ಕರ್ನಾಟಕ

karnataka

ಪುರಿ ಜಗನ್ನಾಥ ದೇಗುಲದ 'ರತ್ನಭಂಡಾರ' ಸ್ಥಳಾಂತರ ಪೂರ್ಣ; ನಿಧಿ ಬಗ್ಗೆ ಸಮಿತಿ ಹೇಳಿದ್ದೇನು? - Puri Jagannath Ratna Bhandar

By PTI

Published : Jul 19, 2024, 12:14 PM IST

ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದಲ್ಲಿನ ಬೆಲೆಬಾಳುವ ವಸ್ತುಗಳು ಮತ್ತು ಆಭರಣಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿತು.

ಪುರಿ ಜಗನ್ನಾಥ ದೇಗುಲದ ರತ್ನಭಂಡಾರ
ಸಾಂದರ್ಭಿಕ ಚಿತ್ರ (ETV Bharat)

ಪುರಿ(ಒಡಿಶಾ):12ನೇ ಶತಮಾನದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನಭಂಡಾರದ ಒಳಕೋಣೆಯೊಳಗಿನ ಅತ್ಯಮೂಲ್ಯ ವಸ್ತುಗಳು ಮತ್ತು ಆಭರಣಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. 46 ವರ್ಷಗಳ ನಂತರ ಜುಲೈ 14ರಂದು ರತ್ನಭಂಡಾರದ ಒಳಗಿನ ಖಜಾನೆ ಮತ್ತು ಹೊರ ಖಜಾನೆಯನ್ನು ತೆರೆಯಲಾಗಿದ್ದು, ಈ ಒಂದು ವಾರದೊಳಗೆ ಒಳಕೋಣೆಯನ್ನು ಎರಡನೇ ಬಾರಿಗೆ ತೆರೆಯಲಾಗಿದೆ.

ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ, ಒಡಿಶಾ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ಸೇರಿದಂತೆ 11 ಸದಸ್ಯರ ತಂಡ ಬೆಳಗ್ಗೆ 9.51ಕ್ಕೆ ರತ್ನಭಂಡಾರವನ್ನು ತೆರೆಯಿತು. ಖಜಾನೆ ತೆರೆಯುವ ಮುನ್ನ ಸಮಿತಿಯು ಸುಗಮ ಕಾರ್ಯಾಚರಣೆಗಾಗಿ ಜಗನ್ನಾಥನ ಆಶೀರ್ವಾದ ಪಡೆಯಿತು.

ಸ್ಥಳಾಂತರ ಪೂರ್ಣಗೊಂಡ ಬಳಿಕ ಶ್ರೀ ಜಗನ್ನಾಥ ದೇವಾಲಯದ ಆಡಳಿತ (ಎಸ್‌ಜೆಟಿಎ) ಮುಖ್ಯಸ್ಥ ಅರಬಿಂದ ಪಾಧಿ ಸುದ್ದಿಗಾರರೊಂದಿಗೆ ಮಾತನಾಡಿ, ''ರತ್ನಭಂಡಾರದ ಒಳಕೋಣೆಯಿಂದ ಎಲ್ಲ ಬೆಲೆಬಾಳುವ ವಸ್ತುಗಳನ್ನು ದೇವಾಲಯದ ಸಂಕೀರ್ಣದೊಳಗಿನ ತಾತ್ಕಾಲಿಕ ಸ್ಟ್ರಾಂಗ್ ರೂಮ್‌ಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಮರದ ಮತ್ತು ಉಕ್ಕಿನ ಅಲ್ಮಿರಾಗಳು ಸೇರಿದಂತೆ ಏಳು ಕಂಟೇನರ್‌ಗಳನ್ನು ಒಳಗೊಂಡಿರುವ ಸಂಪೂರ್ಣ ಸ್ಥಳಾಂತರ ಪ್ರಕ್ರಿಯೆ ಏಳು ಗಂಟೆ ತೆಗೆದುಕೊಂಡಿತು. ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ಮಾರ್ಗಸೂಚಿಗಳ ಪ್ರಕಾರ, ಒಳಗಿನ ಕೋಣೆ ಮತ್ತು ತಾತ್ಕಾಲಿಕ ಸ್ಟ್ರಾಂಗ್ ರೂಮ್ ಎರಡನ್ನೂ ಲಾಕ್ ಮಾಡಿ, ಸೀಲ್ ಮಾಡಲಾಗಿದೆ'' ಎಂದು ಹೇಳಿದರು.

ನಿಧಿಗಳ ವಿವರ ಗೌಪ್ಯ -ನ್ಯಾ.ರಾತ್:ಮಾಜಿ ನ್ಯಾ.ಬಿಸ್ವನಾಥ್ ರಾತ್ ಮಾತನಾಡಿ, ''ಒಳಗಿನ ಕೊಠಡಿಯೊಳಗಿನ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಮೂರು ಮರದ ಅಲ್ಮೆರಾಗಳು, ಎರಡು ಮರದ ಪೆಟ್ಟಿಗೆಗಳು ಮತ್ತು ಸ್ಟೀಲ್ ಅಲ್ಮಿರಾ ಮತ್ತು ಕಬ್ಬಿಣದ ಪೆಟ್ಟಿಗೆಗಳು ಒಳಗೊಂಡಿರುವ ಏಳು ಕಂಟೇನರ್‌ಗಳಲ್ಲಿ ಸಂಗ್ರಹಿಸಲಾಗಿದೆ. ಸ್ಟ್ರಾಂಗ್ ರೂಮ್​ ಕೀಗಳನ್ನು ಪುರಿ ಜಿಲ್ಲಾಧಿಕಾರಿಗೆ ನೀಡಲಾಗಿದೆ'' ಎಂದು ಮಾಹಿತಿ ನೀಡಿದರು.

