ಕರ್ನಾಟಕ

karnataka

ರಣಬಿಸಿಲಿಗೆ ಉತ್ತರ ತತ್ತರ: ಬಿಸಿಗಾಳಿ​ಗೆ 4 ತಿಂಗಳಲ್ಲಿ 114 ಸಾವು, 41,000 ಹೀಟ್​ಸ್ಟ್ರೋಕ್​ ಶಂಕಿತ ಪ್ರಕರಣ ವರದಿ - Heatwave Deaths in 4 Months

By ETV Bharat Karnataka Team

Published : Jun 21, 2024, 10:33 AM IST

ಬಿಸಿಗಾಳಿ ಪೀಡಿತ ರೋಗಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಗುರುವಾರ ಸೂಚಿಸಿದ್ದಾರೆ.

Women cover their faces to protect themselves from the scorching sun on a summer day in Kanpur.
ಕಾನ್ಪುರದಲ್ಲಿ ಬೇಸಿಗೆಯ ದಿನದಲ್ಲಿ ಸುಡುವ ಬಿಸಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಹಿಳೆಯರು ತಮ್ಮ ಮುಖಗಳನ್ನು ಮುಚ್ಚಿಕೊಂಡಿರುವುದು. (ANI)

ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ನಿರಂತರ ಬಿಸಿಗಾಳಿಯಿಂದಾಗಿ ಜನರು ತತ್ತರಿಸಿ ಹೋಗುತ್ತಿದ್ದಾರೆ. ಈ ವರ್ಷ ಮಾರ್ಚ್​ 1ರಿಂದ ಜೂನ್​ 18ರವರೆಗೆ ಕನಿಷ್ಠ 114 ಜನರು ಬಿಸಿಗಾಳಿಗೆ ಬಲಿಯಾಗಿದ್ದು, 40,984 ಕ್ಕೂ ಹೆಚ್ಚು ಜನರು ಶಂಕಿತ ಹೀಟ್​ಸ್ಟ್ರೋಕ್​ ಹೊಡೆತದಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ.

ರಾಜ್ಯಗಳಿಂದ ಬಂದಿರುವ ಅಂಕಿ - ಅಂಶಗಳು ಅಂತಿಮವಾಗಿಲ್ಲದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಡೆಸಿದ ರಾಷ್ಟ್ರೀಯ ಶಾಖ - ಸಂಬಂಧಿತ ಅನಾರೋಗ್ಯ ಮತ್ತು ಸಾವಿನ ಕಣ್ಗಾವಲು ಅಡಿಯಲ್ಲಿ ಸಂಗ್ರಹಿಸಿದ ಅಂಕಿ - ಅಂಶಗಳ ಪ್ರಕಾರ, 37 ಸಾವುಗಳು ಸಂಭವಿಸಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಕ್ರಮವಾಗಿ ಬಿಹಾರ, ರಾಜಸ್ಥಾನ ಮತ್ತು ಒಡಿಶಾ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿರುವುದು ವರದಿಯಾಗಿದೆ.

ಬಿಸಿಗಾಳಿ ಪೀಡಿತ ರೋಗಿಗಳಿಗೆ ನಿಯಮಿತವಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಕೇಂದ್ರ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವಂತೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಗುರುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಂಕಿ - ಅಂಶಗಳ ಪ್ರಕಾರ, ಜೂನ್ 19 ರಂದು, ಹೀಟ್​ಸ್ಟ್ರೋಕ್​ನಿಂದ ನಾಲ್ಕು ಸಾವುಗಳು ದೃಢಪಟ್ಟಿದ್ದು, ಏಳು ಶಂಕಿತ ಹೀಟ್​ಸ್ಟ್ರೋಕ್​ ಸಾವುಗಳು ಸಂಭವಿಸಿವೆ. ಉತ್ತರ ಮತ್ತು ಪೂರ್ವ ಭಾರತದ ಭಾಗಗಳಲ್ಲಿ ಶಾಖದ ಹೊಡೆತದಿಂದ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿವೆ. ಹೀಟ್​ಸ್ಟ್ರೋಕ್​ನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವವರಿಗೆ ಆರೋಗ್ಯ ಸೇವೆ ನೀಡಲು, ಎಲ್ಲ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸುವಂತೆ ನಡ್ಡಾ ಬುಧವಾರ ನಿರ್ದೇಶನ ನೀಡಿದ್ದರು.

