ಕರ್ನಾಟಕ

karnataka

By ETV Bharat Karnataka Team

Published : Apr 4, 2024, 11:40 AM IST

ETV Bharat / bharat

ಲೋಕಸಭೆ ಚುನಾವಣೆ: ಬಂಗಾಳದಲ್ಲಿ ಇಂದು ಮೋದಿ - ದೀದಿ ಚುನಾವಣಾ ಪ್ರಚಾರ - Lok Sabha Election

ಬಂಗಾಳದ ಕೂಚ್​ ಬಿಹಾರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಅವರು ಇಂದು ಚುನಾವಣಾ ರ್‍ಯಾಲಿ ನಡೆಸಲಿದ್ದಾರೆ.

ಮೋದಿ-ದೀದಿ ಚುನಾವಣಾ ಪ್ರಚಾರ
ಮೋದಿ-ದೀದಿ ಚುನಾವಣಾ ಪ್ರಚಾರ

ಕೋಲ್ಕತ್ತಾ (ಪಶ್ಚಿಮಬಂಗಾಳ):ರಾಜಕೀಯ ಬದ್ಧವೈರಿಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಮಧ್ಯೆ ಇಂದು ಚುನಾವಣಾ ಪ್ರಚಾರಕ್ಕೆ ಕೂಚ್​ ಬೆಹಾರ್​ ವೇದಿಕೆಯಾಗಲಿದೆ. ಮಮತಾ ಅವರು ಮೊದಲು ಪ್ರಚಾರ ಮಾಡಿದರೆ, ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕ ಕದನಕ್ಕೆ ಕಿಕ್​​ಸ್ಟಾರ್ಟ್​ ನೀಡಲಿದ್ದಾರೆ.

ಕೇಸರಿ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾದ ಉತ್ತರ ಬಂಗಾಳದಲ್ಲಿ 2019 ರ ಅಲೆ ಮುಂದುವರಿಸಲು ಯತ್ನಿಸಿದರೆ, ಇದನ್ನು ಅಲುಗಾಡಿಸಲು ತೃಣಮೂಲ ಕಾಂಗ್ರೆಸ್ ಈ ಬಾರಿ ಭರ್ಜರಿ ಹೋರಾಟ ನಡೆಸಲು ಸಜ್ಜಾಗಿದೆ. ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಮತ್ತು ಟಿಎಂಸಿ ಸಚಿವ ನಾಯಕ ಉದಯನ್ ಗುಹಾ ಅವರ ಬೆಂಬಲಿಗರ ನಡುವೆ ದೊಡ್ಡ ಸಂಘರ್ಷಕ್ಕೆ ಕಾರಣವಾಗಿತ್ತು.

ಕಣ ಲೆಕ್ಕಾಚಾರ:ಕೂಚ್​ ಬೆಹಾರ್​ ಕ್ಷೇತ್ರವು ಪ್ರತಿಷ್ಠೆ ಕಣವಾಗಿದ್ದು, ಎರಡೂ ಪಕ್ಷಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ. ಬಿಜೆಪಿಯಿಂದ ನಿಸಿತ್ ಪ್ರಮಾಣಿಕ್ ಅವರು ಮತ್ತೊಮ್ಮೆ ಸ್ಪರ್ಧಿಸುತ್ತಿದ್ದರೆ, ಎದುರಾಳಿಯಾಗಿ ಟಿಎಂಸಿಯ ರಾಜಬಂಶಿ ಸಮುದಾಯದ ಜಗದೀಶ್ ಬರ್ಮಾ ಬಸುನಿಯಾ ಅವರು ಕಣದಲ್ಲಿದ್ದಾರೆ.

ಕೂಚ್ ಬೆಹಾರ್‌ ಕ್ಷೇತ್ರದ ಜನರು ಈ ಹಿಂದೆನಿಂದಲೂ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದಾರೆ. ಬಿಜೆಪಿ ಸಂಸದ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕ್ರಮಗಳು ಪಕ್ಷಕ್ಕೆ ಸತತ ಎರಡನೇ ಅವಧಿಯ ವಿಜಯವನ್ನು ತಂದುಕೊಡುತ್ತದಾ ಎಂಬುದು ಪ್ರಶ್ನೆಯಾಗಿದೆ. ಇದಕ್ಕೆ ಜೂನ್​ 4 ರಂದು ಉತ್ತರ ಸಿಗಲಿದೆ.

