ಕರ್ನಾಟಕ

karnataka

ETV Bharat / bharat

ಮದ್ಯದ ಉದ್ಯಮಿಯ ₹400 ಕೋಟಿ ಮೌಲ್ಯದ ಫಾರ್ಮ್‌ಹೌಸ್ ನೆಲಸಮ - ದೆಹಲಿ ಅಭಿವೃದ್ಧಿ ಪ್ರಾಧಿಕಾರ

ದೆಹಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ) ಕೈಗೊಂಡಿರುವ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮದ್ಯದ ಉದ್ಯಮಿಯೊಬ್ಬರ 400 ಕೋಟಿ ರೂಪಾಯಿ ಮೌಲ್ಯದ ಫಾರ್ಮ್​ಹೌಸ್​ ನೆಲಸಮವಾಗಿದೆ.

ಫಾರ್ಮ್‌ಹೌಸ್ ನೆಲಸಮ
ಫಾರ್ಮ್‌ಹೌಸ್ ನೆಲಸಮ

By PTI

Published : Mar 3, 2024, 10:31 AM IST

ನವದೆಹಲಿ:ಸರ್ಕಾರಿ ಭೂಮಿ ಅನಧಿಕೃತ ಒತ್ತುವರಿ ಮತ್ತು ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿಸಿರುವ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ), ಛತ್ತರ್‌ಪುರದಲ್ಲಿ ಮದ್ಯದ ಉದ್ಯಮಿ ದಿವಂಗತ ಪಾಂಟಿ ಚಡ್ಡಾ ಅವರ 400 ಕೋಟಿ ರೂಪಾಯಿ ಮೌಲ್ಯದ ಫಾರ್ಮ್‌ಹೌಸ್ ಧ್ವಂಸಗೊಳಿಸಿದೆ.

ಹೈಪ್ರೊಫೈಲ್ ಲಿಕ್ಕರ್ ಮಾರಾಟಗಾರ ದಿವಂಗತ ಪಾಂಟಿ ಚಡ್ಡಾ ಅಲಿಯಾಸ್ ಗುರುದೀಪ್ ಸಿಂಗ್ ಅವರ 10 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಫಾರ್ಮ್‌ಹೌಸ್ ಅನ್ನು ಕೆಡವಲಾಗಿದೆ. ಶುಕ್ರವಾರ (ಮಾರ್ಚ್​ 1) 5 ಎಕರೆ ಪ್ರದೇಶವನ್ನು ವಶಕ್ಕೆ ಪಡೆಯಲಾಗಿತ್ತು. ಶನಿವಾರ ಉಳಿದ ಐದು ಎಕರೆಯಲ್ಲಿ ನಿರ್ಮಿಸಲಾದ ಕಟ್ಟಡವನ್ನು ತೆರವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ಎಕರೆಯಲ್ಲಿ ಮನೆ ನಿರ್ಮಾಣ:ಒಟ್ಟಾರೆ 10 ಎಕರೆ ಪ್ರದೇಶದಲ್ಲಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಫಾರ್ಮ್​ಹೌಸ್​ ನಿರ್ಮಾಣ ಮಾಡಲಾಗಿತ್ತು. ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ನೋಟಿಸ್​ ಜಾರಿ ಮಾಡಲಾಗಿದೆ. ಈ ಭಾಗದಲ್ಲಿ ಸರ್ಕಾರ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ದೊಡ್ಡ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಡಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಶಾನ್ಯ ದೆಹಲಿಯಲ್ಲಿ ಜನವರಿ 13ರಿಂದ ಜನವರಿ 17ರ ನಡುವೆ ಗೋಕುಲಪುರಿಯಲ್ಲಿ ನಡೆಸಲಾದ ತೆರವು ಕಾರ್ಯಾಚರಣೆಯಲ್ಲಿ 4 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದ್ದ ವಾಣಿಜ್ಯ ಶೋರೂಮ್‌ಗಳನ್ನು ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಫಾರ್ಮ್​ಹೌಸ್​ ನಾಶ ಮಾಡಿದ್ದರ ಬಗ್ಗೆ ಚಡ್ಡಾ ಅವರ ಕಡೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಇದೇ ವೇಳೆ ಇನ್ನಷ್ಟು ಅಕ್ರಮ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಡಿಡಿಎ ಹೇಳಿದೆ.

ಸಿಲ್ಕ್ಯಾರಾ ಸೇತುವೆ ಕುಸಿತ ಹೀರೋ ಮನೆ ಧ್ವಂಸ:ಉತ್ತರಾಖಂಡದ ಉತ್ತರಕಾಶಿಯಲ್ಲಿನ ಸಿಲ್ಕ್ಯಾರಾ ಸೇತುವೆ ಕುಸಿದ ದುರಂತದಲ್ಲಿ ಅದರಲ್ಲಿ ಸಿಲುಕಿದ್ದ 41 ಜನರ ರಕ್ಷಣೆಗೆ ದುಡಿದಿದ್ದ ಕಾರ್ಮಿಕನ ಮನೆಯೂ ಸಹ ತೆರವು ಕಾರ್ಯಾಚರಣೆಯಲ್ಲಿ ಧ್ವಂಸವಾಗಿದೆ. ಒತ್ತುವರಿ ಜಾಗದಲ್ಲಿ ಮನೆ ನಿರ್ಮಾಣವಾಗಿದ್ದು, ಉಳಿದ ಮನೆಗಳ ಜೊತೆಗೆ ಅದನ್ನೂ ನೆಲಸಮ ಮಾಡಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು.

ಸೇತುವೆಯಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಗೆ ಹಗಲಿರುಳು ದುಡಿದಿದ್ದ ಕಾರ್ಮಿಕನ ಮನೆ ಧ್ವಂಸ ಮಾಡಿದ್ದು, ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಕೇಂದ್ರ ಸರ್ಕಾರ ಕಾರ್ಮಿಕನಿಗೆ ನಿಗದಿತ ಸ್ಥಳದಲ್ಲಿ ಪ್ರಧಾನಮಂತ್ರಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದೆ.

ಇದನ್ನೂ ಓದಿ:ಉತ್ತರಾಖಂಡ್​: ಹಲ್ದ್ವಾನಿಯಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ, ಮತ್ತೆ ಬುಲ್ಡೋಜರ್​ಗಳ​ ಸದ್ದು

ABOUT THE AUTHOR

...view details