ನವದೆಹಲಿ: ಚೀನಾ ನಮ್ಮ ಶತ್ರುವಲ್ಲ ಎಂಬ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಪಿತ್ರೋಡಾ ಅವರ ಅಭಿಪ್ರಾಯಗಳು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಪಕ್ಷದ ಸಂವಹನ ಉಸ್ತುವಾರಿಯೂ ಆಗಿರುವ ಕಾಂಗ್ರೆಸ್ ನ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಚೀನಾದ ಬಗ್ಗೆ ಸ್ಯಾಮ್ ಪಿತ್ರೋಡಾ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಖಂಡಿತವಾಗಿಯೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಭಿಪ್ರಾಯಗಳಲ್ಲ. ಚೀನಾ ನಮ್ಮ ಅತಿದೊಡ್ಡ ವಿದೇಶಾಂಗ ನೀತಿ, ಬಾಹ್ಯ ಭದ್ರತೆ ಮತ್ತು ಆರ್ಥಿಕ ಸವಾಲಾಗಿ ಮುಂದುವರೆದಿದೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಆಗಾಗ ತಮ್ಮ ಹೇಳಿಕೆಗಳಿಂದ ಪಕ್ಷವನ್ನು ವಿವಾದಗಳಲ್ಲಿ ಸಿಲುಕಿಸುವ ಪಿತ್ರೋಡಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತವು ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆಯಿದೆ ಮತ್ತು ಚೀನಾ ಶತ್ರು ಎಂದು ಭಾವಿಸುವುದನ್ನು ನವದೆಹಲಿ ನಿಲ್ಲಿಸಬೇಕು ಎಂದು ಹೇಳಿದ್ದರು.
"ಈ ಹಿಂದಿನಿಂದಲೂ ಚೀನಾ ಶತ್ರು ಎಂದು ಭಾವಿಸುತ್ತಿರುವ ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಚೀನಾಕ್ಕೆ ಮಾತ್ರವಲ್ಲ, ಎಲ್ಲರಿಗೂ ಅನ್ವಯಿಸುತ್ತದೆ. ಚೀನಾದಿಂದ ಭಾರತಕ್ಕೆ ಯಾವ ರೀತಿಯ ಅಪಾಯವಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅಮೆರಿಕವು ಶತ್ರುವನ್ನು ವ್ಯಾಖ್ಯಾನಿಸುವ ಅಭ್ಯಾಸ ಹೊಂದಿರುವುದರಿಂದ ಈ ವಿಷಯವು ಆಗಾಗ ಮಿತಿಮೀರುತ್ತಿದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಸುದ್ದಿ ಸಂಸ್ಥೆ ಐಎಎನ್ಎಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಸಾಗರೋತ್ತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಿತ್ರೋಡಾ ಅವರು ದೇಶದ ವೈವಿಧ್ಯತೆಯ ಬಗ್ಗೆ ನೀಡಿದ ಹೇಳಿಕೆಯು ಭಾರಿ ವಿವಾದ ಹುಟ್ಟು ಹಾಕಿತ್ತು. ಅದರ ನಂತರ ಈಗ ಅವರು ಚೀನಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಿತ್ರೋಡಾ ತಮ್ಮ ಹೇಳಿಕೆಯ ಸಂದರ್ಭವನ್ನು ವಿವರಿಸಿ, ಬಿಜೆಪಿ ಅದನ್ನು ದುರುದ್ದೇಶಪೂರಿತವಾಗಿ ತಪ್ಪಾಗಿ ಅರ್ಥೈಸಿದೆ ಎಂದು ವಿವರಿಸಿದ ನಂತರ ಜೂನ್ನಲ್ಲಿ ಅವರನ್ನು ಪುನಃ ಸಾಗರೋತ್ತರ ಭಾರತೀಯ ಕಾಂಗ್ರೆಸ್ಗೆ ನೇಮಿಸಲಾಗಿತ್ತು. ಭವಿಷ್ಯದಲ್ಲಿ ವಿವಾದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಿತ್ರೋಡಾ ಭರವಸೆ ನೀಡಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದರು. ಇದನ್ನು ತೀವ್ರವಾಗಿ ವಿರೋಧಿಸಿದ್ದ ಪಿತ್ರೋಡಾ, ಇದು ರಮೇಶ್ ಅವರ ವೈಯಕ್ತಿಕ ಅಭಿಪ್ರಾಯ ಮಾತ್ರ ಎಂದು ಹೇಳಿದ್ದರು.
ಭಾರತದ ಒಂದಿಷ್ಟು ಭೂಪ್ರದೇಶವನ್ನು ಚೀನಾ ಕಬಳಿಸಿದೆ ಎಂದು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರತಿಪಾದಿಸಿದ್ದರು. ಸದ್ಯ ಚೀನಾ ನಮ್ಮ ಶತ್ರುವಲ್ಲ ಎಂಬ ಪಿತ್ರೋಡಾ ಅವರ ಹೇಳಿಕೆಯಿಂದ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ.
ಇದನ್ನೂ ಓದಿ : 'ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ': ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಮಂಡಳಿ - CBSE EXAM