ಕಳೆದ ಎರಡು ವರ್ಷಗಳಲ್ಲಿ, ಟಿಎಂಸಿ ತಳಮಟ್ಟದಲ್ಲಿ ಬಿಜೆಪಿಯನ್ನು ಸೋಲಿಸಲು ಕೆಲಸ ಮಾಡಿದೆ. ಜನರಿಗೆ ಪ್ರಯೋಜನಕಾರಿಯಾದ ಜನಪ್ರಿಯ ಯೋಜನೆಗಳನ್ನು ಇಲ್ಲಿ ಜಾರಿ ಮಾಡಿದೆ. ಮಮತಾ ಬ್ಯಾನರ್ಜಿ ಅವರೇ ಖುದ್ದಾಗಿ ಈ ಕ್ಷೇತ್ರದ ಮೇಲೆ ನಿಗಾ ವಹಿಸಿದ್ದಾರೆ. ಜಲ್​​ಪೈಗುರಿಯಲ್ಲಿ ಅಪ್ಪಳಿಸಿದ ಬೃಹತ್ ಚಂಡಮಾರುತದ ನಂತರ ಪರಿಹಾರ ಕಾರ್ಯದ ಮೇಲ್ವಿಚಾರಣೆ, ಜನ ಸಂಪರ್ಕ ಬೆಳೆಸುತ್ತಿದ್ದಾರೆ.

ಕಮಲ ಪಕ್ಷದ ಹಿಡಿತ ಸಡಿಲಿಸುತ್ತಾ ಟಿಎಂಸಿ?:ಕೂಚ್ ಬೆಹಾರ್ ಕ್ಷೇತ್ರವು ಪ್ರಸ್ತುತ ಬಿಜೆಪಿಯ ಭದ್ರಕೋಟೆಯಾಗಿದೆ. 2021 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಯ ಗಮನಾರ್ಹ ವಿಜಯದ ಹೊರತಾಗಿಯೂ 7 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳನ್ನು ಪಡೆದುಕೊಂಡಿದೆ. ಹಾಲಿ ಸಂಸದ ನಿಸಿತ್ ಪ್ರಮಾಣಿಕ್ ಕೂಡ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ಕೂಚ್ ಬೆಹಾರ್‌ನ ಜನರು ಬಿಜೆಪಿಯ 'ಗೂಂಡಾರಾಜ್'ನಿಂದ ಹೊರಬರಲು ಬಯಸಿದ್ದಾರೆ ಎಂದು ಟಿಎಂಸಿ ಪ್ರತಿಪಾದಿಸುತ್ತಿದೆ. ಈ ಭಾವನೆಯು ಚುನಾವಣೆಯಲ್ಲಿ ಸ್ಪಷ್ಟವಾಗುತ್ತದೆ. ನಾವು ಗಣನೀಯ ಅಂತರದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದು ಸಚಿವ ಉದಯನ್ ಗುಹಾ ಹೇಳಿದ್ದಾರೆ. ಬಿಜೆಪಿಯ ಪ್ರಮಾಣಿಕ್ ಮತ್ತು ಟಿಎಂಸಿಯ ಗುಹಾ ಅವರ ಇಬ್ಬರ ನಡುವೆ ಹಲವು ವರ್ಷಗಳಿಂದ ರಾಜಕೀಯ ಕಿತ್ತಾಟದ ಕ್ಷೇತ್ರವಾಗಿ ಇದು ಉಳಿದುಕೊಂಡಿದೆ. ಇಬ್ಬರೂ ನಾಯಕರು ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದು, ತಮ್ಮ ತವರು ನೆಲದಲ್ಲಿ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಕೂಚ್​ ಬಿಹಾರ್​ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚುನಾವಣಾ ರ್‍ಯಾಲಿ ನಡೆಸಲಿದ್ದಾರೆ. ಇದು ಬಂಗಾಳದಲ್ಲಿ ಮೋದಿ ಅವರ ಮೊದಲ ರ್‍ಯಾಲಿಯಾಗಿದೆ.

ಇದನ್ನೂ ಓದಿ:ಸುಮಲತಾಗೆ ಬಿಜೆಪಿಯಲ್ಲಿ ಉತ್ತಮ ಭವಿಷ್ಯವಿದೆ: ರಾಧಾಮೋಹನ್ ದಾಸ್ ಅಗರ್‌ವಾಲ್ - Sumalatha

ABOUT THE AUTHOR

...view details