ನವದೆಹಲಿ: ಪ್ರಾರ್ಥನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ 1991ಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ ಮೊದಲ ವಾರಕ್ಕೆ ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಈ ವಿಷಯವನ್ನು ಮೂವರು ನ್ಯಾಯಾಧೀಶರ ಪೀಠವು ವಿಚಾರಣೆ ನಡೆಸಲಿದೆ ಎಂದು ಸೋಮವಾರ ತಿಳಿಸಿತು.
ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿದ್ದ ಸ್ಥಳದ ಧಾರ್ಮಿಕ ಸ್ವರೂಪವನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991 ರ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಲವಾರು ಹೊಸ ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಬೆಳಿಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
ಕಕ್ಷಿದಾರರೊಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಇವತ್ತಿನ ದಿನದಂದು ಹೊಸ ಅರ್ಜಿಯೊಂದನ್ನು ಸಲ್ಲಿಸಿ ಅದರ ಬಗ್ಗೆ ವಿಚಾರಣೆ ನಡೆಸಬೇಕೆಂದು ಕೋರಿದಾಗ, "ನಾವು ಇಂದು ಅದನ್ನು ವಿಚಾರಣೆ ನಡೆಸಲು ಸಾಧ್ಯವಾಗದಿರಬಹುದು" ಎಂದು ಸಿಜೆಐ ಹೇಳಿದರು. ದಿನದ ಕಲಾಪದ ಆರಂಭದಲ್ಲಿ ಹಿರಿಯ ವಕೀಲೆ ಜೈಸಿಂಗ್ ಈ ವಿಷಯವನ್ನು ಪ್ರಸ್ತಾಪಿಸಿದರು.
"ಅರ್ಜಿಗಳನ್ನು ಸಲ್ಲಿಸಲು ಒಂದು ಮಿತಿ ಇದೆ. ಅನೇಕ ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿವೆ. ನಾವು ಅವುಗಳೆಲ್ಲವನ್ನೂ ವಿಚಾರಣೆ ನಡೆಸಲು ಸಾಧ್ಯವಾಗದಿರಬಹುದು" ಎಂದು ಹೇಳಿದ ಸಿಜೆಐ, ಮಾರ್ಚ್ನಲ್ಲಿ ವಿಚಾರಣೆಯ ದಿನಾಂಕ ನಿಗದಿಪಡಿಸಬಹುದು ಎಂದರು.
ವಾರಣಾಸಿಯ ಜ್ಞಾನವಾಪಿ, ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು ಸಂಭಾಲ್ನ ಶಾಹಿ ಜಾಮಾ ಮಸೀದಿ ಸೇರಿದಂತೆ 10 ಮಸೀದಿಗಳ ಮೂಲ ಧಾರ್ಮಿಕ ಸ್ವರೂಪವನ್ನು ಕಂಡುಹಿಡಿಯಲು ಸಮೀಕ್ಷೆ ನಡೆಸುವಂತೆ ಕೋರಿ ವಿವಿಧ ಹಿಂದೂ ಪಕ್ಷಗಳು ಸಲ್ಲಿಸಿದ ಸುಮಾರು 18 ಮೊಕದ್ದಮೆಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತನ್ನ ಡಿಸೆಂಬರ್ 12, 2024 ರ ಆದೇಶದ ಮೂಲಕ ಸ್ಥಗಿತಗೊಳಿಸಿತ್ತು. ಫೆಬ್ರವರಿ 17 ರಂದು ವಿಚಾರಣೆಗಾಗಿ ಅದು ಎಲ್ಲಾ ಅರ್ಜಿಗಳನ್ನು ಪಟ್ಟಿ ಮಾಡಿತ್ತು.
1991 ರ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಕೋರಿ ಡಿಸೆಂಬರ್ 12 ರ ನಂತರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಸಮಾಜವಾದಿ ಪಕ್ಷದ ಮುಖಂಡ ಮತ್ತು ಕೈರಾನಾ ಸಂಸದ ಇಕ್ರಾ ಚೌಧರಿ ಮತ್ತು ಕಾಂಗ್ರೆಸ್ ಪಕ್ಷದಿಂದ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ. 1991 ರ ಕಾನೂನಿನ ನಿಬಂಧನೆಗಳ ಸಿಂಧುತ್ವದ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಹಿಂದೂ ಸಂಘಟನೆಯಾದ ಅಖಿಲ ಭಾರತೀಯ ಸಂತ ಸಮಿತಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ : ಅಮೆರಿಕದಿಂದ ಅಕ್ರಮ ವಲಸಿಗರ ಗಡೀಪಾರು: 112 ಮಂದಿ ಭಾರತೀಯರ 3ನೇ ಬ್ಯಾಚ್ ಅಮೃತಸರಕ್ಕೆ ಆಗಮನ - THIRD BATCH DEPORTED INDIANS