ಕರ್ನಾಟಕ

karnataka

ಪ್ರಧಾನಿಯ ನಯಾ ಕಾಶ್ಮೀರ್​ ಕನಸು ನನಸಾಗದು: ರಶೀದ್ ಇಂಜಿನಿಯರ್ - Rashid Engineer

By ANI

Published : Sep 12, 2024, 1:00 PM IST

ಪ್ರಧಾನಿಯ ನಯಾ ಕಾಶ್ಮೀರ್​ (ಹೊಸ ಕಾಶ್ಮೀರ) ದೃಷ್ಟಿಕೋನ ವಿಫಲವಾಗುತ್ತದೆ ಎಂದು ಬಾರಮುಲ್ಲಾ ಸಂಸದ ರಶೀದ್ ಇಂಜಿನಿಯರ್ ಹೇಳಿದ್ದಾರೆ.

baramulla-mp-rashid-engineer-says-pm-modi-s-vision-of-naya-kashmir-will-fail
ರಶೀದ್​ ಇಂಜಿನಿಯರ್​ (ANI)

ಶ್ರೀನಗರ:ದೇಶದ್ರೋಹ ಪ್ರಕರಣದಲ್ಲಿ ಸಿಲುಕಿ,ತಿಹಾರ್​ ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಹೊರಬಂದ ಬಾರಮುಲ್ಲಾ ಕ್ಷೇತ್ರದ ಸಂಸದ ರಶೀದ್ ಇಂಜಿನಿಯರ್​​ ಇಂದು ಕಾಶ್ಮೀರಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ನೂರಾರು ಬೆಂಬಲಿಗರು ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿ ಆಗಸ್ಟ್​​ 5ರಂದು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿರ್ಧಾರವನ್ನು ನಾನು ಸ್ವೀಕರಿಸುವುದಿಲ್ಲ" ಎಂದರು.

"ನೀವೆಲ್ಲ ಈ ಮಟ್ಟಿಗೆ ನನಗೆ ಬೆಂಬಲ ನೀಡುತ್ತಿರುವುದಕ್ಕೆ ನಾನು ಕೃತಜ್ಞ. ಕಾಶ್ಮೀರ ದುರ್ಬಲವಲ್ಲ ಎಂಬುದನ್ನು ನಾನು ಪ್ರತಿಯೊಬ್ಬರಿಗೂ ಹೇಳಬಯಸುತ್ತೇನೆ. ಕಾಶ್ಮೀರದ ಜನತೆ ಗೆಲ್ಲುತ್ತಾರೆ. ಆಗಸ್ಟ್​ 5ರಂದು ಪ್ರಧಾನಿ ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವೀಕರಿಸುವುದಿಲ್ಲ" ಎಂದು ಪುನರುಚ್ಛರಿಸಿದರು.

"ಪ್ರಧಾನಿಯವರ ನಯಾ ಕಾಶ್ಮೀರ್​ (ಹೊಸ ಕಾಶ್ಮೀರ) ದೃಷ್ಟಿಕೋನ ವಿಫಲವಾಗಲಿದೆ. ಸತ್ಯ ನಮ್ಮ ಜೊತೆಗಿದೆ, ಅದೇ ಗೆಲ್ಲಲಿದೆ. ನ್ಯಾಯದ ಭರವಸೆಯಲ್ಲಿ ನಾನಿದ್ದೇನೆ. ನಿರ್ಣಾಯಕ ಹಂತದಲ್ಲಿರುವ ಕಾಶ್ಮೀರದಲ್ಲಿ ಚುನಾವಣೆ ಮುಖ್ಯವಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನರು ಒಗ್ಗಟ್ಟಾಗಿ ಯಶಸ್ವಿಯಾಗಿ ಹೋರಾಡಲಿದ್ದಾರೆ" ಎಂದು ಹೇಳಿದರು.

ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಆರೋಪದಡಿ ತಿಹಾರ್​ ಜೈಲಿನಲ್ಲಿದ್ದ ರಶೀದ್ ಇಂಜಿನಿಯರ್‌ಗೆ​ ದೆಹಲಿಯ ವಿಶೇಷ ಎನ್​ಐಎ ನ್ಯಾಯಾಲಯ ಇತ್ತೀಚಿಗೆ ಮಧ್ಯಂತರ ಜಾಮೀನು ನೀಡಿತ್ತು. ಈ ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಯಾವುದೇ ಹೇಳಿಕೆ ನೀಡದಂತೆ ಕೋರ್ಟ್ ಷರತ್ತು ವಿಧಿಸಿದೆ.

ಇದನ್ನೂ ಓದಿ:ಜಮ್ಮು- ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್​ಕೌಂಟರ್​ಗೆ ಇಬ್ಬರು ಉಗ್ರರು ಹತ

ABOUT THE AUTHOR

...view details