ಇದೇ ವೇಳೆ, ಒಟ್ಟು ನಿಧಿಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ನ್ಯಾ.ರಾತ್, ''ಒಳಗಿನ ಕೊಠಡಿಯೊಳಗೆ ನಾವು ನೋಡಿದ ಸಂಗತಿಗಳು ಗೌಪ್ಯವಾಗಿರುತ್ತವೆ. ನಾವು ನಮ್ಮ ಸ್ವಂತ ಮನೆಯ ಬೆಲೆಬಾಳುವ ವಸ್ತುಗಳನ್ನು ಬಹಿರಂಗಪಡಿಸುವುದಿಲ್ಲ. ಅದೇ ರೀತಿ ಭಗವಂತನ ಸಂಪತ್ತನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಉಚಿತವಲ್ಲ'' ಎಂದು ಹೇಳಿದರು.

ಇದೇ ವೇಳೆ, ಖಜಾನೆಯ ಕೋಣೆಯಲ್ಲಿ ಸುರಂಗಗಳು ಮತ್ತು ಹೆಚ್ಚುವರಿ ಕೋಣೆಗಳು ಬಗ್ಗೆ ಸಾರ್ವಜನಿಕ ಚರ್ಚೆಗಳನ್ನು ಉಲ್ಲೇಖಿಸುತ್ತಾ, ''ರತ್ನಭಂಡಾರದ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುವುದನ್ನು ನಿಲ್ಲಿಸಬೇಕು'' ಎಂದು ಸಾಮಾಜಿಕ ಜಾಲತಾಣಿಗರು ಮತ್ತು ಮಾಧ್ಯಮಗಳಲ್ಲಿ ಮನವಿ ಮಾಡಿದರು.

ರತ್ನಭಂಡಾರದ ದುರಸ್ತಿ ಬಳಿಕ ವಸ್ತುಗಳ ಪಟ್ಟಿ ಸಿದ್ಧ: ಸ್ಥಳಾಂತರ ಪ್ರಕ್ರಿಯೆಯ ವೇಳೆ ಪುರಿ ಪಟ್ಟಣದ ರಾಜ ಗಜಪತಿ ಮಹಾರಾಜ ದಿವ್ಯ ಸಿಂಗ್ ದೇಬ್ ಸಹ ದೇವಾಲಯಕ್ಕೆ ಭೇಟಿ ನೀಡಿದರು. ''ಖಾತಾಶೇಜಾ (ಸ್ಟೋರ್ ರೂಮ್)ಅನ್ನು ತಾತ್ಕಾಲಿಕ ಸ್ಟ್ರಾಂಗ್ ರೂಂ ಆಗಿ ಬಳಸಲಾಗುತ್ತಿದೆ. ರತ್ನಭಂಡಾರದ ದುರಸ್ತಿ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮಾಡುತ್ತದೆ. ದುರಸ್ತಿ ಪೂರ್ಣಗೊಂಡ ನಂತರ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು'' ಎಂದು ಅವರು ತಿಳಿಸಿದರು. ಅಲ್ಲದೇ, ''ರತ್ನಭಂಡಾರದ ಹೊರಕೋಣೆಯನ್ನು ಸ್ಥಳಾಂತರಿಸಿ ಸ್ವಚ್ಛಗೊಳಿಸಲಾಗಿದೆ. 46 ವರ್ಷಗಳ ನಂತರ ತೆರೆದಿರುವುದರಿಂದ ಒಳಗಡೆ ದುರಸ್ತಿ ಮಾಡಬೇಕಿದೆ'' ಎಂದರು.

ಹಾವು ಇರಲಿಲ್ಲ:ಮತ್ತೊಂದೆಡೆ, ಸ್ಥಳಾಂತರ ಪ್ರಕ್ರಿಯೆಯ ಸಮಯದಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹಾವು ಹಿಡಿಯುವವರು, ಒಡಿಶಾ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಆದರೆ, ರತ್ನಭಂಡಾರದಲ್ಲಿ ಹಾವುಗಳು ಇರಲಿಲ್ಲ. ಹೀಗಾಗಿ ನಮ್ಮ ಸಹಾಯ ಪಡೆಯಲಿಲ್ಲ ಎಂದು ಸ್ನೇಕ್ ಹೆಲ್ಪ್‌ಲೈನ್ ಸದಸ್ಯ ಸುವೇಂದು ಮಲ್ಲಿಕ್ ಹೇಳಿದರು.

ಇದನ್ನೂ ಓದಿ:ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು 46 ವರ್ಷಗಳ ಬಳಿಕ ಓಪನ್: ರಹಸ್ಯ ಕೊಠಡಿಯೊಳಗೇನಿದೆ?

ABOUT THE AUTHOR

...view details