ಕರ್ನಾಟಕ

karnataka

ETV Bharat / bharat

ಶಬರಿಮಲೆ ಸ್ಪಾಟ್​ ಬುಕಿಂಗ್​ ರದ್ದು ಖಂಡಿಸಿ ಪ್ರತಿಭಟನೆ: ರಾಜಕೀಯ ತಿರುವು ಪಡೆದ ವಿವಾದ

ಶಬರಿಮಲೆ ಸ್ಪಾಟ್ ಬುಕಿಂಗ್ ರದ್ದು ಖಂಡಿಸಿ ಪ್ರತಿಭಟನೆಗಳು ಹೆಚ್ಚಾಗುತ್ತಿವೆ.

By ETV Bharat Karnataka Team

Published : 4 hours ago

ಶಬರಿಮಲೆ
ಶಬರಿಮಲೆ (IANS)

ತಿರುವನಂತಪುರಂ: ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕಿಂಗ್ ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕೇರಳದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ತೀರ್ಥಯಾತ್ರೆಯ ಸೀಸನ್​ನಲ್ಲಿ ಭಕ್ತರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸ್ಪಾಟ್ ಬುಕಿಂಗ್ ಅನ್ನು ಮತ್ತೆ ಆರಂಭಿಸಬೇಕೆಂದು ಬೇಡಿಕೆಗಳು ಹೆಚ್ಚುತ್ತಿವೆ.

ಸ್ಪಾಟ್​ ಬುಕಿಂಗ್ ರದ್ದು ವಿವಾದವೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್​ಡಿಎಫ್) ಪ್ರಮುಖ ಮಿತ್ರ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಹಿರಂಗವಾಗಿ ಕರೆ ನೀಡಿದೆ. ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಅವರು ಅಸ್ತಿತ್ವದಲ್ಲಿರುವ ಆನ್ ಲೈನ್ ವ್ಯವಸ್ಥೆಯೊಂದಿಗೆ ಸ್ಪಾಟ್ ಬುಕಿಂಗ್ ಅನ್ನು ಮತ್ತೆ ಆರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವಂ, "ಈ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಆರ್​ಎಸ್ಎಸ್​ಗೆ ಅವಕಾಶ ನೀಡಬೇಡಿ" ಎಂದು ಹೇಳಿದರು.

"ನಂಬಿಕೆಯ ಸೋಗಿನಲ್ಲಿ ಭಕ್ತರನ್ನು ದಾರಿ ತಪ್ಪಿಸುವ ಮೂಲಕ ಅನೇಕರು ಸರ್ಕಾರದ ವಿರುದ್ಧ ಸಂಘರ್ಷ ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯವಾಗಿದ್ದರೂ, ಹಠಾತ್ ಬದಲಾವಣೆಯಿಂದ ಉಂಟಾಗಿರುವ ಗೊಂದಲವನ್ನು ಪರಿಹರಿಸಬೇಕು. ವರ್ಚುವಲ್ ಬುಕಿಂಗ್ ಒಂದು ಹೆಜ್ಜೆ ಮುಂದಿದ್ದರೂ, ಎಲ್ಲಾ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ಪಾಟ್ ಬುಕಿಂಗ್ ಕೂಡ ಅತ್ಯಗತ್ಯ. ಅಯ್ಯಪ್ಪ ಭಕ್ತರು ತಮ್ಮ ಹರಕೆಗಳನ್ನು ಪಾಲಿಸಿದ ನಂತರ ದೇವರ ದರ್ಶನ ಸಿಗದೆ ಅನಿವಾರ್ಯವಾಗಿ ಸುಮ್ಮನೆ ಮರಳಿ ಹೊರಡುವ ಸಂದರ್ಭ ಎದುರಾಗುತ್ತಿದೆ. ಆದರೆ ಆರ್​ಎಸ್​ಎಸ್​ ಈ ಪರಿಸ್ಥಿತಿಯ ಲಾಭ ಪಡೆಯಲು ನೋಡುತ್ತಿದೆ. ಆರ್​ಎಸ್​ಎಸ್​ನ ಗುರಿ ಧಾರ್ಮಿಕವಲ್ಲ; ಇದು ರಾಜಕೀಯವಾಗಿದ್ದು, ಎಡಪಂಥೀಯರ ವಿರುದ್ಧ ಉದ್ವಿಗ್ನತೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ." ಎಂದು ಅವರು ವಿಶ್ವಂ ತಿಳಿಸಿದರು.

ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ದೇವಸ್ವಂ ಸಚಿವ ವಿ.ಎನ್.ವಾಸವನ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಸಿಪಿಐ ಈ ಹೇಳಿಕೆ ನೀಡಿದೆ. ಆನ್ ಲೈನ್ ಬುಕಿಂಗ್ ಮಾತ್ರ ಇಟ್ಟರೆ ಯಾತ್ರಾರ್ಥಿಗಳಿಗೆ, ವಿಶೇಷವಾಗಿ ಇತರ ರಾಜ್ಯಗಳಿಂದ ಬರುವವರಿಗೆ ತುಂಬಾ ಸಮಸ್ಯೆಗಳು ಎದುರಾಗಬಹುದು ಎಂದು ಸತೀಶನ್ ಒತ್ತಿ ಹೇಳಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ, ಶಬರಿಮಲೆಗೆ ವರ್ಚುವಲ್ ಕ್ಯೂ ವ್ಯವಸ್ಥೆಯ ವಿಶೇಷ ಬಳಕೆಯನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದ್ದು, ದೈನಂದಿನ ಪ್ರವೇಶವನ್ನು 80,000 ಯಾತ್ರಾರ್ಥಿಗಳಿಗೆ ಸೀಮಿತಗೊಳಿಸಿದೆ. ಕಳೆದ ವರ್ಷ, ಈ ವ್ಯವಸ್ಥೆಯಡಿ 90,000 ಆನ್ ಲೈನ್ ಬುಕಿಂಗ್​ಗಳಿಗೆ ಮತ್ತು ಹೆಚ್ಚುವರಿ 15,000 ಸ್ಪಾಟ್ ಬುಕಿಂಗ್​ಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ವ್ಯವಸ್ಥೆಯ ಹೊರತಾಗಿಯೂ, ಅನೇಕ ಭಕ್ತರು ದೇವರ ದರ್ಶನ ಪಡೆಯಲಾಗದೆ ಮರಳಿ ಹೋಗಬೇಕಾಯಿತು. ಹೀಗಿರುವಾಗ ಸ್ಪಾಟ್​ ಬುಕಿಂಗ್ ರದ್ದು ಮಾಡಿದ ನಂತರ ಈ ವರ್ಷ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಪ್ರತಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ.

ದೇವಾಲಯದ ಆಡಳಿತದ ಮೇಲ್ವಿಚಾರಣೆ ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಇಂದು ಸಭೆ ಸೇರಿ ವಿವಾದದ ಬಗ್ಗೆ ಚರ್ಚಿಸಲಿದೆ. ಸರ್ಕಾರವು ತನ್ನ ವರ್ಚುವಲ್ ಕ್ಯೂ ನೀತಿಯ ವಿಷಯದಲ್ಲಿ ದೃಢವಾಗಿದ್ದರೂ, ಟಿಡಿಬಿ ಸ್ಪಾಟ್ ಬುಕಿಂಗ್​ಗೆ ಬೆಂಬಲ ಸೂಚಿಸಿದೆ. ಟಿಡಿಬಿ ಅಧ್ಯಕ್ಷ ಪಿಎಸ್ ಪ್ರಶಾಂತ್ ಮಾತನಾಡಿ, ಸ್ಪಾಟ್ ಬುಕಿಂಗ್ ಪ್ರಾಯೋಗಿಕ ಪರಿಹಾರವಾಗಿದೆ, ವಿಶೇಷವಾಗಿ ಸ್ಮಾರ್ಟ್​ಫೋನ್​ ಬಳಸದವರಿಗೆ ಇದು ಉಪಯುಕ್ತವಾಗಿದೆ ಎಂದರು.

ಇದನ್ನೂ ಓದಿ : ಕೌಶಲ್ಯ ವಿಶ್ವವಿದ್ಯಾಲಯಕ್ಕೆ ರತನ್ ಟಾಟಾ ಹೆಸರು: ಮಹಾರಾಷ್ಟ್ರ ಸರ್ಕಾರದ ನಿರ್ಧಾರ

ABOUT THE AUTHOR

...view details