ಕರ್ನಾಟಕ

karnataka

ETV Bharat / bharat

'ಮಹಿಳೆಯರಿಗೆ ಮಾಸಿಕ ₹3 ಸಾವಿರ, ಜಾತಿಗಣತಿ': ಪಂಚ ಗ್ಯಾರಂಟಿ ಘೋಷಿಸಿದ ಮಹಾ ವಿಕಾಸ್​ ಅಘಾಡಿ - FIVE GUARANTEES

ಮಹಾರಾಷ್ಟ್ರ ಚುನಾವಣೆ ರಂಗೇರಿದ್ದು, ಕಾಂಗ್ರೆಸ್​​ ನೇತೃತ್ವದ ಮಹಾ ವಿಕಾಸ್​​ ಅಘಾಡಿಯು (ಎಂವಿಎ) ಪಂಚ ಗ್ಯಾರಂಟಿಗಳ ಪ್ರಣಾಳಿಕೆಯನ್ನು ಭಾನುವಾರ ಅನಾವರಣ ಮಾಡಿತು.

ಪಂಚ ಗ್ಯಾರಂಟಿ ಘೋಷಿಸಿದ ಮಹಾ ವಿಕಾಸ್​ ಅಘಾಡಿ
ಪಂಚ ಗ್ಯಾರಂಟಿ ಘೋಷಿಸಿದ ಮಹಾ ವಿಕಾಸ್​ ಅಘಾಡಿ (ANI)

By ANI

Published : Nov 10, 2024, 3:55 PM IST

ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯನ್ನು ಒಳಗೊಂಡ ಮಹಾ ವಿಕಾಸ್ ಅಘಾಡಿ (MVA) ತನ್ನ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಎಂವಿಎ ನಾಯಕರು, ರಾಜ್ಯದಲ್ಲಿ ಜಾತಿ ಗಣತಿ, ಮಹಿಳೆಯರಿಗೆ ಮಾಸಿಕ 3 ಸಾವಿರ ರೂಪಾಯಿ, ಉಚಿತ ಬಸ್​ ಪ್ರಯಾಣ ಸೇರಿದಂತೆ ಐದು ಗ್ಯಾರಂಟಿಗಳನ್ನು ನೀಡುವ ಪ್ರಣಾಳಿಕೆಯನ್ನು ಅನಾವರಣಗೊಳಿಸಿದರು.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್​ಸಿಪಿಯ ಸುಪ್ರಿಯಾ ಸುಳೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಮಹಾರಾಷ್ಟ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಮೇಶ್ ಚೆನ್ನಿತ್ತಲ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಶಿವಸೇನಾ (ಯುಬಿಟಿ) ಮುಖಂಡರಾದ ಸಂಜಯ್ ರಾವತ್ ಮತ್ತು ಅರವಿಂದ್ ಸಾವಂತ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

'ಐದು ಗ್ಯಾರಂಟಿ'ಗಳು ಏನೇನು:ಮಹಾ ವಿಕಾಸ್​ ಅಘಾಡಿ ಮೈತ್ರಿಯು ಚುನಾವಣಾ ಪ್ರಣಾಳಿಕೆಯಲ್ಲಿ, ಜಾತಿ ಆಧಾರಿತ ಜನಗಣತಿ, ಮೀಸಲಾತಿ ಮೇಲಿನ ಶೇಕಡಾ 50ರಷ್ಟು ಮಿತಿಯನ್ನು ತೆಗೆದುಹಾಕುವ, ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಆರ್ಥಿಕ ನೆರವು, ಜೊತೆಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕೃಷಿ ಸಾಲ ಮನ್ನಾ, ರೈತರಿಗೆ 25 ಲಕ್ಷ ರೂಪಾಯಿ ಆರೋಗ್ಯ ವಿಮೆ ಭರವಸೆ ನೀಡಿದೆ.

ಮಹಿಳಾ ಸಶಕ್ತಿ ಗುರಿ:ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, "ಎಂವಿಎ ಮೈತ್ರಿಯ ಐದು ಗ್ಯಾರಂಟಿಗಳು ಮಹಾರಾಷ್ಟ್ರದ ಎಲ್ಲರ ಕಲ್ಯಾಣಕ್ಕೆ ಸಹಕಾರಿಯಾಗಲಿವೆ. ಪ್ರತಿ ಕುಟುಂಬಕ್ಕೆ ವಾರ್ಷಿಕ ಸುಮಾರು 3 ಲಕ್ಷ ರೂ.ಗಳ ನೆರವು ಸಿಗಲಿದೆ. ಮಹಾಲಕ್ಷ್ಮಿ ಯೋಜನೆಯು ಎಲ್ಲಾ ಮಹಿಳೆಯರನ್ನು ಆರ್ಥಿಕ ಸಶಕ್ತರನ್ನಾಗಿ ಮಾಡುತ್ತದೆ. ಪ್ರತಿ ತಿಂಗಳು 3 ಸಾವಿರ ರೂ. ನೆರವು ಸಿಗಲಿದೆ. ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಸೇವೆಯೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ನೀಡಲಿದೆ" ಎಂದು ಹೇಳಿದರು.

ವಿಧಾನಸಭೆಯ 288 ಸ್ಥಾನಗಳಿಗೆ ನವೆಂಬರ್ 20 ರಂದು ಮತದಾನ ನಿಗದಿಯಾಗಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಎರಡು ಮೈತ್ರಿಗಳಾದ ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿ ನಡುವೆ ರಾಜಕೀಯ ಕದನ ತೀವ್ರಗೊಂಡಿದೆ.

ಇದಕ್ಕೂ ಮೊದಲು, ಭಾರತೀಯ ಜನತಾ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು ಸೇರಿದಂತೆ ಒಟ್ಟು 25 ಭರವಸೆಗಳನ್ನು ಘೋಷಿಸಿದೆ.

ಇದನ್ನೂ ಓದಿ:ಮಹಿಳೆಯರಿಗೆ ತಿಂಗಳಿಗೆ 2,100 ರೂ., ರೈತರ ಸಾಲ ಮನ್ನಾ: 'ಮಹಾ' ಬಿಜೆಪಿ ಪ್ರಣಾಳಿಕೆಯಲ್ಲಿ ಭರಪೂರ ಭರವಸೆ

ABOUT THE AUTHOR

...view details