ಚಂಡೀಗಢ:ಹರಿಯಾಣದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ನಡೆದ ಮತದಾನ ಮುಕ್ತಾಯವಾಗಿದೆ. ಸಾಯಂಕಾಲ 5 ಗಂಟೆಯವೆರೆಗೆ ಶೇ.61 ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಚುನಾವಣಾ ಕಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದು, ಅವರ ಭವಿಷ್ಯ ಮತಪೆಟ್ಟಿಗೆ ಸೇರಿದೆ.
ಚುನಾವಣಾ ಆಯೋಗವು ಮುಕ್ತ, ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಂಡಿತ್ತು. ಒಟ್ಟು 1,031 ಅಭ್ಯರ್ಥಿಗಳು ವಿಧಾನಸಭಾ ಚುನಾವಣಾ ಅಖಾಡದಲ್ಲಿದ್ದಾರೆ. 20 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ರಾಜ್ಯದ 2 ಕೋಟಿಗೂ ಹೆಚ್ಚು ಮತದಾರರು ಮತ ಹಕ್ಕು ಹೊಂದಿದ್ದರು.
ಈ ಬಾರಿಯ ವಿಧಾನಸಭೆ ಚುನಾವಣೆಯು ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದರೆ, ಮತ್ತೊಂದೆಡೆ ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಪುನಃ ತನ್ನ ತೆಕ್ಕೆಗೆ ಪಡೆಯುವ ನಿರೀಕ್ಷೆಯಲ್ಲಿದೆ. ಬಿಜೆಪಿ, ಎಎಪಿ, ಕಾಂಗ್ರೆಸ್, ಜೆಜೆಪಿ, ಐಎನ್ಎಲ್ಡಿ, ಬಿಎಸ್ಪಿ ಹಾಗೂ ಎಎಸ್ಪಿ ಸೇರಿದಂತೆ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯವು ಇಂದು ಇವಿಎಂಗಳಲ್ಲಿ ಭದ್ರವಾಗಿದೆ.
ಮೊದಲ ವೋಟ್ ಮಾಡಿದ ಮನು ಭಾಕರ್: ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರು ತಮ್ಮ ಮೊದಲ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ''ಈ ದೇಶದ ಯುವ ಜನತೆಯಾಗಿ ಅತ್ಯುತ್ತಮ ಅಭ್ಯರ್ಥಿಗೆ ಮತ ಚಲಾಯಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸಣ್ಣ ಹೆಜ್ಜೆಗಳೂ ಮುಂದೆ ದೊಡ್ಡ ಗುರಿಗಳಿಗೆ ಮುಖ್ಯವಾಗಿವೆ. ಮೊದಲ ಬಾರಿಗೆ ಮತ ಹಾಕಿದ್ದೇನೆ'' ಎಂದು ಮನು ಭಾಕರ್ ಹೇಳಿದರು.
ಸಚಿವರಾಗುವುದು ನನ್ನ ಕೈಯಲ್ಲಿಲ್ಲ ಎಂದ ಫೋಗಟ್:ಜುಲಾನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಚಾರ್ಖಿ ದಾದ್ರಿಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ''ಇದು ಹರಿಯಾಣಕ್ಕೆ ದೊಡ್ಡ ಹಬ್ಬ ಮತ್ತು ರಾಜ್ಯದ ಜನರಿಗೆ ಬಹಳ ದೊಡ್ಡ ದಿನವಾಗಿದೆ. ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡುತ್ತಿದ್ದೇನೆ. 10 ವರ್ಷಗಳ ಹಿಂದೆ ಭೂಪಿಂದರ್ ಹೂಡಾ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಕ್ರೀಡಾ ಕ್ಷೇತ್ರ ಚೆನ್ನಾಗಿತ್ತು. ಸಚಿವರಾಗುವುದು ನನ್ನ ಕೈಯಲ್ಲಿಲ್ಲ, ಹೈಕಮಾಂಡ್ ನಿರ್ಣಯ'' ಎಂದು ಹೇಳಿದ್ದರು.
'ಮತದಾನದಲ್ಲಿ ಹೊಸ ದಾಖಲೆ ನಿರ್ಮಿಸಿ' ಮೋದಿ ಕರೆ-ಹರಿಯಾಣ ವಿಧಾನಸಭೆಯ 90 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 'ಮತದಾನದಲ್ಲಿ ಹೊಸ ದಾಖಲೆ ನಿರ್ಮಿಸಿ' ಎಂದು ಪ್ರಧಾನಿ ನರೇಂದ್ರ ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಹೀಗೆ "ಹರಿಯಾಣ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಎಲ್ಲರೂ ಭಾಗಿಗಳಾಗಿ ಮತ್ತು ಮತದಾನದಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಲು ನಾನು ಎಲ್ಲ ಮತದಾರರಲ್ಲಿ ಮನವಿ ಮಾಡುತ್ತೇನೆ. ಮೊದಲ ಬಾರಿಗೆ ಮತ ಚಲಾಯಿಸಲಿರುವ ರಾಜ್ಯದ ಎಲ್ಲಾ ಯುವ ಸ್ನೇಹಿತರಿಗೆ ನನ್ನ ವಿಶೇಷ ಶುಭಾಶಯಗಳು" ಎಂದು ತಿಳಿಸಿದ್ದರು.