ಕರ್ನಾಟಕ

karnataka

ರಾಜ್​ಕೋಟ್​​ ಅಗ್ನಿ ದುರಂತ: ಎಫ್​ಎಸ್​ಎಲ್​ ಮೂಲಕ ಡಿಎನ್​ಎ ಪರೀಕ್ಷೆ, ಸಾವಿನ ಸಂಖ್ಯೆ 32ಕ್ಕೇರಿಕೆ - Rajkot fire accident

By ETV Bharat Karnataka Team

Published : May 28, 2024, 4:17 PM IST

ಗುಜರಾತ್​ನ ರಾಜ್​ಕೋಟ್​ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಬೆಂದು ಹೋಗಿರುವ ಶವಗಳ ಗುರುತು ಪತ್ತೆ ಮಾಡಲು ಎಫ್​ಎಸ್​ಎಲ್​ ಡಿಎನ್​ಎ ಪರೀಕ್ಷೆ ನಡೆಸುತ್ತಿದೆ.

ರಾಜ್​ಕೋಟ್​​ ಅಗ್ನಿದುರಂತ
ರಾಜ್​ಕೋಟ್​​ ಅಗ್ನಿದುರಂತ (ETV Bharat)

ರಾಜ್​​ಕೋಟ್​​(ಗುಜರಾತ್​):ಇಲ್ಲಿನ ಗೇಮ್ ಝೋನ್​ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 32 ಕ್ಕೆ ಏರಿದೆ. ಭೀಕರ ಅಗ್ನಿ ಜ್ವಾಲೆಗೆ ದೇಹಗಳು ಸುಟ್ಟು ಕರಕಲಾಗಿದ್ದು, ಗುರುತಿಸುವುದೂ ಕಷ್ಟವಾಗಿದೆ. ಹೀಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್​​ಎಸ್​ಎಲ್​) ಮೊರೆ ಹೋಗಲಾಗಿದೆ.

ಅಗ್ನಿಕಾಂಡದಲ್ಲಿ ತೀವ್ರ ಬೆಂದು ಹೋಗಿರುವ ಶವಗಳು ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಎಫ್​ಎಸ್​ಎಲ್​ ಮೂಲಕ ಡಿಎನ್​ಎ ಪರೀಕ್ಷೆ ನಡೆಸಲಾಗುತ್ತಿದೆ. ಮಂಗಳವಾರ ಬಂದ ವರದಿಯಲ್ಲಿ ಒಬ್ಬ ಪುರುಷ ಮತ್ತು ಮೂವರು ಮಹಿಳೆಯರ ಡಿಎನ್​ಎ ಅವರ ಕುಟುಂಬಸ್ಥರ ಡಿಎನ್​ಎಗೆ ಸರಿ ಹೊಂದಿದ್ದು, ಗುರುತು ಪತ್ತೆಯಾಗಿದೆ. ಇನ್ನಷ್ಟು ಶವಗಳ ಡಿಎನ್​​ಎ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 32ಕ್ಕೆ ಏರಿದೆ. ಎಫ್​ಎಸ್​ಎಲ್​ ಮೂಲಕ ಶವಗಳ ಗುರುತು ಪತ್ತೆ ಕಾರ್ಯ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಆರು ಅಧಿಕಾರಿಗಳ ಅಮಾನತು:32 ಜನರ ಸಾವಿಗೆ ಕಾರಣವಾದ ರಾಜ್‌ಕೋಟ್‌ ಗೇಮ್ ಝೋನ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯದಡಿ 6 ಅಧಿಕಾರಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಗುಜರಾತ್ ಸರ್ಕಾರ ಸೋಮವಾರ ಅಮಾನತುಗೊಳಿಸಿದೆ. ಇದರಲ್ಲಿ ಒಬ್ಬ ಎಂಜಿನಿಯರ್, ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಮೂವರು ಪಾಲಿಕೆ ಸಿಬ್ಬಂದಿ ಇದ್ದಾರೆ.

ಶನಿವಾರ ಬೆಂಕಿ ಅವಘಡ ಸಂಭವಿಸಿದ ಸ್ಥಳ ಪರಿಶೀಲಿಸಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಮತ್ತು ಶಿಕ್ಷಾರ್ಹ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಲ್ಲದೇ ಈ ಬಗ್ಗೆ ಆದಷ್ಟು ಬೇಗ ವರದಿ ಸಲ್ಲಿಸುವಂತೆಯೂ ತನಿಖಾ ತಂಡಕ್ಕೆ ತಿಳಿಸಿದ್ದರು. ಇದಾದ ಒಂದು ದಿನದ ನಂತರ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಅಗತ್ಯ ಅನುಮೋದನೆಗಳಿಲ್ಲದೇ ಗೇಮ್ ಝೋನ್ ಕಾರ್ಯನಿರ್ವಹಿಸಲು ಅನುಮತಿ ನೀಡಿರುವ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಐಪಿಎಸ್ ಅಧಿಕಾರಿ ಸುಭಾಷ್ ತ್ರಿವೇದಿ ಮತ್ತು ಐಎಎಸ್ ಬಂಚನಿಧಿ ಪಾನಿ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವು ರಾಜ್‌ಕೋಟ್ ಮುನ್ಸಿಪಲ್ ಕಮಿಷನರ್ ಮತ್ತು ರಾಜ್‌ಕೋಟ್ ಪೊಲೀಸ್ ಕಮಿಷನರ್ ಅವರನ್ನೂ ವಿಚಾರಣೆಗೊಳಪಡಿಸಿದೆ.

ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂಪಾಯಿ ಹಾಗೂ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದೆ. ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗೇಮ್ ಝೋನ್‌ನ ಆರು ಪಾಲುದಾರರು ಮತ್ತು ಇನ್ನೊಬ್ಬ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ರಾಜ್‌ಕೋಟ್‌ನ ಗೇಮಿಂಗ್ ಸೆಂಟರ್‌ ದುರಂತ: ಸುಮೊಟೋ ದೂರು ದಾಖಲಿಸಿಕೊಂಡ ಗುಜರಾತ್ ಹೈಕೋರ್ಟ್ - RAJKOT GAME ZONE TRAGEDY

ABOUT THE AUTHOR

...view details