ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / bharat

'ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯಲ್ಲ': ಖರ್ಗೆ ಹೇಳಿಕೆ - J K campaigning

ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಇಳಿಸುವವರೆಗೂ ಸಾಯುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (IANS)

ಜಮ್ಮು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿರುವಾಗ ಹಠಾತ್ತನೆ ಅಸ್ವಸ್ಥರಾಗಿ, ಕೆಲ ಹೊತ್ತಿನ ಬಳಿಕ ಚೇತರಿಸಿಕೊಂಡು ಅವರು ಈ ಮಾತು ಹೇಳಿದರು.

ರಾಜ್ಯ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದ ಪ್ರಚಾರದ ಕೊನೆಯ ದಿನದಂದು ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ನಾವು ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುತ್ತೇವೆ. ನನಗೆ 83 ವರ್ಷ ವಯಸ್ಸು, ಆದರೆ ನಾನು ಇಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಜೀವಂತವಾಗಿರುತ್ತೇನೆ." ಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಎಂದಿಗೂ ಬಯಸಿರಲಿಲ್ಲ ಎಂದು ಹೇಳಿದ ಖರ್ಗೆ, "ಒಂದೊಮ್ಮೆ ಅವರು ಚುನಾವಣೆ ನಡೆಸಲು ಬಯಸಿದ್ದರೆ ಒಂದೆರಡು ವರ್ಷಗಳಲ್ಲಿಯೇ ಅದನ್ನು ಮಾಡುತ್ತಿದ್ದರು. ಸುಪ್ರೀಂ ಕೋರ್ಟ್ ಆದೇಶದ ನಂತರ ಅವರು ಚುನಾವಣೆಗೆ ತಯಾರಿ ಪ್ರಾರಂಭಿಸಿದರು. ಅವರಿಗೆ ಚುನಾವಣೆ ಬೇಕಿರಲಿಲ್ಲ. ಅವರು ಲೆಫ್ಟಿನೆಂಟ್ ಗವರ್ನರ್ ಮೂಲಕ ರಿಮೋಟ್ ಕಂಟ್ರೋಲ್ ಸರ್ಕಾರವನ್ನು ನಿರ್ವಹಿಸಲು ಬಯಸಿದ್ದರು." ಎಂದು ವಾಗ್ದಾಳಿ ನಡೆಸಿದರು.

ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶದ ಯುವಕರಿಗೆ ಏನನ್ನೂ ನೀಡಿಲ್ಲ ಎಂದು ಆರೋಪಿಸಿದ ಖರ್ಗೆ, "10 ವರ್ಷಗಳಲ್ಲಿ ನಿಮ್ಮ ಸಮೃದ್ಧಿಯನ್ನು ಮರಳಿ ತರಲು ಸಾಧ್ಯವಾಗದ ವ್ಯಕ್ತಿಯನ್ನು ನೀವು ನಂಬಬಹುದೇ? ಬಿಜೆಪಿ ನಾಯಕರು ನಿಮ್ಮ ಮುಂದೆ ಬಂದರೆ, ಅವರು ಸಮೃದ್ಧಿಯನ್ನು ತಂದಿದ್ದಾರೆಯೇ ಅಥವಾ ಇಲ್ಲವೇ ಎಂದು ಅವರನ್ನು ಕೇಳಿ" ಎಂದು ಹೇಳಿದರು.

ಖರ್ಗೆ ಅವರು ವೇದಿಕೆಯಲ್ಲೇ ತಲೆತಿರುಗಿ ಅಸ್ವಸ್ಥರಾದಾಗ ಪಕ್ಷದ ಹಲವಾರು ನಾಯಕರು ಅವರನ್ನು ಹಿಡಿದು ಆಸರೆ ನೀಡಿದರು. ಪ್ರಚಾರ ಸಭೆಯ ನಂತರ, ಅವರು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಬಿಜೆಪಿ ಹೋರಾಡುತ್ತಿವೆ. ಉಭಯ ಪಕ್ಷಗಳ ನಡುವಿನ ಒಪ್ಪಂದದ ಪ್ರಕಾರ, ಎನ್​ಸಿ 52 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 31 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಾಶ್ಮೀರ ಕಣಿವೆಯಲ್ಲಿ ಸಿಪಿಐ-ಎಂಗೆ ಮತ್ತು ಜಮ್ಮು ವಿಭಾಗದಲ್ಲಿ ಪ್ಯಾಂಥರ್ಸ್ ಪಕ್ಷಕ್ಕೆ ಎರಡು ಸ್ಥಾನಗಳನ್ನು ಈ ಮೈತ್ರಿಕೂಟವು ಅವಿರೋಧವಾಗಿ ಬಿಟ್ಟುಕೊಟ್ಟಿದೆ.

ಇದನ್ನೂ ಓದಿ : ಸಿಪಿಐ (ಎಂ) ಪಾಲಿಟ್ ಬ್ಯೂರೋ, ಕೇಂದ್ರ ಸಮಿತಿ ಸಂಯೋಜಕರಾಗಿ ಪ್ರಕಾಶ್ ಕಾರಟ್​ ನೇಮಕ - CPIM Polit Bureau

ABOUT THE AUTHOR

...view details