ನಡ್ಡಾ ದೇಶಾದ್ಯಂತ ಪರಿಸ್ಥಿತಿ ಮತ್ತು ಅದನ್ನು ಎದುರಿಸಲು ಆಸ್ಪತ್ರೆಗಳ ಸನ್ನದ್ಧತೆಯನ್ನು ಅವಲೋಕಿಸಿದ್ದು, ಸಂತ್ರಸ್ತರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಎಲ್ಲಾ ಆಸ್ಪತ್ರೆಗಳು ಸಿದ್ಧವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆಗಳಿಗೆ ಕೇಂದ್ರದ ಸಲಹೆ:ನಡ್ಡಾ ಅವರ ನಿರ್ದೇಶನದ ಮೇರೆಗೆ, ಆರೋಗ್ಯ ಸಚಿವಾಲಯವು 'ಹೀಟ್ ವೇವ್ ಸೀಸನ್ 2024' ಕುರಿತು ರಾಜ್ಯ ಆರೋಗ್ಯ ಇಲಾಖೆಗೆ ಸಲಹೆಯನ್ನು ನೀಡಿದೆ. "ಬೇಸಿಗೆಯ ತಾಪಮಾನದ ಪ್ರವೃತ್ತಿಗೆ ಅನುಗುಣವಾಗಿ ದೇಶದಲ್ಲಿ ಗರಿಷ್ಠ ತಾಪಮಾನ ಏರಿಕೆಗೆ ಸಾಕ್ಷಿಯಾಗಬಹುದು. ವಿಪರೀತ ಶಾಖದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಕಡಿಮೆ ಮಾಡಲು, ಆರೋಗ್ಯ ಇಲಾಖೆಗಳು ಸನ್ನದ್ಧವಾಗಿರಬೇಕು ಮತ್ತು ಸಮಯೋಚಿತ ಪ್ರತಿಕ್ರಿಯೆ ನೀಡಬೇಕು" ಎಂದು ಸಚಿವಾಲಯ ಹೇಳಿದೆ.

ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ರಾಷ್ಟ್ರೀಯ ಕಾರ್ಯಕ್ರಮ (NPCCHH) ಅಡಿ ರಾಜ್ಯ ನೋಡಲ್ ಅಧಿಕಾರಿಗಳನ್ನು ಮಾರ್ಚ್ 1 ರಿಂದ ಶಾಖ - ಸಂಬಂಧಿತ ಅನಾರೋಗ್ಯ ಮತ್ತು ಸಾವಿನ ಕಣ್ಗಾವಲು ಅಡಿ ವರದಿ ಮಾಡುವುದರ ಜೊತೆಗೆ ಹೀಟ್‌ಸ್ಟ್ರೋಕ್ ಪ್ರಕರಣಗಳು ಮತ್ತು ಸಾವುಗಳು ಮತ್ತು ಒಟ್ಟು ಸಾವುಗಳ ದೈನಂದಿನ ಡೇಟಾವನ್ನು ಸಲ್ಲಿಸಲು ಹೇಳಿದೆ.

ಹೀಟ್ ಸ್ಟ್ರೋಕ್ ಪ್ರಕರಣಗಳು ಮತ್ತು ಆರೋಗ್ಯ ಸೌಲಭ್ಯ/ಆಸ್ಪತ್ರೆ ಮಟ್ಟದಲ್ಲಿ ಸಾವುಗಳ (ಶಂಕಿತ/ದೃಢೀಕರಿಸಿದ) ಡಿಜಿಟಲ್ ಲೈನ್ ಪಟ್ಟಿಯನ್ನು ನಿರ್ದಿಷ್ಟ ಸ್ವರೂಪಗಳು ಮತ್ತು ಕಾರ್ಯಗಳಲ್ಲಿ ನಿರ್ವಹಿಸುವಂತೆ ಸೂಚಿಸಿದೆ. ಎಲ್ಲ ಜಿಲ್ಲೆಗಳಿಗೆ ಶಾಖ ಸಂಬಂಧಿತ ಕಾಯಿಲೆಗಳ (HRI) ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಪ್ರಸಾರ ಮಾಡಲು ಮತ್ತು HRI ಗಾಗಿ ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆ ಬಲಪಡಿಸುವಂತೆ ನೋಡಲ್​ ಅಧಿಕಾರಿಗಳಿಗೆ ತಿಳಿಸಿದೆ.

