ಕರ್ನಾಟಕ

karnataka

ETV Bharat / bharat

ಲಡಾಖ್‌ಗೆ ರಾಜ್ಯದ ಸ್ಥಾನಮಾನ: ಮರು ಹೋರಾಟಕ್ಕೆ ಎಲ್‌ಎಬಿ, ಕೆಡಿಎ ಸಜ್ಜು - Statehood for Ladakh

ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ 6ನೇ ಪರಿಚ್ಛೇದ ಅಡಿ ಸೇರಿಸಬೇಕು ಎಂಬುದು ಸೇರಿ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮರು ಹೋರಾಟಕ್ಕೆ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ನಿರ್ಧರಿಸಿವೆ. ಈ ಬಗ್ಗೆ 'ಈಟಿವಿ ಭಾರತ್​'ನ ಗೌತಮ್ ಡೆಬ್ರಾಯ್ ಅವರ ವರದಿ ಇಲ್ಲಿದೆ.

LAB and KDA to Resume Agitation Demanding Statehood for Ladakh and Sixth Schedule
ಲಡಾಖ್‌ಗೆ ರಾಜ್ಯದ ಸ್ಥಾನಮಾನ: ಮರು ಹೋರಾಟಕ್ಕೆ ಎಲ್‌ಎಬಿ, ಕೆಡಿಎ ಸಜ್ಜು

By ETV Bharat Karnataka Team

Published : Mar 6, 2024, 8:47 PM IST

ನವದೆಹಲಿ:ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಸಂಘಟನೆಗಳು ತಮ್ಮ ಆಂದೋಲನವನ್ನು ಮುಂದುವರಿಸಲು ನಿರ್ಧರಿಸಿವೆ. ಇದೇ ವೇಳೆ, ಸಂವಿಧಾನದ 6ನೇ ಪರಿಚ್ಛೇದದ ಅಡಿ ರಕ್ಷಣಾತ್ಮಕ ಕ್ರಮಗಳನ್ನು 371ನೇ ವಿಧಿಯಡಿ ವಿಶೇಷ ನಿಬಂಧನೆಗಳ ಮೂಲಕ ಪರಿಹರಿಸಲು ಗೃಹ ಸಚಿವಾಲಯವು ಚಿಂತನೆ ಮಾಡುತ್ತಿದೆ.

ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್‌ನ ಹಿರಿಯ ಸದಸ್ಯ, ಕೆಡಿಎ ಸಹ ಅಧ್ಯಕ್ಷರೂ ಕಮರ್ ಅಲಿ ಅಖೂನ್ 'ಈಟಿವಿ ಭಾರತ್' ಜೊತೆ ಮಾತನಾಡಿ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಲಡಾಖ್‌ನ ಜನರ ಸಾಂವಿಧಾನಿಕ ಸುರಕ್ಷತೆಯನ್ನು ಕೇಂದ್ರ ಸರ್ಕಾರವು 371ನೇ ವಿಧಿಯ ಅಡಿಯಲ್ಲಿ ಖಚಿತಪಡಿಸುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ನಾವು ಪ್ರತ್ಯೇಕ ರಾಜ್ಯ ಮತ್ತು ಲಡಾಖ್​ಅನ್ನು ಸಂವಿಧಾನದ 6ನೇ ಪರಿಚ್ಛೇದ ಅಡಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು.

371ನೇ ವಿಧಿಯು ಆರ್ಥಿಕ ಮತ್ತು ಸಾಂಸ್ಕೃತಿಕ ಹಿತಾಸಕ್ತಿಗಳ ರಕ್ಷಣೆ, ಸ್ಥಳೀಯ ಸವಾಲುಗಳನ್ನು ಎದುರಿಸಲು ಮತ್ತು ನಿರ್ದಿಷ್ಟ ಪ್ರದೇಶದ ಸಾಂಪ್ರದಾಯಿಕ ಕಾನೂನುಗಳನ್ನು ರಕ್ಷಿಸುತ್ತದೆ. 371ನೇ ವಿಧಿಯಡಿ ವಿಶೇಷ ನಿಬಂಧನೆಗಳು ಮಹಾರಾಷ್ಟ್ರ, ಈಶಾನ್ಯ ರಾಜ್ಯಗಳಾದ ಸಿಕ್ಕೀಂ, ಮಿಜೋರಾಂ, ಅರುಣಾಚಲ ಪ್ರದೇಶ, ಅಸ್ಸೋಂ, ನಾಗಾಲ್ಯಾಂಡ್, ಮಣಿಪುರದಲ್ಲಿ ಜಾರಿಯಲ್ಲಿವೆ.

ಲಡಾಖ್‌ನ ಎಲ್​ಎಬಿ ಮತ್ತು ಕೆಡಿಎಯ ಆರು ಸದಸ್ಯರ ನಿಯೋಗವು ಶನಿವಾರ ದೆಹಲಿಯಲ್ಲಿ ಗೃಹ ಸಚಿವ ಅಮಿತ್​ ಶಾ ಮತ್ತು ಲಡಾಖ್‌ನ ಸಮಸ್ಯೆಗಳನ್ನು ಪರಿಶೀಲಿಸಲು ರಚಿಸಲಾದ ಉನ್ನತ ಅಧಿಕಾರ ಸಮಿತಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತ್ತು. ಈ ಸಭೆಯು ಸಕಾರಾತ್ಮಕವಾಗಿರಲಿಲ್ಲ. ಸರ್ಕಾರದ ಪ್ರತಿನಿಧಿಗಳು ಅಥವಾ ಗೃಹ ಸಚಿವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಲಡಾಖ್‌ಗೆ ರಾಜ್ಯ ಸ್ಥಾನಮಾನ, ಸಂವಿಧಾನದ 6ನೇ ಪರಿಚ್ಛೇದ ರಕ್ಷಣೆ, ಎರಡು ಲೋಕಸಭಾ ಸ್ಥಾನಗಳು ಮತ್ತು ಯುವಕರಿಗೆ ಉದ್ಯೋಗಾವಕಾಶಗಳು ಸೇರಿದಂತೆ ನಾಲ್ಕು ಅಂಶಗಳ ಬೇಡಿಕೆ ನಮ್ಮದಾಗಿದೆ ಎಂದು ಅಖೂನ್ ಹೇಳಿದರು.

