ಶ್ರೀನಗರ: ಮುಸ್ಲಿಂ ಸಮುದಾಯಕ್ಕೆ ತೊಡಕು ಎಂದು ಭಾವಿಸಲಾಗಿರುವ ಪ್ರಸ್ತಾವಿತ ವಕ್ಫ್ (ತಿದ್ದುಪಡಿ) ಮಸೂದೆ, ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಬಗ್ಗೆ ಆ ಸಮುದಾಯದ ಸಂಸದರು, ಧಾರ್ಮಿಕ ಮುಖಂಡರು ಮತ್ತು ಜಾತ್ಯತೀತ ರಾಜಕೀಯ ಪಕ್ಷಗಳ ನಾಯಕರ ಸಭೆಯು ನವದೆಹಲಿಯಲ್ಲಿ ನಡೆದಿದೆ. ದೇಶದಲ್ಲಿ ಮುಸ್ಲಿಮರ ಮೇಲಿನ ಒತ್ತಡ ವಿರೋಧಿಸಲು ಈ ಒಕ್ಕೂಟವು ಸಿದ್ಧತೆ ನಡೆಸಿದೆ.
ಕಾಶ್ಮೀರದ ಮುಖ್ಯ ಧರ್ಮಗುರು ಮಿರ್ವಾಜ್ ಉಮರ್ ಫಾರೂಕ್ ನೇತೃತ್ವದಲ್ಲಿ, ನವದೆಹಲಿಯಲ್ಲಿ ನಡೆದ ಸರಣಿ ಗೌಪ್ಯ ಸಭೆಗಳಲ್ಲಿ ಹಲವಾರು ಪ್ರಮುಖ ನಾಯಕರು, ಉಲೇಮಾಗಳು (ಧರ್ಮಗುರುಗಳು), ರಾಜಕಾರಣಿಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಭಾಗವಹಿಸಿದ್ದರು. ನ್ಯಾಷನಲ್ ಕಾನ್ಫ್ರೆನ್ಸ್ (ಎನ್ಸಿ) ಪಕ್ಷದ ಶ್ರೀನಗರ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಲ್ಗೊಂಡು ಸಭೆಯ ನಿರ್ಣಯಕ್ಕೆ ಸಮ್ಮತಿ ನೀಡಿದ್ದಾಗಿ ತಿಳಿದು ಬಂದಿದೆ.
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹೋರಾಟ ನಡೆಸುತ್ತಿದ್ದ ಮಿರ್ವಾಜ್ ಉಮರ್ ಗೃಹ ಬಂಧನಕ್ಕೆ ಒಳಗಾಗಿ, 2023 ರಲ್ಲಿ ಬಿಡುಗಡೆಯಾಗಿದ್ದಾರೆ. ಇದೀಗ, ವಕ್ಫ್ ಮಸೂದೆ ಮತ್ತು ಯುಸಿಸಿ ವಿರುದ್ಧ ಹೋರಾಟ ಸಂಘಟಿಸಲು ಪ್ರಮುಖ ರಾಜಕಾರಣಿಗಳು, ಉಲೇಮಾಗಳು ಮತ್ತು ಸಾಮಾಜಿಕ ಪ್ರತಿನಿಧಿಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ದೆಹಲಿ ಬಳಿಕ ಯುಪಿಯಲ್ಲಿ ಸಭೆ: ಸಭೆಯ ಬಗ್ಗೆ ತಿಳಿದ ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ಮುಸ್ಲಿಂ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಮಾನ್ಯ ಕಾರ್ಯಸೂಚಿಗಳನ್ನು ರೂಪಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ದೃಢಪಡಿಸಿವೆ. ಧರ್ಮಗುರು ಮಿರ್ವಾಜ್ ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಅಲ್ಲಿ ಪ್ರಮುಖ ನಾಯಕರ ಜೊತೆ ಮಾತುಕತೆ ಜೊತೆಗೆ, ದೇಶದ ಅತಿದೊಡ್ಡ ಇಸ್ಲಾಮಿಕ್ ಸೆಮಿನರಿ ದಾರುಲ್ ಉಲೂಮ್ ದಿಯೋಬಂದ್ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಎಲ್ಲ ಸಮುದಾಯಗಳ ಸಾಮೂಹಿಕ ಅಸ್ತಿತ್ವದಲ್ಲಿ ತಾತ್ವಿಕವಾಗಿ ನಂಬಿಕೆ ಇಡುವ ರಾಜಕಾರಣಿಗಳು, ಉಲೇಮಾಗಳು ಮತ್ತು ರಾಜಕೀಯ ಪಕ್ಷಗಳನ್ನು ಒಟ್ಟುಗೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಈ ಮೂಲಕ ಮುಸ್ಲಿಮ್ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಅಧಿಕಾರರಹಿತ ಶೂನ್ಯದ ಬಗ್ಗೆ ತಿಳಿವಳಿಕೆ ಮೂಡಿಸುವ ಯತ್ನ ಇದರ ಹಿಂದಿದೆ ಎಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಆಗಸ್ಟ್ 2024 ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ವಕ್ಫ್ (ತಿದ್ದುಪಡಿ) ಮಸೂದೆ, 2024, 1995 ರ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ. ಕೇಂದ್ರದಲ್ಲಿರುವ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವು ಈ ಮಸೂದೆಯು ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವುದು, ನೋಂದಣಿ ಪ್ರಕ್ರಿಯೆ ಮತ್ತು ನಿರ್ವಹಣೆ ಮತ್ತು ಆಡಳಿತದಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸುವ ಗುರಿ ಹೊಂದಿದೆ ಎಂದು ವಾದಿಸುತ್ತದೆ.
ವಕ್ಫ್ ತಿದ್ದುಪಡಿಗಳಿಗೆ ತೀವ್ರ ವಿರೋಧ: ವಕ್ಫ್ ಮಂಡಳಿಯ ಅಧಿಕಾರವನ್ನು ಕಡಿತ ಮಾಡುವ ತಿದ್ದುಪಡಿಗಳು ಸೇರಿದಂತೆ ವಕ್ಫ್ ಮಸೂದೆಯನ್ನು ತೀವ್ರವಾಗಿ ವಿರೋಧಿಸುವ ಉದ್ದೇಶವಿದೆ. ಸಮುದಾಯದ ಕಳವಳ ವ್ಯಕ್ತಪಡಿಸಲು ಜನವರಿ 24 ರಂದು ನವದೆಹಲಿಯಲ್ಲಿ ಬಿಜೆಪಿ ಸಂಸದ ಮತ್ತು ವಕ್ಫ್ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರ ಭೇಟಿಗೆ ಬಂದಿದ್ದ ನಿಯೋಗದ ಅಧ್ಯಕ್ಷತೆಯನ್ನು ಮಿರ್ವಾಜ್ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ, ಬಿಜೆಪಿ ನೇತೃತ್ವದ ಎನ್ಡಿಎ ಕೂಟದಲ್ಲಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಆಂಧ್ರಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದ ನಾಯಕರೊಂದಿಗೆ ವಕ್ಫ್ ಮಸೂದೆಯ ಬಗ್ಗೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿರುವುದಾಗಿ ಮಿರ್ವಾಜ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
370ನೇ ವಿಧಿಯನ್ನು ಏಕಾಏಕಿ ರದ್ದು ಮಾಡಿದಂತೆ, ವಕ್ಫ್ ತಿದ್ದುಪಡಿ ಮಸೂದೆ ಪಾಸು ಮಾಡುವ ಬದಲು ಸಂಸತ್ತಿನಲ್ಲಿ ವಿಸ್ತೃತ ಚರ್ಚೆಗೆ ಒಳಪಡಿಸಬೇಕು ಎಂದು ಅವರು ಹೇಳಿದ್ದಾರೆ.