ಬಿಸಿಗಾಳಿಯ ಬಗ್ಗೆ ಐಎಂಡಿ ಮುನ್ನೆಚ್ಚರಿಕೆ:ಭಾರತೀಯ ಹವಾಮಾನ ಇಲಾಖೆ (IMD) ಮುಂಚಿತವಾಗಿಯೇ ಬಿಸಿಗಾಳಿಯ ಬಗ್ಗೆ ನೀಡಿರುವ ಎಚ್ಚರಿಕೆಯ ಸಂದೇಶವನ್ನು ಒತ್ತಿಹೇಳಿದ್ದು, ಮುಂದಿನ ನಾಲ್ಕು ದಿನಗಳು ಆರೋಗ್ಯ ಸೌಲಭ್ಯಗಳು ಮತ್ತು ದುರ್ಬಲ ಜನರ ಬಗ್ಗೆ ನಿಗಾ ವಹಿಸಬೇಕು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ತೀವ್ರತರವಾದ ಶಾಖ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಲು ಹಾಗೂ ನಿರ್ವಹಣೆಗಾಗಿ, ಸಾಕಷ್ಟು ಪ್ರಮಾಣದ ORS ಪ್ಯಾಕ್‌ಗಳು, ಅಗತ್ಯ ಔಷಧಗಳು, IV ದ್ರವಗಳು, ಐಸ್-ಪ್ಯಾಕ್‌ಗಳು ಮತ್ತು ಉಪಕರಣಗಳ ಸಂಗ್ರಹಣೆಗಳ ಆರೋಗ್ಯ ಸೌಲಭ್ಯಗಳನ್ನು ತಯಾರಿಸುವಂತೆ ಹಾಗೂ ಪೂರೈಸುವಂತೆ ಸೂಚಿಸಿದೆ.

ಸಾಕಷ್ಟು ಕುಡಿವ ನೀರಿನ ಲಭ್ಯತೆ ಇರುವಂತೆ ನೋಡಿಕೊಳ್ಳಲು ಸಲಹೆ:ಎಲ್ಲ ಆರೋಗ್ಯ ಕೇಂದ್ರ ಹಾಗೂ ಘಟಕಗಳಲ್ಲಿ ಸಾಕಷ್ಟು ಕುಡಿಯುವ ನೀರಿನ ಲಭ್ಯತೆ, ಕಾಯುವ ಮತ್ತು ರೋಗಿಗಳ ಚಿಕಿತ್ಸಾ ಪ್ರದೇಶದಲ್ಲಿ ಸಾಮಾನ್ಯ ಕೂಲಿಂಗ್ ಉಪಕರಣಗಳು ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಿ. ಶಂಕಿತ ಹೀಟ್​ಸ್ಟ್ರೋಕ್​ ಪ್ರಕರಣಗಳನ್ನು ಪ್ರಮಾಣಿತ ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ಬಳಸಿಕೊಂಡು ತ್ವರಿತವಾಗಿ ನಿರ್ಣಯಿಸಿ, ಸಕ್ರಿಯವಾಗಿ ತಂಪಾಗಿಸಬೇಕು ಎಂದು ಒತ್ತಿ ಹೇಳಿದೆ.

"ಶೀತಕ ಉಪಕರಣಗಳ ನಿರಂತರ ಕಾರ್ಯನಿರ್ವಹಣೆಗಾಗಿ ಆಸ್ಪತ್ರೆಗಳಿಗೆ ನಿರಂತರ ವಿದ್ಯುತ್ ಪೂರೈಕೆಗಾಗಿ ವಿದ್ಯುತ್ ವಿತರಣಾ ಕಂಪನಿ/ಕಾರ್ಪೊರೇಷನ್‌ನೊಂದಿಗೆ ಮಾತುಕತೆ ನಡೆಸಿ. ಆರೋಗ್ಯ ಕೇಂದ್ರಗಳಲ್ಲಿ ಒಳಾಂಗಣ ಶಾಖ ಮತ್ತು ಶಕ್ತಿ ಸಂರಕ್ಷಣೆಯನ್ನು ಕಡಿಮೆ ಮಾಡಲು ತಂಪಾದ ಛಾವಣಿ/ಹಸಿರು ಛಾವಣಿ, ಕಿಟಕಿ ನೆರಳು, ಮಳೆನೀರು ಕೊಯ್ಲು, ಸೌರೀಕರಣ ಮುಂತಾದ ಕ್ರಮಗಳನ್ನು ಅಳವಡಿಸಿಕೊಳ್ಳಿ. ಶಾಖ ಪೀಡಿತ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರ ಹಾಗೂ ಘಟಕಗಳಲ್ಲಿ ಹೊರಗಡೆಯೂ ನೆರಳು ಒದಗಿಸುವ ವ್ಯವಸ್ಥೆ ಕಲ್ಪಿಸಿ ಎಂದು ಸಲಹೆ ನೀಡಲಾಗಿದೆ.

ಇದನ್ನೂ ಓದಿ:ಬಿಸಿಗಾಳಿಯಿಂದ ಶೇ 50ರಷ್ಟು ಬೀದಿಬದಿ ವ್ಯಾಪಾರಿಗಳಿಗೆ ಆದಾಯ ನಷ್ಟ: ಗ್ರೀನ್ ಪೀಸ್ ಇಂಡಿಯಾ ವರದಿ - Heat wave impact on street vendors

ABOUT THE AUTHOR

...view details