ಹೈದರಾಬಾದ್:ಇಲ್ಲಿನ ಮಿಯಾಪುರ್ ಮೆಟ್ರೋ ಸ್ಟೇಷನ್ ಬಳಿ ಮುಂಜಾನೆ ಚಿರತೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಚಿರತೆ ಕಂಡ ನಿವಾಸಿಗಳು ಮತ್ತು ಈ ಪ್ರದೇಶದ ಕಟ್ಟಡ ನಿರ್ಮಾಣ ಕಾರ್ಮಿಕರು ಗಾಬರಿಗೊಂಡಿದ್ದಾರೆ.
ಸ್ಟೇಷನ್ ಹಿಂಬದಿಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ಚಿರತೆ ಕಾಣಿಸಿಕೊಂಡಿದೆ. ಅವರು ತಕ್ಷಣಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಚಿರತೆಯ ಚಲನವಲನ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಮರಳಿನ ರಾಶಿ ಮೇಲೆ ಓಡಾಡುತ್ತಿರುವ ಚಿರತೆ ಫೋಟೋವನ್ನು ಪಡೆದು ಅಧಿಕಾರಿಗಳಿಗೆ ನೀಡಿದ್ದಾರೆ. ತಕ್ಷಣಕ್ಕೆ ಅರಣ್ಯ ಅಧಿಕಾರಿಗಳು ಕೂಡ ಪೊಲೀಸರೊಂದಿಗೆ ಸ್ಥಳಕ್ಕೆ ಬಂದಿದ್ದು, ಶೋಧ ಕಾರ್ಯ ನಡೆಸಿದ್ದಾರೆ.
ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳು ಜಂಟಿಯಾಗಿ ಚಿರತೆ ಶೋಧದ ಕಾರ್ಯವನ್ನು ಆರಂಭಿಸಿದರು. ಈ ವೇಳೆ ಚಂದ್ರನಾಯಕ್ ತಾಂಡಾ ಹಾಗೂ ಸಮೀಪದ ಕಾಲೋನಿ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿ ಹತೋಟಿಗೆ ಬರುವವರೆಗೂ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಹೋಗದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.