ಕರ್ನಾಟಕ

karnataka

ETV Bharat / bharat

ಹತ್ರಾಸ್ ಕಾಲ್ತುಳಿತ: ಮೃತರ ಸಂಖ್ಯೆ 123ಕ್ಕೇರಿಕೆ, 6 ಸಂಘಟಕರ ಸೆರೆ; ರಾಹುಲ್ ಭೇಟಿ ಸಾಧ್ಯತೆ - Hathras Stampede

ಉತ್ತರ ಪ್ರದೇಶದ ಹತ್ರಾಸ್​ ಜಿಲ್ಲೆಯಲ್ಲಿ ಜುಲೈ 2ರಂದು ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ. ಸತ್ಸಂಗ ಕಾರ್ಯಕ್ರಮದ ಸಂಘಟನಾ ಸಮಿತಿಯ ಆರು ಸದಸ್ಯರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

By ETV Bharat Karnataka Team

Published : Jul 4, 2024, 6:16 PM IST

Hathras: A Slipper Of A Victim At The Stampede Incident Site.
ಕಾಲ್ತುಳಿತ ನಡೆದ ಸ್ಥಳದಲ್ಲಿ ಬಿದ್ದಿರುವ ಚಪ್ಪಲಿ (IANS)

ಹತ್ರಾಸ್(ಉತ್ತರ ಪ್ರದೇಶ):ಹತ್ರಾಸ್​ ಜಿಲ್ಲೆಯಲ್ಲಿ ಮಂಗಳವಾರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ 123 ಜನರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಸಂಘಟಕ ತಲೆಮರೆಸಿಕೊಂಡಿದ್ದು, ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.

ಸ್ವಯಂಘೋಷಿತ ದೇವಮಾನವ ನಾರಾಯಣ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಹಮ್ಮಿಕೊಂಡಿದ್ದ ಸತ್ಸಂಗದಲ್ಲಿ ಭಾರೀ ಕಾಲ್ತುಳಿತ ಸಂಭವಿಸಿತ್ತು. ಇದುವರೆಗೆ 123 ಜನರು ಮೃತಪಟ್ಟಿರುವುದು ದೃಢಪಟ್ಟಿದೆ. ಸಾವಿಗೀಡಾದವರಲ್ಲಿ ಬಹುತೇಕರು ಮಹಿಳೆಯರೇ ಆಗಿದ್ದಾರೆ. ಈ ಭೀಕರ ದುರಂತಕ್ಕೆ ಸಂಘಟಕರ ನಿರ್ಲಕ್ಷ್ಯವೇ ಕಾರಣ ಎಂಬುವುದು ಬೆಳಕಿಗೆ ಬಂದಿದೆ. ಹೀಗಾಗಿ, ಸಂಘಟನಾ ಸಮಿತಿಯಲ್ಲಿದ್ದ ಹುಕುಂ ಸಿಂಗ್, ಮಂಜು ಯಾದವ್, ಮುಖೇಶ್ ಕುಮಾರ್, ಮಂಜು ದೇವಿ ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಅಲಿಗಢ ಐಜಿ ಶಲಭ್ ಮಾಥುರ್ ಹೇಳಿದ್ದಾರೆ.

ಮುಖ್ಯ ಸಂಘಟಕ ವೇದಪ್ರಕಾಶ್ ಮಧುಕರ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಸತ್ಸಂಗ ವ್ಯವಸ್ಥೆಯ ಜವಾಬ್ದಾರಿ ವೇದಪ್ರಕಾಶ್ ಹಾಗೂ ಬಂಧಿತ ಆರು ಜನರ ಮೇಲಿತ್ತು. ಆದರೆ, ಜನಸಮೂಹ ನಿಯಂತ್ರಣ ತಪ್ಪಿ ಬಾಬಾನ ಪಾದಕ್ಕೆ ಪೂಜೆ ಸಲ್ಲಿಸಲು ಮುಂದಾಗಿತ್ತು. ಆದರೆ, ಇದಕ್ಕೆ ಸಂಘಟಕರು ಸಹಕರಿಸಿಲ್ಲ. ಆದ್ದರಿಂದ ಕಾಲ್ತುಳಿತ ದುರಂತ ಉಂಟಾಗಿದೆ. ಅಗತ್ಯಬಿದ್ದರೆ ಬಾಬಾ ಅವರ ವಿಚಾರಣೆಯನ್ನೂ ನಡೆಸಲಾಗುವುದು ಎಂದು ಐಜಿ ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಬಾಬಾ ಹೆಸರಿಲ್ಲ: ಆದರೆ, ಈ ದೊಡ್ಡ ದುರಂತದಲ್ಲಿ ಪೊಲೀಸರು ದಾಖಲಿಸಿರುವ ಎಫ್​ಐಆರ್​ನಲ್ಲಿ ಭೋಲೆ ಬಾಬಾ ಹೆಸರು ಉಲ್ಲೇಖಿಸಿಲ್ಲ ಎಂಬುವುದು ಗಮನಾರ್ಹ. ಬಾಬಾ ಕೂಡ ನಾಪತ್ತೆಯಾಗಿದ್ದಾರೆ. ಆದರೆ, ತನಿಖಾಧಿಕಾರಿಗಳಿಗೆ ಸಹಕಾರ ನೀಡುವುದಾಗಿ ತಮ್ಮ ವಕೀಲರ ಮೂಲಕ ಅಜ್ಞಾತ ಸ್ಥಳದಿಂದ ಅವರು ಹೇಳಿಕೆ ನೀಡಿದ್ದಾರೆ.

ಇದೇ ವೇಳೆ, ಅಂದು ಸತ್ಸಂಗ ಸ್ಥಳದಲ್ಲಿ ಪೊಲೀಸರನ್ನೂ ಭದ್ರತೆಗೆ ನಿಯೋಜಿಸಲಾಗಿತ್ತು. ಘಟನೆಯಲ್ಲಿ ಪೊಲೀಸರ ನಿರ್ಲಕ್ಷ್ಯವೂ ಇದೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಜಿ ಮಾಥುರ್, ಸಂಪೂರ್ಣ ತನಿಖೆಗೆ ಈಗಾಗಲೇ ನ್ಯಾಯಾಂಗ ಆಯೋಗ ರಚಿಸಲಾಗಿದೆ. ಆಯೋಗವು ಎಲ್ಲ ಅಂಶಗಳ ಮೇಲೆ ತನಿಖೆ ನಡೆಸಲಿದೆ ಎಂದಷ್ಟೇ ಹೇಳಿದರು.

ಹತ್ರಾಸ್​ಗೆ ರಾಹುಲ್ ಗಾಂಧಿ ಭೇಟಿ:ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹತ್ರಾಸ್​ಗೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, "ಇದೊಂದು ದುರದೃಷ್ಟಕರ ಘಟನೆ. ರಾಹುಲ್ ಗಾಂಧಿ ಹತ್ರಾಸ್​ಗೆ ತೆರಳಿ ಸಂತ್ರಸ್ತ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಅಹಮದಾಬಾದ್​ನಲ್ಲಿ ಜುಲೈ 7ರಂದು ವಾರ್ಷಿಕ ಜಗನ್ನಾಥ ರಥಯಾತ್ರೆ; ಬಿಗಿ ಭದ್ರತೆ

ABOUT THE AUTHOR

...view details