ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / bharat

ನಟಿ ಮೇಲೆ ಅತ್ಯಾಚಾರ ಆರೋಪ ಪ್ರಕರಣ: ಮಲಯಾಳಂ ನಟ ಸಿದ್ದಿಕ್ ಜಾಮೀನು ಅರ್ಜಿ ವಜಾ - Malayalam Actor Siddique

ಮಲಯಾಳಂ ನಟ ಸಿದ್ದಿಕ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಮಲಯಾಳಂ ನಟ ಸಿದ್ದಿಕ್
ಮಲಯಾಳಂ ನಟ ಸಿದ್ದಿಕ್ (IANS)

ಕೊಚ್ಚಿ: ನಟಿಯೊಬ್ಬರು ದಾಖಲಿಸಿರುವ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮಲಯಾಳಂ ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ನೀಡಲು ಕೇರಳ ಹೈಕೋರ್ಟ್ ಮಂಗಳವಾರ ನಿರಾಕರಿಸಿತು. 2016ರಲ್ಲಿ ರಾಜ್ಯ ರಾಜಧಾನಿಯ ಸರ್ಕಾರಿ ಸ್ವಾಮ್ಯದ ಹೋಟೆಲ್​ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸಿದ್ದಿಕ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ, ಕಳೆದ ತಿಂಗಳು ಪ್ರಕಟವಾದ ಹೇಮಾ ಸಮಿತಿಯ ವರದಿಯ ನಂತರ ಈ ಮಾಜಿ ನಟಿ ದೂರು ನೀಡಿದ್ದು, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ದಯನೀಯ ಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ.

ಆರಂಭದಲ್ಲಿ ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದ ಮಾಜಿ ನಟಿ ವರದಿ ಬಹಿರಂಗವಾದ ನಂತರ ದೂರು ದಾಖಲಿಸಿದ್ದಾರೆ. ತಮಿಳು ಸಿನಿಮಾವೊಂದರಲ್ಲಿ ಪಾತ್ರ ಕೊಡಿಸಲು ಲೈಂಗಿಕ ಅನುಕೂಲಕ್ಕಾಗಿ ಅವರಿಟ್ಟ ಬೇಡಿಕೆಗಳಿಗೆ ಮಣಿಯಲು ನಿರಾಕರಿಸಿದ ನಂತರ ಸಿದ್ದೀಕ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಈ ನಟಿ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಹಿರಂಗವಾದಾಗಿನಿಂದ ಮಲಯಾಳಂ ಚಲನಚಿತ್ರೋದ್ಯಮದ ನಟರು, ನಿರ್ದೇಶಕರು ಮತ್ತು ನಿರ್ಮಾಪಕರ ವಿರುದ್ಧ ಮಾಜಿ ನಟಿಯರಿಂದ ನಿರಂತರ ದೂರುಗಳು ದಾಖಲಾಗುತ್ತಿವೆ.

ಇತ್ತೀಚೆಗೆ ಅಮ್ಮಾ (ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್) ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಸಿದ್ದಿಕ್ ತಮ್ಮ ವಿರುದ್ಧ ಆರೋಪಗಳು ಕೇಳಿ ಬಂದ ನಂತರ ಹುದ್ದೆಗೆ ರಾಜೀನಾಮೆ ನೀಡಿದ್ದರು. ತದನಂತರ ಮೋಹನ್ ಲಾಲ್ ಅಧ್ಯಕ್ಷತೆಯಲ್ಲಿದ್ದ ಇಡೀ ಸಮಿತಿಯೂ ರಾಜೀನಾಮೆ ನೀಡಿದೆ.

ನಟಿಯ ವಿರುದ್ಧ ಪ್ರತ್ಯಾರೋಪ ಮಾಡಿರುವ ಸಿದ್ದಿಕ್, 2016 ರಲ್ಲಿ ಚಿತ್ರಮಂದಿರವೊಂದರಲ್ಲಿ ಆಕೆಯೊಂದಿಗೆ ಲೈಂಗಿಕವಾಗಿ ಕೆಟ್ಟದಾಗಿ ವರ್ತಿಸಲು ಪ್ರಯತ್ನಿಸಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪದೇ ಪದೆ ಹೇಳಿಕೆಗಳನ್ನು ನೀಡುವ ಮೂಲಕ ಈ ನಿರ್ದಿಷ್ಟ ನಟಿ 2019 ರಿಂದ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಹೇಮಾ ಸಮಿತಿಯ ವರದಿ ಪ್ರಕಟವಾದ ನಂತರ ಅದೇ ವರ್ಷದಲ್ಲಿ ಬೇರೆ ಸ್ಥಳದಲ್ಲಿ ಅತ್ಯಾಚಾರ ನಡೆದಿದೆ ಎಂದು ನಟಿ ಆರೋಪಿಸಿದ್ದಾರೆ ಎಂದು ಸಿದ್ದಿಕ್ ಹೇಳಿದ್ದಾರೆ.

ಹೇಮಾ ಸಮಿತಿಯ ವರದಿ ಪ್ರಕಟವಾದ ನಂತರ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೆಲ ಮಾಜಿ ನಟಿಯರು ತಮ್ಮ ಮೇಲಾದ ದೌರ್ಜನ್ಯಗಳನ್ನು ಬಹಿರಂಗಪಡಿಸಿದ ನಂತರ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಮಾಜಿ ನಟಿಯರು ತಮ್ಮ ಮೇಲಾದ ಶೋಷಣೆಗಳ ಬಗ್ಗೆ ಮಾಧ್ಯಮಗಳಿಗೆ ಬಹಿರಂಗಪಡಿಸಿದ ನಂತರ ಪೊಲೀಸರು ಚಿತ್ರರಂಗದ ವಿವಿಧ ವ್ಯಕ್ತಿಗಳ ವಿರುದ್ಧ 11 ಎಫ್ಐಆರ್​ಗಳನ್ನು ದಾಖಲಿಸಿದ್ದಾರೆ.

ಪ್ರಸ್ತುತ, ನಟ ಮತ್ತು ಸಿಪಿಐ (ಎಂ) ಶಾಸಕ ಮುಖೇಶ್ ಮಾಧವನ್, ನಿವಿನ್ ಪೌಲಿ, ಜಯಸೂರ್ಯ, ಎಡವೇಲಾ ಬಾಬು, ಮಣಿಯನ್ ಪಿಳ್ಳ ರಾಜು, ನಿರ್ದೇಶಕರಾದ ರಂಜಿತ್ ಮತ್ತು ಪ್ರಕಾಶ್ ಮತ್ತು ಪ್ರೊಡಕ್ಷನ್ ಎಕ್ಸಿಕ್ಯೂಟಿವ್​ಗಳಾದ ವಿಚು ಮತ್ತು ನೋಬಲ್ ಅವರು ಆರೋಪಿಗಳ ಪಟ್ಟಿಯಲ್ಲಿದ್ದಾರೆ. ಮುಖೇಶ್, ರಂಜಿತ್, ರಾಜು, ಪ್ರಕಾಶ್ ಮತ್ತು ಈಗ ಜಯಸೂರ್ಯ ಸೇರಿದಂತೆ ಇನ್ನೂ ಕೆಲವರು ಈಗಾಗಲೇ ನ್ಯಾಯಾಲಯಗಳಿಂದ ಜಾಮೀನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ತ್ರಿಪುರಾ: ಶಸ್ತ್ರಾಸ್ತ್ರ ತ್ಯಾಗಕ್ಕೆ ಸಜ್ಜಾದ 400 ಉಗ್ರರು - Tripura Militants To Lay Down Arms

ABOUT THE AUTHOR

...view details