗಾಂಗಳನ್ನು ಹೋಲುವ ಚುನಾವಣಾ ಚಿಹ್ನೆಗಳನ್ನು ನಿರ್ಬಂಧಿಸುವಂತೆ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಸಲಾಗಿದೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ (IANS)

ನವದೆಹಲಿ:ಮಾನವ ದೇಹದ ಭಾಗಗಳನ್ನು ಹೋಲುವ ಚುನಾವಣಾ ಚಿಹ್ನೆಗಳನ್ನು ತೆಗೆದುಹಾಕಲು, ಸ್ಥಗಿತಗೊಳಿಸಲು ಮತ್ತು ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಸೋಮವಾರ ಈ ಅರ್ಜಿಯ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್​ನ ವೆಬ್​ಸೈಟ್​ನಲ್ಲಿ ಪ್ರಕಟವಾದ ವಿಚಾರಣಾ ಪಟ್ಟಿ ತಿಳಿಸಿದೆ.

ಭಾರತದಲ್ಲಿ ನಡೆಯುವ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುವಂತೆ ಖಚಿತಪಡಿಸಿಕೊಳ್ಳಲು ಮಾನವ ದೇಹದ ಭಾಗಗಳನ್ನು ಹೋಲುವ ಚಿಹ್ನೆಗಳ ವಿರುದ್ಧ ಪಿಐಎಲ್ ದಾವೆದಾರರು ಹಲವಾರು ದೂರುಗಳನ್ನು ದಾಖಲಿಸಿದ್ದಾರೆ, ಆದರೆ ಚುನಾವಣಾ ಆಯೋಗವು ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮತದಾನದ 48 ಗಂಟೆಗಳ ಮೊದಲು ಚುನಾವಣಾ ಪ್ರಚಾರ ನಿಲ್ಲಿಸಬೇಕೆಂಬುನ್ನು ಮಾದರಿ ನೀತಿ ಸಂಹಿತೆ (ಎಂಸಿಸಿ) ಸ್ಪಷ್ಟವಾಗಿ ವಿವರಿಸುತ್ತದೆ ಮತ್ತು ಜನ ಪ್ರಾತಿನಿಧ್ಯ ಕಾಯ್ದೆ, 1951 ರ ಸೆಕ್ಷನ್ 130 ರ ಪ್ರಕಾರ ಮತದಾನದ ದಿನದಂದು ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಚಿಹ್ನೆಯ ಪ್ರದರ್ಶನವನ್ನು ನಿಷೇಧಿಸಲಾಗಿದೆ. ಆದರೆ ಮಾನವ ದೇಹದ ಭಾಗಗಳನ್ನು ಹೋಲುವ ಕೆಲ ಚಿಹ್ನೆಗಳನ್ನು ಮರೆಮಾಡಲಾಗುವುದಿಲ್ಲ ಮತ್ತು ಅಂಥ ಮಾನವ ಅಂಗಗಳ ಚಿಹ್ನೆಗಳನ್ನು ಪ್ರದರ್ಶಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವಕೀಲ ಓಂಪ್ರಕಾಶ್ ಪರಿಹಾರ್ ಅವರ ಮೂಲಕ ಸಲ್ಲಿಸಲಾದ ಪಿಐಎಲ್​ನಲ್ಲಿ, 1951, ಸಾಮಾನ್ಯ ಷರತ್ತುಗಳ ಕಾಯ್ದೆ, 1897 ರ ಸೆಕ್ಷನ್ 21, ಮತ್ತು ಚುನಾವಣಾ ನಡವಳಿಕೆ ನಿಯಮಗಳು, 1961 ರ ನಿಯಮಗಳು 5 ಮತ್ತು 10 ಗಳ ಅಡಿಯಲ್ಲಿ ಚುನಾವಣಾ ಆಯೋಗವು ಮಾನವ ದೇಹದ ಭಾಗಗಳ ಚಿಹ್ನೆಯನ್ನು ಯಾವುದೇ ಪಕ್ಷಕ್ಕೆ ಚುನಾವಣಾ ಚಿಹ್ನೆಯಾಗಿ ನೀಡಬಹುದೇ ಮತ್ತು ಅಂತಹ ಚಿಹ್ನೆಗಳನ್ನು ಹಂಚಿಕೆ ಮಾಡುವುದು ಭಾರತದ ಸಂವಿಧಾನದ 324 ನೇ ವಿಧಿಯನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ನಿರ್ಧರಿಸುವಂತೆ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಲಾಗಿದೆ.

ಒಳಮೀಸಲಾತಿ ತೀರ್ಪಿಗೆ ಮಾಯಾವತಿ ಅಸಮಾಧಾನ: ಪರಿಶಿಷ್ಟ ಜಾತಿಗಳಲ್ಲಿ ಉಪ ವರ್ಗೀಕರಣಕ್ಕೆ ಅನುಮತಿ ನೀಡುವ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಬಿಎಸ್​ಪಿ ಮುಖ್ಯಸ್ಥೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಭಾನುವಾರ ತಮ್ಮ ಪಕ್ಷದ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. "ಪರಿಶಿಷ್ಟ ಜಾತಿಗಳು (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಒಳಗಿನ ಜನರನ್ನು ಉಪ ವರ್ಗೀಕರಣ ಮಾಡುವುದನ್ನು ನಮ್ಮ ಪಕ್ಷ ಸಂಪೂರ್ಣವಾಗಿ ಒಪ್ಪುವುದಿಲ್ಲ" ಎಂದು ಮಾಯಾವತಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಲಕ್ಷಾಂತರ ದಲಿತರು ಮತ್ತು ಬುಡಕಟ್ಟು ಜನಾಂಗದವರನ್ನು ಮೇಲೆತ್ತಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒದಗಿಸಿದ ಮೀಸಲಾತಿ ಸೌಲಭ್ಯವನ್ನು ರದ್ದುಪಡಿಸಿದರೆ, ಅದು ಗಮನಾರ್ಹ ತೊಂದರೆಗಳನ್ನು ಸೃಷ್ಟಿಸಲಿದೆ ಎಂದು ಎಚ್ಚರಿಸಿದ ಮಾಯಾವತಿ, ಸುಪ್ರೀಂ ಕೋರ್ಟ್ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ : ರಾಜಸ್ಥಾನದಲ್ಲಿ ಗರ್ಭಿಣಿ ವಿವಸ್ತ್ರಗೊಳಿಸಿದ್ದ ಪ್ರಕರಣ: 14 ಜನರಿಗೆ 7 ವರ್ಷ ಜೈಲು ಶಿಕ್ಷೆ - Rajasthan Woman Stripping Case

ABOUT THE AUTHOR

...view details