ನವದೆಹಲಿ: INDIA ಒಕ್ಕೂಟ ಒಗ್ಗಟ್ಟಿನಿಂದ ಹೋರಾಡಲು ಸಜ್ಜಾಗಿದೆ. ಜನವರಿ 31 ರಿಂದ ಪ್ರಾರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಕುರಿತು ಎನ್ಡಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು, ಹಾಗೂ ಮೋದಿ ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಎದುರಿಸಲಿದೆ ಎಂದು ಕಾಂಗ್ರೆಸ್ ನಾಯಕರು ಬುಧವಾರ ಹೇಳಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಅವರು ಜ.30 ರಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ರಾಹುಲ್ ಗಾಂಧಿ ಸೇರಿದಂತೆ ಇತರ ನಾಯಕರೊಂದಿಗೆ ಪಕ್ಷದ ಮುಂದಿನ ನಡೆ, ಕಾರ್ಯತಂತ್ರ ರಚನೆಗಳ ಬಗ್ಗೆ ಸಭೆ ನಡೆಸಲಿದ್ದಾರೆ. ಮತ್ತೊಂದು ಕಡೆ ಅಧಿವೇಶನದಲ್ಲಿ ಎನ್ಡಿಎ ಸರ್ಕಾರದ ವಿರುದ್ಧ ಹೋರಾಟದ ರೂಪು ರೇಷೆ ಸಂಬಂಧ ಚರ್ಚಿಸಲು ರಾಹುಲ್ ಗಾಂಧಿ ಫೆ.2 ರಂದು ಇಂಡಿಯಾ ಒಕ್ಕೂಟದ ನಾಯಕರೊಂದಿಗೆ ಕಾರ್ಯತಂತ್ರ ರಚನಾ ಸಭೆಯನ್ನು ನಡೆಸಲಿದ್ದಾರೆ.
ಇಂಡಿಯಾ ಒಕ್ಕೂಟ ಒಗ್ಗಟ್ಟಿನಿಂದ ಇದೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿಯಾಗಿರುವ ಯಾವುದೇ ಮಸೂದೆ ಅಥವಾ ವಿಷಯದ ಬಗ್ಗೆ ನಾವು ಎನ್ಡಿಎ ಸರ್ಕಾರವನ್ನು ಒಗ್ಗಟ್ಟಿನಿಂದ ಎದುರಿಸುತ್ತೇವೆ. ಜನರ ಮೇಲೆ ಪರಿಣಾಮ ಬೀರುವ ಕೆಲವು ಪ್ರಮುಖ ಸಮಸ್ಯೆಗಳಿಗೆ ಉತ್ತರಗಳನ್ನು ಹುಡುಕಲು ಬಯಸುತ್ತವೆ. ವಿಶೇಷವಾಗಿ ಒತ್ತಡದಲ್ಲಿರುವ ಆರ್ಥಿಕತೆ, ಬೆಲೆ ಏರಿಕೆ, ಉದ್ಯೋಗಗಳ ಕೊರತೆ ಮತ್ತು ವಿದ್ಯಾರ್ಥಿಗಳು ಮತ್ತು ರೈತರ ಸಂಕಷ್ಟಗಳಿಗೆ ಉತ್ತರಗಳನ್ನು ಹುಡುಕಲು ಪ್ರತಿಪಕ್ಷಗಳ ಒಕ್ಕೂಟ ಬಯಸುತ್ತದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.