ಕರ್ನಾಟಕ

karnataka

ETV Bharat / bharat

ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಮದ್ಯ ನಿಷೇಧ ರ್‍ಯಾಲಿ ನಡೆಸಲಿದೆ ದಲಿತ ಪರ ಪಕ್ಷ ವಿಸಿಕೆ

ಮದ್ಯ ನಿಷೇಧಕ್ಕೆ ಆಗ್ರಹಿಸಿ ತಮಿಳುನಾಡಿನ ವಿಸಿಕೆ ಪಕ್ಷವು 4 ರಾಜ್ಯಗಳಲ್ಲಿ ರ್‍ಯಾಲಿ ನಡೆಸಲಿದೆ.

By ETV Bharat Karnataka Team

Published : 4 hours ago

ವಿಸಿಕೆ ಪಕ್ಷದ ರ್ಯಾಲಿಯಲ್ಲಿ ಪಕ್ಷದ ಧ್ವಜ ಹಾರಾಟ
ವಿಸಿಕೆ ಪಕ್ಷದ ರ್ಯಾಲಿಯಲ್ಲಿ ಪಕ್ಷದ ಧ್ವಜ ಹಾರಾಟ (IANS)

ಚೆನ್ನೈ: ತಮಿಳುನಾಡಿನ ಪ್ರಬಲ ದಲಿತ ರಾಜಕೀಯ ಪಕ್ಷ ಮತ್ತು ಡಿಎಂಕೆ ಮಿತ್ರ ಪಕ್ಷ ವಿದುತಲೈ ಚಿರುಥೈಗಲ್ ಕಚ್ಚಿ (ವಿಸಿಕೆ) ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮದ್ಯ ನಿಷೇಧ ರ್‍ಯಾಲಿಗಳನ್ನು ನಡೆಸಲು ನಿರ್ಧರಿಸಿದೆ.

ಅಕ್ಟೋಬರ್ 2 ರಂದು ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಉಲಂದರ್ ಪೇಟೆಯಲ್ಲಿ ನಡೆದ ಮದ್ಯ ನಿಷೇಧ ರ್‍ಯಾಲಿಯ ಯಶಸ್ಸಿನ ನಂತರ ಉತ್ಸಾಹಗೊಂಡಿರುವ ವಿಸಿಕೆ ಈಗ ಇತರ ನಾಲ್ಕು ರಾಜ್ಯಗಳಿಗೆ ತನ್ನ ಮದ್ಯ ನಿಷೇಧ ಹೋರಾಟವನ್ನು ವಿಸ್ತರಿಸಲು ಮುಂದಾಗಿದೆ. ಈ ರ್‍ಯಾಲಿಯಲ್ಲಿ ವಿಸಿಕೆಯ ಮಹಿಳಾ ವಿಭಾಗದ ನೇತೃತ್ವದಲ್ಲಿ ಮದ್ಯ ಸೇವನೆಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಜೂನ್ 2024 ರಲ್ಲಿ ಕಲ್ಲಕುರಿಚಿಯಲ್ಲಿ ಅಕ್ರಮ ಮದ್ಯ ಸೇವಿಸಿ 67 ಜನರು ಸಾವನ್ನಪ್ಪಿದ ದುರಂತ ಘಟನೆಗೆ ಪ್ರತಿಕ್ರಿಯೆಯಾಗಿ ವಿಸಿಕೆ ಮದ್ಯ ನಿಷೇಧಕ್ಕೆ ಆಗ್ರಹಿಸಿ ರ್‍ಯಾಲಿಗಳನ್ನು ಆರಂಭಿಸಿದೆ.

ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಕರ್ನಾಟಕದಲ್ಲಿ ಪಕ್ಷದ ಮಹಿಳಾ ಘಟಕಗಳು ಇದೇ ರೀತಿಯ ಮದ್ಯ ಮತ್ತು ಮಾದಕ ವಸ್ತು ವಿರೋಧಿ ಸಮಾವೇಶಗಳನ್ನು ಆಯೋಜಿಸಲಿವೆ ಎಂದು ವಿಸಿಕೆ ಸಂಸ್ಥಾಪಕ ಮತ್ತು ಸಂಸತ್ ಸದಸ್ಯ ಥೋಲ್ ತಿರುಮಾವಲವನ್ ಘೋಷಿಸಿದರು.

ಕಲ್ಲಕುರಿಚಿ ಸಮಾವೇಶದಲ್ಲಿ ವಿಸಿಕೆ ಹಲವಾರು ನಿರ್ಣಯಗಳನ್ನು ಅಂಗೀಕರಿಸಿದೆ. ಸಂಪೂರ್ಣ ಮದ್ಯ ನಿಷೇಧಕ್ಕಾಗಿ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು ಇದರಲ್ಲಿ ಪ್ರಮುಖವಾಗಿದೆ. ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ ಮದ್ಯದಂಗಡಿಗಳನ್ನು ಮುಚ್ಚಲು ಗಡುವು ನಿಗದಿಪಡಿಸುವಂತೆ ಮತ್ತೊಂದು ನಿರ್ಣಯದ ಮೂಲಕ ತಮಿಳುನಾಡು ಸರ್ಕಾರಕ್ಕೆ ಒತ್ತಾಯಿಸಲಾಯಿತು. ತಾಲ್ಲೂಕು ಮಟ್ಟದಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವುದು, ರಾಜ್ಯ ವಿಧಾನಸಭೆಗಳಲ್ಲಿ ನಿರ್ಣಯಗಳನ್ನು ಅಂಗೀಕರಿಸುವುದು ಸೇರಿದಂತೆ ಸಮಾವೇಶದಲ್ಲಿ 12 ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

ಕಳ್ಳಬಟ್ಟಿ ದುರಂತದಲ್ಲಿ ದಲಿತರೇ ಹೆಚ್ಚಾಗಿ ಬಲಿಯಾಗುತ್ತಾರೆ ಎಂದು ಹೇಳುವ ತಿರುಮಾವಲವನ್, ಮದ್ಯ ನಿಷೇಧ ಮಾಡುವಂತೆ ಬಲವಾಗಿ ಒತ್ತಾಯಿಸುತ್ತಿದ್ದಾರೆ. ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ವಿಸಿಕೆ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದು, ಮದ್ಯ ವಿರೋಧಿ ಮತ್ತು ಮಾದಕವಸ್ತು ವಿರೋಧಿ ರ್‍ಯಾಲಿಗಳು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಕೇರಳದಲ್ಲಿ ಪಕ್ಷದ ಪ್ರಭಾವವನ್ನು ಹೆಚ್ಚಿಸಲು ಸಹಾಯಕವಾಗಲಿವೆ ಎಂದು ಅವರು ಹೇಳಿದ್ದಾರೆ.

ಥೋಲ್ ತಿರುಮಾವಲವನ್ ಸ್ಥಾಪಿಸಿದ ವಿಸಿಕೆಯಿಂದ ತಿರುಮಾವಲವನ್ ಮತ್ತು ರವಿಕುಮಾರ್ ಇವರಿಬ್ಬರು ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ವಿಸಿಕೆ ತಮಿಳುನಾಡಿನಲ್ಲಿ ನಾಲ್ಕು ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ.

ಇದನ್ನೂ ಓದಿ : ದೀಪಾವಳಿಗೆ ಬಂಪರ್​ ಆಫರ್​: ಉಚಿತ ಸಿಲಿಂಡರ್​ ಪಡೆಯುವುದು ಹೇಗೆ?

ABOUT THE AUTHOR

...view details