ವನಪರ್ತಿ(ತೆಲಂಗಾಣ):ಇಲ್ಲಿನವನಪರ್ತಿಯಲ್ಲಿ ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೊತಕೋಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿದೆ. ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಹಲವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಕಾರು ಹೈದರಾಬಾದ್ನಿಂದ ಕರ್ನಾಟಕದ ಬಳ್ಳಾರಿಗೆ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಬ್ದುಲ್ ರಹಮಾನ್ (62), ಸಲೀಮಾ ಜಿ (85), ಮಕ್ಕಳಾದ ವಾಸಿರ್ ರಾವುತ್ (7 ತಿಂಗಳು), ಬುಸ್ರಾ (2 ವರ್ಷ) ಮತ್ತು ಮರಿಯಾ (5 ವರ್ಷ) ಸಾವನ್ನಪ್ಪಿದ್ದಾರೆ. ಇನ್ನು, ಸಮೀರ (5), ಹುಸೇನ್ (10), ಶಫಿ, ಖಾದಿರುನ್ನೀಸಾ, ಹಬೀಬ್, ಅಲಿ, ಶಹಜಾನ್ ಬೇಗ್ ಗಾಯಗೊಂಡಿದ್ದು ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಪೈಕಿ ಅಲಿ ಎಂಬವರು ವನಪರ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರನ್ನು ಉತ್ತಮ ಚಿಕಿತ್ಸೆಗಾಗಿ ಕರ್ನೂಲ್ಗೆ ರವಾನಿಸಲಾಗಿದೆ.