ರಾಜ್ಯತ್ವ ಮತ್ತು 6ನೇ ಪರಿಚ್ಛೇದದ ಬಗ್ಗೆ ನಮಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಎರಡು ಪ್ರತ್ಯೇಕ ಸಂಸದೀಯ ಸ್ಥಾನಗಳ ನಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಗೃಹ ಸಚಿವರು 2026ರಲ್ಲಿ ನಡೆಯುವ ಕ್ಷೇತ್ರಪುನರ್​ವಿಂಗಡನೆ ಪ್ರಕ್ರಿಯೆಯಲ್ಲಿ ಅದು ಸಾಕಾರಗೊಳ್ಳಲಿದೆ ಎಂದಿದ್ದಾರೆ. ಉದ್ಯೋಗಗಳು, ಭೂಮಿ ಮತ್ತು ಗುರುತಿನ ಉದ್ಯೋಗದ ಸಮಸ್ಯೆಯನ್ನು 371ನೇ ವಿಧಿಯ ಮೂಲಕ ಪರಿಹರಿಸಲಾಗುವುದು ಎಂಬುವುದಾಗಿ ಅಮಿತ್ ಶಾ ತಿಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

2019ರಲ್ಲಿ ಲಡಾಖ್‌ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಬಳಿಕ ಪ್ರತ್ಯೇಕ ರಾಜ್ಯ ಮತ್ತು 6ನೇ ಪರಿಚ್ಛೇದದ ಬೇಡಿಕೆಯನ್ನು ಕೇಂದ್ರವು ತಿರಸ್ಕರಿಸಿತ್ತು. ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಸ್ವಾಯತ್ತ ಜಿಲ್ಲಾ ಮಂಡಳಿಗಳು ನಿರ್ದಿಷ್ಟ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಆರ್ಥಿಕ ಅಧಿಕಾರಗಳನ್ನು ಹೊಂದಿವೆ. ಮೇಘಾಲಯ, ತ್ರಿಪುರಾ, ಮಿಜೋರಾಂ ಮತ್ತು ಅಸ್ಸಾಂನ ಬುಡಕಟ್ಟು ಪ್ರದೇಶಗಳಲ್ಲಿ 6ನೇ ಪರಿಚ್ಛೇದ ಜಾರಿಯಲ್ಲಿದೆ. ಭೂಮಿ, ಕಾಡುಗಳು, ಕಾಲುವೆ ನೀರು, ಸಾಗುವಳಿ ಬದಲಾವಣೆ, ಗ್ರಾಮ ಆಡಳಿತ, ಆಸ್ತಿಯ ಉತ್ತರಾಧಿಕಾರ, ಮದುವೆ ಮತ್ತು ವಿಚ್ಛೇದನ ಮತ್ತು ಸಾಮಾಜಿಕ ಪದ್ಧತಿಗಳಂತಹ ಕೆಲವು ನಿರ್ದಿಷ್ಟ ವಿಷಯಗಳ ಮೇಲೆ ಕಾನೂನುಗಳನ್ನು ಮಾಡಬಹುದಾಗಿದೆ.

ಇದೇ ವಿಷಯದ ಬಗ್ಗೆ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್‌ನ ಹಿರಿಯ ಸದಸ್ಯ ಸಜ್ಜದ್ ಕಾರ್ಗಿಲಿ ಮಾತನಾಡಿ, ಪ್ರತ್ಯೇಕ ರಾಜ್ಯ ಮತ್ತು 6ನೇ ಪರಿಚ್ಛೇದದ ಬೇಡಿಕೆಗೆ ಸರ್ಕಾರ ಯಾವುದೇ ಸಕಾರಾತ್ಮಕ ಸ್ಪಂದನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. 6ನೇ ಪರಿಚ್ಛೇದದ ಮತ್ತು ಲಡಾಖ್‌ನ ರಾಜ್ಯತ್ವಕ್ಕಾಗಿ ನಾವು ನಮ್ಮ ಬೇಡಿಕೆಯನ್ನು ಹಿಂಪಡೆಯುವುದಿಲ್ಲ. 371 ವಿಧಿ ಅಥವಾ ಬೇರೆ ಯಾವುದನ್ನಾದರೂ ಒದಗಿಸುತ್ತಾರೆಯೇ ಎಂಬುದು ಗೃಹ ಸಚಿವಾಲಯಕ್ಕೆ ಬಿಟ್ಟ ವಿಷಯ. ಆದರೆ, ನಾವು 6ನೇ ಪರಿಚ್ಛೇದದ ನಮ್ಮ ಬೇಡಿಕೆಯನ್ನು ಮುಂದುವರಿಸುತ್ತೇವೆ ಎಂದು ಕಾರ್ಗಿಲಿ ಹೇಳಿದರು.

ಇದನ್ನೂ ಓದಿ:ಸಂದೇಶ್​ಖಾಲಿ ಮಹಿಳಾ ಸಂತ್ರಸ್ತರ ಭೇಟಿಯಾದ ಪ್ರಧಾನಿ; ನ್ಯಾಯಕ್ಕೆ ಮೊರೆಯಿಟ್ಟ ಮಹಿಳೆಯರು

ABOUT THE AUTHOR

...view details