ಕರ್ನಾಟಕ

karnataka

ETV Bharat / bharat

ಬಾಂಗ್ಲಾದೇಶಕ್ಕೆ ಮತ್ತೆ 16,000 ಟನ್ ಅಕ್ಕಿ ಕಳುಹಿಸಿಕೊಟ್ಟ ಭಾರತ - INDIA BANGLADESH RELATIONS

ಬಾಂಗ್ಲಾದೇಶಕ್ಕೆ ಭಾರತ ಎರಡು ಹಡಗುಗಳ ಮೂಲಕ 16,400 ಟನ್ ಅಕ್ಕಿ ಕಳುಹಿಸಿಕೊಟ್ಟಿದೆ.

ಬಾಂಗ್ಲಾದೇಶಕ್ಕೆ ಮತ್ತೆ 16,000 ಟನ್ ಅಕ್ಕಿ ಕಳುಹಿಸಿಕೊಟ್ಟ ಭಾರತ
ಬಾಂಗ್ಲಾದೇಶಕ್ಕೆ 16,000 ಟನ್ ಅಕ್ಕಿ ಕಳುಹಿಸಿದ ಭಾರತ (ETV Bharat)

By ETV Bharat Karnataka Team

Published : Feb 2, 2025, 11:17 AM IST

ಢಾಕಾ(ಬಾಗ್ಲಾದೇಶ): ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇಖ್‌ ಹಸೀನಾ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ನಂತರ ಉಭಯ ದೇಶಗಳ ನಡುವೆ ಸಂಬಂಧ ಹದಗೆಟ್ಟಿದ್ದು, ಈ ನಡುವೆಯೂ ಭಾರತ ಬಾಂಗ್ಲಾದೇಶಕ್ಕೆ ಎರಡನೇ ಬಾರಿಗೆ ಇದೀಗ ಸಾವಿರಾರು ಟನ್‌ ಅಕ್ಕಿ ಕಳುಹಿಸಿಕೊಟ್ಟಿದೆ. ಅಪಾರ ಪ್ರಮಾಣದ ಅಕ್ಕಿ ಹೊತ್ತ ಎರಡು ಹಡಗುಗಳು ಶನಿವಾರ ಬಾಂಗ್ಲಾದ ಮೊಂಗ್ಲಾ ಬಂದರು ತಲುಪಿದವು.

"ಎರಡು ಬೃಹತ್ ಗಾತ್ರದ ಹಡಗುಗಳು 16,400 ಟನ್‌ ಅಕ್ಕಿ ಹೊತ್ತು ಇಲ್ಲಿನ ಬಂದರು ತಲುಪಿವೆ" ಎಂದು ಢಾಕಾ ಟ್ರಿಬ್ಯೂನ್ ದಿನಪತ್ರಿಕೆ ವರದಿ ಮಾಡಿದೆ.

ಒಪ್ಪಂದದ ಪ್ರಕಾರ, ಬಾಂಗ್ಲಾದೇಶ ಭಾರತದಿಂದ 300,000 ಟನ್‌ ಅಕ್ಕಿ ಪಡೆಯಲಿದೆ. ಮೊಂಗ್ಲಾ ಆಹಾರ ನಿಯಂತ್ರಕರ ಕಚೇರಿ ನೀಡಿದ ಮಾಹಿತಿಯಂತೆ, ಈ ಪೈಕಿ ಶೇ.40ರಷ್ಟು ಅಕ್ಕಿಯನ್ನು ಮೊಂಗ್ಲಾ ಬಂದರಿನಲ್ಲಿ ಇಳಿಸಲಾಗುತ್ತದೆ. ಪನಾಮಾ ಧ್ವಜ ಹೊಂದಿರುವ ಬಿಎಂಸಿ ಆಲ್ಫಾ ಹಡಗು ಒಡಿಶಾದ ಧರ್ಮಾ ಬಂದರಿನಿಂದ 7,700 ಟನ್ ಅಕ್ಕಿ ಹೊತ್ತು ಬಂದರೆ, ಥಾಯ್ಲೆಂಡ್‌ ಧ್ವಜ ಹೊಂದಿದ ಎಂವಿ ಸೀ ಫಾರೆಸ್ಟ್ ಹಡಗು ಕೊಲ್ಕತ್ತಾ ಬಂದರಿನಿಂದ 8,700 ಟನ್‌ ಅಕ್ಕಿ ಸಾಗಿಸಿತು.

