ನವದೆಹಲಿ: "ಮಹಿಳೆಗೆ ಅವಮಾನ ಮಾಡುವವರನ್ನು ದೇವರು 'ಶಿಕ್ಷಿಸುತ್ತಾನೆ' ಎನ್ನುವುದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ" ಎಂದು ರಾಜ್ಯಸಭಾ ಸದಸ್ಯೆ, ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಕಟು ಟೀಕಾಕಾರರು ಆಗಿರುವ ಸ್ವಾತಿ ಮಲಿವಾಲ್ ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಸೋತಿರುವ ಆಮ್ ಆದ್ಮಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಲಿವಾಲ್, "ಆಪ್ ಪಕ್ಷ ಮತ್ತು ಅದರ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ 'ದುರಹಂಕಾರ'ವೇ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರ ಸೋಲಿಗೆ ಕಾರಣವಾಯಿತು" ಎಂದಿದ್ದಾರೆ.
"ಯಾವುದೇ ಮಹಿಳೆಗೆ ಯಾರಾದರೂ, ಏನಾದರೂ ತಪ್ಪು ಎಸಗಿದ್ದರೆ ದೇವರು ಸುಮ್ಮನೆ ಬಿಡುವುದಿಲ್ಲ, ತಪ್ಪು ಮಾಡಿದವರನ್ನು ಶಿಕ್ಷಿಸುತ್ತಾನೆ ಅನ್ನೋದಕ್ಕೆ ಇತಿಹಾಸದಿಂದ ತಿಳಿದು ಬರುತ್ತದೆ. ಅಹಂ ಮತ್ತು ಅಹಂಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ರಾವಣನ ಅಹಂಕಾರ ಕೂಡ ಕೊನೆಗೆ ಛಿದ್ರವಾಯಿತು" ಎಂದು ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ.
"ವಾಯುಮಾಲಿನ್ಯ, ಕಳಪೆ ಮೂಲಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳಿಂದಾಗಿ ಅವರು (ಆಪ್ ಪಕ್ಷ) ಚುನಾವಣೆಯಲ್ಲಿ ಸೋಲಬೇಕಾಯಿತು" ಎಂದು ಕೆಲವು ಕಾರಣಗಳನ್ನು ಸಹ ತಿಳಿಸಿರುವ ಸ್ವಾತಿ ಮಲಿವಾಲ್, ಅಧಿಕಾರದ ಗದ್ದುಗೆಗೇರಲು ಸಜ್ಜಾಗಿರುವ ಬಿಜೆಪಿಗೆ ಅಭಿನಂದನೆ ಸಲ್ಲಿಸಿದ್ದಾರೆ.
"ದೆಹಲಿ ಇಂದು ಕಸದ ಬುಟ್ಟಿಯಾಗಿದೆ. ಜಲಮಾಲಿನ್ಯ, ವಾಯುಮಾಲಿನ್ಯದಂತಹ ಸಮಸ್ಯೆಗಳನ್ನು ಜೀವಂತವಾಗಿಡುವ ಮೂಲಕ ಕೇಜ್ರಿವಾಲ್ ಸ್ವತಃ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ನಂಬಿಸಬಹುದೆಂದು ಅವರು(ಎಎಪಿ) ಅಂದುಕೊಂಡಿದ್ದರು. ಅವರ ಆಸೆ ಈಡೇರಲಿಲ್ಲ. ಜನಪ್ರತಿನಿಧಿಗಳು ಜನರು ಹೇಳುವ ಕೆಲಸ ಮಾಡಬೇಕು. ಆದರೆ, ಕೇಜ್ರಿವಾಲ್ ಅದನ್ನು ಮರೆತಿದ್ದರು. ನಾನು ಬಿಜೆಪಿಯನ್ನು ಅಭಿನಂದಿಸುತ್ತೇನೆ" ಎಂದು ಮಲಿವಾಲ್ ಹೇಳಿದ್ದಾರೆ.
ಮತ್ತೊಂದೆಡೆ ಸ್ವಾತಿ ಮಲಿವಾಲ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರ ಇಡೀ ಪಕ್ಷವನ್ನು ಕೌರವರಿಗೆ ಹೋಲಿಸುವಂತೆ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ನೆಟ್ಟಿಗರಲ್ಲಿ ತರಹೇವಾರಿ ಚರ್ಚೆಗಳಿಗೆ ಕಾರಣವಾಗಿದೆ. ಇಡೀ ಪೋಸ್ಟ್ನಲ್ಲಿ ಯಾವುದೇ ಬರಹವನ್ನಾಗಲಿ ಅವರು ಬರೆದಿಲ್ಲ. ಇದರಲ್ಲಿ ಕೇವಲ ಫೋಟೋ ಮಾತ್ರವೇ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಆಪ್ ವರಿಷ್ಠ ಅರವಿಂದ್ ಕೇಜ್ರಿವಾಲ್ಗೆ ಭಾರಿ ಆಘಾತ: ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೂ ಸೋಲು - DELHI ELECTIONS 2025