ಕರ್ನಾಟಕ

karnataka

ETV Bharat / bharat

ಭ್ರಷ್ಟಾಚಾರ: NAAC ತಪಾಸಣಾ ಸಮಿತಿ ಅಧ್ಯಕ್ಷ, JNU ಪ್ರೊಫೆಸರ್‌ ಸೇರಿ 10 ಮಂದಿಯನ್ನು ಬಂಧಿಸಿದ ಸಿಬಿಐ - NAAC CHAIRMAN

ಗಂಭೀರ ಭ್ರಷ್ಟಾಚಾರ ಪ್ರಕರಣದಲ್ಲಿ ರಾಷ್ಟ್ರೀಯ ಮೌಲ್ಯಮಾಪನಾ ಮತ್ತು ಮಾನ್ಯತೆ ಮಂಡಳಿ(ನ್ಯಾಕ್‌) ತಪಾಸಣಾ ಸಮಿತಿಯ ಪ್ರಮುಖರು ಸೇರಿದಂತೆ ಹಲವರನ್ನು ಸಿಬಿಐ ಬಂಧಿಸಿದೆ.

CBI
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Feb 2, 2025, 10:03 AM IST

ನವದೆಹಲಿ:ಭ್ರಷ್ಟಾಚಾರ ಪ್ರಕರಣದಲ್ಲಿ ರಾಷ್ಟ್ರೀಯ ಮೌಲ್ಯಮಾಪನಾ ಮತ್ತು ಮಾನ್ಯತೆ ಮಂಡಳಿ (NAAC)ಯ ತಪಾಸಣಾ ಸಮಿತಿಯ ಅಧ್ಯಕ್ಷ ಮತ್ತು 6 ಮಂದಿ ಸದಸ್ಯರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಶನಿವಾರ ಬಂಧಿಸಿದೆ. ಪ್ರತಿಷ್ಟಿತ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದ ಪ್ರೊಫೆಸರ್‌ ಕೂಡಾ ಬಂಧಿತರಲ್ಲಿ ಒಬ್ಬರು ಎಂಬುದು ಗಮನಾರ್ಹ.

ಆಂಧ್ರ ಪ್ರದೇಶದಲ್ಲಿರುವ ಕೊನೇರು ಲಕ್ಷ್ಮಣಯ್ಯ ಎಜುಕೇಶನ್‌ ಫೌಂಡೇಶನ್ (KLEF)ನ ಉಪ ಕುಲಪತಿ ಮತ್ತು ಸಂಸ್ಥೆಯ ಇಬ್ಬರು ಅಧಿಕಾರಿಗಳು ಬಂಧಿತರಲ್ಲಿ ಸೇರಿದ್ದಾರೆ. ಕೊನೇರು ಲಕ್ಷ್ಮಣಯ್ಯ ಎಜುಕೇಶನ್‌ ಫೌಂಡೇಶನ್‌ನ ಅಧ್ಯಕ್ಷ ಕೊನೇರು ಸತ್ಯನಾರಾಯಣ, NAAC ಮಾಜಿ ಉಪ ಸಲಹೆಗಾರ ಎಲ್.ಮಂಜುನಾಥ ರಾವ್, ಬೆಂಗಳೂರಿನ IQAC-NAAC ಪ್ರೊಫೆಸರ್ ಮತ್ತು ನಿರ್ದೇಶಕ ಎಂ.ಹನುಮಂತಯ್ಯ, NAAC ಸಲಹೆಗಾರ ಎಂ.ಎಸ್.ಶ್ಯಾಮ್‌ಸುಂದರ್‌ ಅವರ ಹೆಸರುಗಳನ್ನೂ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಆದರೆ ಸದ್ಯಕ್ಕೆ ಇವರನ್ನು ತನಿಖಾ ಸಂಸ್ಥೆ ಬಂಧಿಸಿಲ್ಲ.

A++ ಮಾನ್ಯತೆ ಪಡೆಯಲು NAAC ತಪಾಸಣಾ ಸಮಿತಿಗೆ ಲಂಚ ನೀಡಿದ ಗಂಭೀರ ಆರೋಪದ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಬಿಐ, KLEF ಉಪ ಕುಲಪತಿ ಜಿ.ಪಿ.ಸರಧಿ ವರ್ಮಾ, ಇದೇ ಸಂಸ್ಥೆಯ ಉಪಾಧ್ಯಕ್ಷ ಕೊನೇರು ರಾಜಾ ಹರೀನ್, ಕೆ.ಎಲ್. ವಿವಿ ಹೈದರಾಬಾದ್ ಕ್ಯಾಂಪಸ್‌ನ ನಿರ್ದೇಶಕ ಎ.ರಾಮಕೃಷ್ಣ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮಾಹಿತಿ ನೀಡಿದೆ.

