ಕರ್ನಾಟಕ

karnataka

ಚಂಡೀಗಢ ಮೇಯರ್ ಚುನಾವಣೆ ಗೆದ್ದ ಬಿಜೆಪಿ: ಹೈಕೋರ್ಟ್​ ಮೊರೆ ಹೋದ ಎಎಪಿ-ಕಾಂಗ್ರೆಸ್

By PTI

Published : Jan 31, 2024, 8:24 AM IST

ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಚುನಾವಣೆಯನ್ನು ಮೋಸದಾಟ ಎಂದು ಕರೆದಿರುವ ಎಎಪಿ-ಕಾಂಗ್ರೆಸ್ ಮೈತ್ರಿಕೂಟ ಹೈಕೋರ್ಟ್​ಗೆ ಮೊರೆ ಹೋಗಿದೆ.

BJP  Chandigarh mayoral polls  high court  AAP  ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌  ಎಎಪಿ ಕಾಂಗ್ರೆಸ್ ಮೈತ್ರಿಕೂಟ  ಪಂಜಾಬ್ ಹರಿಯಾಣ ಹೈಕೋರ್ಟ್‌
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಎಎಪಿ-ಕಾಂಗ್ರೆಸ್ ಮೈತ್ರಿಕೂಟದಿಂದ ಹೈಕೋರ್ಟ್​ಗೆ ಮೊರೆ

ಚಂಡೀಗಢ:ಮಂಗಳವಾರ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಸೋಲನುಭವಿಸಿದ ಎಎಪಿ-ಕಾಂಗ್ರೆಸ್ ಮೈತ್ರಿಕೂಟವು ಚುನಾವಣೆಯನ್ನು ಮೋಸದಾಟ ಎಂದು ಆರೋಪಿಸಿದೆ. ಮತ್ತೊಮ್ಮೆ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನ 35 ಸದಸ್ಯರ ಸದನದಲ್ಲಿ ಎರಡು ವಿರೋಧ ಪಕ್ಷದ ಪಾಲುದಾರರು ಸುಲಭ ಜಯ ಗಳಿಸುವ ಬಗ್ಗೆ ಊಹಿಸಿದ್ದರು. ಇದು ಇಂಡಿಯಾ ಮೈತ್ರಿಕೂಟಕ್ಕೆ ಆರಂಭಿಕ ಪರೀಕ್ಷೆ ಎಂಬಂತೆ ಬಿಂಬಿತವಾಗಿತ್ತು. ಆದರೆ, ಚುನಾವಣೆ ನಡೆದ ನಂತರ ಎಲ್ಲ ಮೂರು ಉನ್ನತ ಹುದ್ದೆಗಳನ್ನು ಬಿಜೆಪಿ ತನ್ನ ಬಳಿ ಉಳಿಸಿಕೊಂಡಿದೆ. ಮೇಯರ್ ಸ್ಥಾನದ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಉಭಯ ಪಕ್ಷಗಳ ಕೌನ್ಸಿಲರ್‌ಗಳು ಸದನದಲ್ಲಿ ಕೋಲಾಹಲ ಸೃಷ್ಟಿಸಿದರು.

ಮೇಯರ್ ಗಾದಿಗೇರಿದ ಮನೋಜ್ ಸೋಂಕರ್:ಮೇಯರ್ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಅವರು ಎಎಪಿಯ ಕುಲದೀಪ್ ಕುಮಾರ್ ಅವರನ್ನು ಮಣಿಸಿದರು. ಕುಲದೀಪ್ ಕುಮಾರ್ 12 ಮತ ಪಡೆದರೆ, ಮನೋಜ್ ಸೋಂಕರ್ 16 ಮತಗಳನ್ನು ಗಳಿಸಿದರು. ಎಂಟು ಮತಗಳು ಅಸಿಂಧು ಎಂದು ಘೋಷಿಸಲಾಯಿತು. ಪ್ರತಿಪಕ್ಷಗಳ ಬಹಿಷ್ಕಾರದ ನಂತರ, ಬಿಜೆಪಿ ನಾಮನಿರ್ದೇಶಿತರಾದ ಕುಲ್ಜಿತ್ ಸಂಧು ಮತ್ತು ರಾಜಿಂದರ್ ಶರ್ಮಾ ಕ್ರಮವಾಗಿ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಆಯ್ಕೆಯಾದರು. ಇಬ್ಬರು ತಲಾ 16 ಮತಗಳನ್ನು ಪಡೆದಿದ್ದಾರೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಮಂಗಳವಾರ ಚುನಾವಣೆ ನಡೆಯಿತು. ಪ್ರತಿಪಕ್ಷದ ಅನಿಲ್ ಮಸಿಹ್ ಅವರು, ಮತಪತ್ರಗಳನ್ನು ಟ್ಯಾಂಪರಿಂಗ್ ಮಾಡಲಾಗಿದೆ ಎಂದು ಆರೋಪಿಸಿದರು. ಫಲಿತಾಂಶದ ಕೆಲವೇ ಗಂಟೆಗಳ ನಂತರ, ಆಮ್ ಆದ್ಮಿ ಪಕ್ಷದ ಪರಾಜಿತ ಅಭ್ಯರ್ಥಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಎಎಪಿ ಪಕ್ಷದ ಮುಖಂಡರು ತಿಳಿಸಿದ್ದಾರೆ.

