ಕರ್ನಾಟಕ

karnataka

ETV Bharat / bharat

ವಾರದೊಳಗೆ ದೇಶಾದ್ಯಂತ CAA ಜಾರಿ: ಕೇಂದ್ರ ಸಚಿವ ಶಂತನು ಠಾಕೂರ್

ಒಂದು ವಾರದೊಳಗೆ ದೇಶಾದ್ಯಂತ ಸಿಎಎ ಜಾರಿಯಾಗಲಿದೆ ಎಂದು ಕೇಂದ್ರ ಸಚಿವ ಶಂತನು ಠಾಕೂರ್ ಹೇಳಿದ್ದಾರೆ.

By PTI

Published : Jan 29, 2024, 2:19 PM IST

CAA implementation within a week: Union minister Shantanu Thakur
CAA implementation within a week: Union minister Shantanu Thakur

ಕೋಲ್ಕತಾ: ಒಂದು ವಾರದೊಳಗೆ ಇಡೀ ದೇಶದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ಶಂತನು ಠಾಕೂರ್ ಸೋಮವಾರ ಹೇಳಿದ್ದಾರೆ. ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಶಾಸನವನ್ನು ಏಳು ದಿನಗಳಲ್ಲಿ ತ್ವರಿತವಾಗಿ ಜಾರಿಗೆ ತರಲಾಗುವುದು ಎಂದು ಹೇಳಿದರು. ಶಂತನು ಠಾಕೂರ್ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮಾಟುವಾ ಸಮುದಾಯದ ಹೆಚ್ಚಿನ ಜನರನ್ನು ಹೊಂದಿರುವ ಬೊಂಗಾವ್​​ನ ಬಿಜೆಪಿ ಸಂಸದರಾಗಿದ್ದಾರೆ.

ಸಿಎಎ ಉದ್ದೇಶವೇನು?: 2019ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದ ಸಿಎಎ, 2014 ರ ಡಿಸೆಂಬರ್ 31 ಕ್ಕಿಂತ ಮೊದಲು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಿದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಗುರಿ ಹೊಂದಿದೆ.

"ಸಿಎಎ ಶೀಘ್ರದಲ್ಲೇ ಜಾರಿಗೆ ಬರಲಿದೆ. ಇದನ್ನು ಏಳು ದಿನಗಳಲ್ಲಿ ಜಾರಿಗೆ ತರಲಾಗುವುದು. ಇದು ನನ್ನ ಗ್ಯಾರಂಟಿ" ಎಂದು ಮಟುವಾ ಸಮುದಾಯದ ನಾಯಕರೂ ಆಗಿರುವ ಠಾಕೂರ್ ಹೇಳಿದರು. ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಠಾಕೂರ್ ಭಾನುವಾರ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಈ ವರ್ಷದ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಸಿಎಎಯನ್ನು ದೇಶದಲ್ಲಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.

ರಾಜ್ಯದ ಪರಿಶಿಷ್ಟ ಜಾತಿ ಜನಸಂಖ್ಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಟುವಾಗಳು 1950 ರ ದಶಕದಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಹೋಗುತ್ತಿದ್ದಾರೆ. ತೊಂಬತ್ತರ ದಶಕದಿಂದ, ಪಶ್ಚಿಮ ಬಂಗಾಳದ ರಾಜಕೀಯ ಪಕ್ಷಗಳು ಮಟುವಾಗಳ ಬೆಂಬಲ ಪಡೆಯಲು ಸಕ್ರಿಯವಾಗಿ ಪ್ರಯತ್ನಿಸುತ್ತಿವೆ. ಮಟುವಾಗಳ ಗಮನಾರ್ಹ ಜನಸಂಖ್ಯೆ ಮತ್ತು ಒಟ್ಟಿಗೆ ಮತ ಚಲಾಯಿಸುವ ಪ್ರವೃತ್ತಿಯಿಂದಾಗಿ ಅವರನ್ನು ಅಲ್ಪಸಂಖ್ಯಾತರಿಗೆ ಹೋಲುವ ಮೌಲ್ಯಯುತ ಮತದಾನದ ಬಣವೆಂದು ಪರಿಗಣಿಸಲಾಗಿದೆ.

ಸಿಎಎ ಅನುಷ್ಠಾನದಿಂದ ಮಟುವಾ ಸಮುದಾಯ ಅತಿಹೆಚ್ಚು ಪ್ರಯೋಜನ ಪಡೆಯಲಿದೆ ಎನ್ನಲಾಗಿದೆ. ಸಿಎಎ ಅನುಷ್ಠಾನದ ಬಗ್ಗೆ ಠಾಕೂರ್ ಅವರ ಹೇಳಿಕೆಗೆ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಸಿಎಎ ವಿಭಜಕ ಕಾನೂನು ಎಂದು ಕರೆದಿದೆ. ಸಿಎಎ ಈ ದೇಶದ ಕಾನೂನು ಆಗಿರುವುದರಿಂದ ಅದರ ಅನುಷ್ಠಾನ ಅನಿವಾರ್ಯ ಎಂದು ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದರು.

ಇದನ್ನೂ ಓದಿ:ನ್ಯಾಷನಲ್ ಕಾನ್ಫರೆನ್ಸ್​ನ ನಾಯಕರು ಬಿಜೆಪಿ ಸೇರ್ಪಡೆ: ಫಾರೂಕ್ ಅಬ್ದುಲ್ಲಾಗೆ ಹಿನ್ನಡೆ

ABOUT THE AUTHOR

...view details