ರಾಮಚಂದ್ರ ಚಂದ್ರವಂಶಿ ವಿ.ವಿಯ ಉಪ ಕುಲಪತಿಯೂ ಆಗಿರುವ NAAC ತಪಾಸಣಾ ಸಮಿತಿಯ ಅಧ್ಯಕ್ಷರಾದ ಸಮರೇಂದ್ರ ನಾಥ್ ಸಾಹಾ ಅವರನ್ನೂ ಸಿಬಿಐ ಬಂಧಿಸಿದೆ.

NAAC ತಪಾಸಣಾ ಸಮಿತಿ ಸದಸ್ಯರಾದ ಜೆಎನ್‌ಯು ಪ್ರೊಫೆಸರ್‌ ರಾಜೀವ್ ಸಿಜರಿಯಾ, ಭಾರತ್ ಇನ್ಸ್‌ಟಿಟ್ಯೂಟ್ ಆಫ್ ಲಾ ಡೀನ್‌ ಡಿ.ಗೋಪಾಲ್, ಜಾಗರಣ್ ಲೇಕ್‌ಸಿಟಿ ವಿ.ವಿಯ ಡೀನ್ ರಾಜೇಶ್ ಸಿಂಗ್‌ ಪವಾರ್, ಜಿ.ಎಲ್‌.ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಮನಸ್ ಕುಮಾಸ್ ಮಿಶ್ರಾ, ದಾವಣಗೆರೆ ವಿ.ವಿಯ ಪ್ರೊಫೆಸರ್‌ ಗಾಯತ್ರಿ ದೇವರಾಜ, ಸಂಭಾಲ್‌ಪುರ್‌ ವಿ.ವಿಯ ಪ್ರೊಫೆಸರ್‌ ಬುಲು ಮಹರಾಣಾ ಅವರನ್ನು ಬಂಧಿಸಲಾಗಿದೆ.

NAAC ತಪಾಸಣಾ ಸಮಿತಿ ಸದಸ್ಯರಿಗೆ ಲಂಚ ನೀಡಿದ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ ಶೋಧದ ಸಂದರ್ಭದಲ್ಲಿ, NAAC ಸಮಿತಿಗೆ ನೀಡಲಾದ ನಗದು, ಚಿನ್ನ, ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಕುರಿತು ಸಿಬಿಐ ಚೆನ್ನೈ, ಬೆಂಗಳೂರು, ವಿಜಯವಾಡ, ಪಲಾಮು, ಸಂಭಾಲ್‌ಪುರ್, ಬೋಪಾಲ್, ಬಿಲಾಸ್‌ಪುರ್‌, ಗೌತಮ್ ಬುದ್ಧ ನಗರ್ ಮತ್ತು ನವದೆಹಲಿ ಒಳಗೊಂಡಂತೆ ದೇಶದ 20 ಕಡೆಗಳಲ್ಲಿ ಶೋಧ ನಡೆಸಿದೆ. ಸುಮಾರು 37 ಲಕ್ಷ ರೂಪಾಯಿ ನಗದು, 6 ಲ್ಯಾಪ್‌ಟ್ಯಾಪ್‌ಗಳು, ಒಂದು ಐಫೋನ್‌ 16 ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂಜು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಡಿಜಿಟಲ್ ಅರೆಸ್ಟ್ ಮಾಡಿ ವೃದ್ಧನಿಂದ ₹6.98 ಲಕ್ಷ ಪೀಕಿದ ನಕಲಿ ಸಿಬಿಐ ಅಧಿಕಾರಿಗಳು

ಇದನ್ನೂ ಓದಿ:ನಕಲಿ LLB ಡಿಗ್ರಿ ಆರೋಪ: ಬಾರ್ ಕೌನ್ಸಿಲ್ ಉಪಾಧ್ಯಕ್ಷ ನಾಸಿಯಾರ್ ವಜಾ, ಸಿಬಿಐ ತನಿಖೆ

ABOUT THE AUTHOR

...view details