ನ್ಯಾಯಾಲಯವು ಪ್ರಸ್ತುತ ಫಲಿತಾಂಶಗಳನ್ನು ಬದಿಗಿಟ್ಟು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಹೊಸ ಚುನಾವಣೆಗೆ ಆದೇಶಿಸಬೇಕೆಂದು ಪಕ್ಷ ಬಯಸುತ್ತದೆ. ಎಎಪಿ ನಾಯಕರು ಬುಧವಾರ ಈ ವಿಷಯದ ವಿಚಾರಣೆಯನ್ನು ನಿರೀಕ್ಷಿಸಿದ್ದರು. ಫಲಿತಾಂಶದ ನಂತರ ಪ್ರತಿಪಕ್ಷದ ಕೌನ್ಸಿಲರ್‌ಗಳು ಸದನದ ಹೊರಗೆ ಧರಣಿ ಕುಳಿತು, ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.

ಪ್ರತಿಪಕ್ಷ ನಾಯಕರಿಂದ ವಾಗ್ದಾಳಿ:ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಿ, ''ಈ ಚುನಾವಣೆ ನಾಚಿಕೆಗೇಡು'' ಎಂದು ಗರಂ ಆದರು. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಹಗಲು ವಂಚನೆ ನಡೆದಿದೆ ಎಂದು ದೂರಿದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಇದನ್ನು ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಕಪ್ಪು ದಿನ ಎಂದು ಕರೆದಿದ್ದಾರೆ.

ಇನ್ನೊಂದೆಡೆ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿಯಿಸಿ, ''ಇಂಡಿಯಾ ಮೈತ್ರಿಕೂಟವು ಬಿಜೆಪಿ ಎದುರು ಸೋತಿದ್ದು, ಅವರ ಅಂಕಗಣಿತ ಅಥವಾ ರಸಾಯನಶಾಸ್ತ್ರ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ತೋರಿಸುತ್ತದೆ'' ಎಂದು ವ್ಯಂಗ್ಯವಾಡಿದ್ದಾರೆ.

''ಆರೋಪಗಳನ್ನು ಮಾಡುವುದೇ ಪ್ರತಿಪಕ್ಷಗಳ ಕೆಲಸ. ಸಭಾಧ್ಯಕ್ಷರು ನ್ಯಾಯಯುತವಾಗಿ ಚುನಾವಣೆ ನಡೆಸಿದ್ದಾರೆ. ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋಗ್ರಾಫ್ ಮಾಡಲಾಗಿದೆ. ಮೇಯರ್ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಕೆಲವರು ಮತಪತ್ರಗಳನ್ನು ಹರಿದು ಹಾಕಲು ಯತ್ನಿಸಿದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆಯಿತು" ಎಂದು ಹೇಳಿದರು.

ಇದನ್ನೂ ಓದಿ:ಉದ್ಯೋಗಕ್ಕಾಗಿ ಭೂಮಿ ಹಗರಣ: ತೇಜಸ್ವಿ ಯಾದವರನ್ನ 4 ಗಂಟೆ ವಿಚಾರಣೆ ನಡೆಸಿದ ಇಡಿ

ABOUT THE AUTHOR

...view details