ಮುಕ್ತ ಟೆಂಡರ್‌ ಆಮದಿನ ಪೈಕಿ ಮೊದಲ ಸಾಗಣೆಯನ್ನು ಜನವರಿ 20ರಂದು ಬಾಂಗ್ಲಾದೇಶಕ್ಕೆ ರವಾನಿಸಲಾಗಿತ್ತು. ವಿಯೆಟ್ನಾಂ ಧ್ವಜ ಹೊಂದಿದ ಎಂವಿ ಪುಥಾನ್-36 ಹಡಗು 5,700 ಟನ್ ಅಕ್ಕಿ ಸಾಗಿಸಿದೆ ಎಂದು ವರದಿ ಹೇಳಿದೆ.

ಕೆಲ ದಿನಗಳ ಹಿಂದೆ, ಗಡಿ ಭದ್ರತಾ ಪಡೆಯ ಡೆರೆಕ್ಟರ್‌ ಜನರಲ್ ಮಟ್ಟದ ಅಧಿಕಾರಿಗಳ ಸಭೆಯಲ್ಲಿ, ಗಡಿ ಭದ್ರತೆಯ ವಿಚಾರವಾಗಿ ಉಭಯ ದೇಶಗಳ ನಡುವೆ ಇರುವ ಕೆಲವು "ಅಸಮ" ಒಪ್ಪಂದಗಳನ್ನು ರದ್ದುಗೊಳಿಸಲು ತಾನು ಬಯಸುತ್ತಿರುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಭಾರತಕ್ಕೆ ತಿಳಿಸಿತ್ತು.

ಇನ್ನು, 2024ರ ಆಗಸ್ಟ್‌ನಲ್ಲಿ ಪ್ರಧಾನಿ ಶೇಕ್ ಹಸೀನಾ ದೇಶದಿಂದ ಪಲಾಯನಗೈದ ಬಳಿಕ ನೊಬೆಲ್‌ ಪ್ರಶಸ್ತಿ ಪುರಸ್ಕೃತ 84 ವರ್ಷದ ಮುಹಮ್ಮದ್ ಯೂನಸ್, ಬಾಂಗ್ಲಾದೇಶದ ಸರ್ಕಾರದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಬಾಂಗ್ಲಾದಲ್ಲಿ ದೇಶವ್ಯಾಪಿ ನಡೆದ ಭಾರೀ ಹಿಂಸಾತ್ಮಕ ಪ್ರತಿಭಟನೆಗಳು ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಉರುಳಿಸಿದ್ದವು. ಇದರೊಂದಿಗೆ 16 ವರ್ಷಗಳ ಆಡಳಿತವೂ ಅಂತ್ಯಗೊಂಡಿತ್ತು. ಹಾಗಾಗಿ, ಕಳೆದ ಆಗಸ್ಟ್‌ 5ರಿಂದ 77 ವರ್ಷದ ಶೇಖ್ ಹಸೀನಾ ಭಾರತದಲ್ಲಿ ವಾಸಿಸುತ್ತಿದ್ದಾರೆ.

"ಮಾನವತೆಯ ವಿರುದ್ಧದ ಅಪರಾಧ, ನರಹತ್ಯೆ"ಗಳ ಆರೋಪ ಹೊರಿಸಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ಟ್ರಿಬ್ಯೂನಲ್‌, ಶೇಕ್ ಹಸೀನಾ ಹಾಗೂ ಅವರ ಸರ್ಕಾರದ ಕೆಲವು ಸಂಪುಟ ಸಚಿವರು, ಸಲಹೆಗಾರರು ಮತ್ತು ಸೇನೆ ಮತ್ತು ನಾಗರಿಕ ಸೇವೆಗಳ ಅಧಿಕಾರಿಗಳ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಢಾಕಾ, ನವದೆಹಲಿಗೆ ರಾಜತಾಂತ್ರಿಕ ಚಿಪ್ಪಣಿ ಕಳುಹಿಸಿ, ಹಸೀನಾರ ಗಡಿಪಾರಿಗೆ ಆಗ್ರಹಿಸಿತ್ತು.

ಇದನ್ನೂ ಓದಿ: ಹಾಳಾದ, ತುಕ್ಕು ಹಿಡಿದ ಸ್ಥಿತಿಯಲ್ಲಿ ಭಾರತ-ಬಾಂಗ್ಲಾ ಗಡಿ ಬೇಲಿ: ಬಿಎಸ್​ಎಫ್ ಸಮೀಕ್ಷೆಯಲ್ಲಿ ಬಹಿರಂಗ

ಇದನ್ನೂ ಓದಿ: ಪಾಕಿಸ್ತಾನಿಗಳಿಗೆ ವೀಸಾ ಪ್ರಕ್ರಿಯೆ ಸರಳಗೊಳಿಸಿದ ಬಾಂಗ್ಲಾದೇಶ

ABOUT THE AUTHOR

...view details