ಕರ್ನಾಟಕ

karnataka

ETV Bharat / bharat

145 ಕೋಟಿ ರೂ. ಮೊತ್ತದ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ದಂಧೆ ಪತ್ತೆ: ಜೈಪುರದಲ್ಲಿ ಒಬ್ಬನ ಬಂಧನ - GST Fraud Scam Busted - GST FRAUD SCAM BUSTED

ಪುಣೆಯ ಜಿಎಸ್​ಟಿ ಗುಪ್ತಚರ ಅಧಿಕಾರಿಗಳು ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ದಂಧೆಯನ್ನು ಪತ್ತೆ ಮಾಡಿದ್ದು, ಓರ್ವನನ್ನು ಬಂಧಿಸಿಸಲಾಗಿದೆ.

145 ಕೋಟಿ ರೂ. ಮೊತ್ತದ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ದಂಧೆ ಪತ್ತೆ
145 ಕೋಟಿ ರೂ. ಮೊತ್ತದ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ದಂಧೆ ಪತ್ತೆ (ians)

By ETV Bharat Karnataka Team

Published : May 15, 2024, 2:47 PM IST

ಪುಣೆ, ಮಹಾರಾಷ್ಟ್ರ : ಮಹತ್ವದ ಬೆಳವಣಿಗೆಯೊಂದರಲ್ಲಿ ಪುಣೆ ವಲಯದ ಜಿಎಸ್​ಟಿ ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ) ಘಟಕವು 145 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹು - ರಾಜ್ಯ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ದಂಧೆಯನ್ನು ಭೇದಿಸಿದೆ ಮತ್ತು ರಾಜಸ್ಥಾನದ ಓರ್ವ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

ಪುಣೆ ಮತ್ತು ಗೋವಾದ ಕೆಲವು ಸಂಸ್ಥೆಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ ನಂತರ ಪುಣೆ ವಲಯ ಘಟಕವು ವಾರಾಂತ್ಯದಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಾದ್ಯಂತ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ದಂಧೆ ಹರಡಿದೆ ಎಂಬುದು ತನಿಖೆಯ ವೇಳೆ ಕಂಡು ಬಂದಿದೆ.

ಈ ಹಗರಣವು ಕನಿಷ್ಠ 50 ಬೋಗಸ್ ಸಂಸ್ಥೆಗಳನ್ನು ಒಳಗೊಂಡಿದೆ. ಈ ನಕಲಿ ಕಂಪನಿಗಳು ದಾಖಲೆಗಳ ನಕಲಿ / ಮಾರ್ಫಡ್ / ತಿದ್ದುಪಡಿ ಮಾಡಿದ ಪ್ರತಿಗಳನ್ನು ಬಳಸಿವೆ ಮತ್ತು ನಂತರ ವಾಸ್ತವದಲ್ಲಿ ಯಾವುದೇ ಸರಕುಗಳನ್ನು ಪೂರೈಸದೇ ದೊಡ್ಡ ಪ್ರಮಾಣದ ಐಟಿಸಿಯನ್ನು ಕ್ಲೈಮ್ ಮಾಡಿವೆ ಎಂದು ಮೂಲಗಳು ತಿಳಿಸಿವೆ.

"ವಲಯ ಘಟಕದ ತನಿಖಾಧಿಕಾರಿಗಳು ಸಿಡಿಆರ್​ಗಳು, ಸಿಎಎಫ್​ಗಳು ಮತ್ತು ರಿಟರ್ನ್ಸ್ ಸಲ್ಲಿಸುವ ಮಾದರಿಗಳನ್ನು ತನಿಖೆ ಮಾಡಿದ್ದಾರೆ. ದೇಶದ ವಿವಿಧ ನಗರಗಳು / ರಾಜ್ಯಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಈ ಸಿಂಡಿಕೇಟ್, ನಕಲಿ ಕಾನೂನು ದಾಖಲೆಗಳನ್ನು ಬಳಸಿಕೊಂಡು ನಕಲಿ ಸಂಸ್ಥೆಗಳನ್ನು ಹುಟ್ಟು ಹಾಕುತ್ತಿದೆ ಮತ್ತು ಬಯೋಮೆಟ್ರಿಕ್ ದೃಢೀಕರಣ ತಪ್ಪಿಸಿ ಸಿಮ್​ ಕಾರ್ಡ್​ಗಳನ್ನು ಪಡೆಯಲು ಸಫಲವಾಗಿದೆ" ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ವಿವಿಧ ರಾಜ್ಯಗಳ ಹಲವಾರು ನಗರಗಳಲ್ಲಿ ಹರಡಿರುವ ಆರೋಪಿಗಳನ್ನು ಬೆನ್ನಟ್ಟಿದ ನಂತರ, ಇಡೀ ದಂಧೆಯ ಮಾಸ್ಟರ್ ಮೈಂಡ್ ರಾಹುಲ್ ಕುಮಾರ್ ಎಂಬಾತ ಜೈಪುರದಿಂದ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಜಿಎಸ್​ಟಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿತ್ತು.

"ಕೆಲವು ಇ-ಕಾಮರ್ಸ್ ಡೆಲಿವರಿಗಳು ಮತ್ತು ಸಿಮ್ ಆಪರೇಟರ್​ಗಳ ಮಾಹಿತಿಗಳ ಆಧಾರದ ಮೇಲೆ ನಾವು ಅಂತಿಮವಾಗಿ ಆತನ ನಿಖರವಾದ ಸ್ಥಳವನ್ನು ಪತ್ತೆಹಚ್ಚಿದ್ದೇವೆ. ತಂಡವು ಶುಕ್ರವಾರ ಆತನ ಮನೆಯ ಮೇಲೆ ದಾಳಿ ನಡೆಸಿದ್ದು, ಅಕ್ರಮ ದಂಧೆಯ ಹಲವಾರು ಸಾಕ್ಷಿಗಳು ಸಿಕ್ಕಿವೆ. ಆರೋಪಿ ಕುಮಾರ್​ನನ್ನು ಈ ಸಂದರ್ಭದಲ್ಲಿ ಬಂಧಿಸಲಾಗಿದೆ" ಎಂದು ಡಿಜಿಜಿಐ ಪುಣೆ ವಲಯ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುಮಾರ್​ನನ್ನು ಜೈಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಟ್ರಾನ್ಸಿಟ್ ರಿಮಾಂಡ್ ಮೇಲೆ ಆತನನ್ನು ಪುಣೆಗೆ ಕರೆತರಲಾಯಿತು. ಪುಣೆಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ಕುಮಾರ್​ನನ್ನು 14 ದಿನಗಳ ರಿಮಾಂಡ್​ಗೆ ಕಳುಹಿಸಿದೆ.

ಇದನ್ನೂ ಓದಿ : ಅಪಾಯದಲ್ಲಿ ಅಸ್ಸಾಂನ ಆಮೆ ಪ್ರಭೇದ: ತುರ್ತಾಗಿ ಆಗಬೇಕಿದೆ ಸಂರಕ್ಷಣಾ ಕಾರ್ಯ - TURTLE CONSERVATION

ABOUT THE AUTHOR

...view details