ಕರ್ನಾಟಕ

karnataka

"ಹದಗೆಟ್ಟ ವ್ಯವಸ್ಥೆ ವಿರುದ್ಧ ಹೋರಾಡಲು ಬಯಸಿದ್ದವಳೇ ವ್ಯವಸ್ಥೆಗೆ ಬಲಿಯಾದಳು": IAS ಕೋಚಿಂಗ್​​​​​ ಸೆಂಟರ್​​​​ಗಳ ಕಥೆ- ವ್ಯಥೆ - tanya soni lost life in delhi

By ETV Bharat Karnataka Team

Published : Jul 30, 2024, 10:43 PM IST

ದೆಹಲಿಯ ಕೋಚಿಂಗ್​ ಸೆಂಟರ್​ನಲ್ಲಿ ಸಾವನ್ನಪ್ಪಿದ ಮೂವರು ಐಎಎಸ್​ ಆಕಾಂಕ್ಷಿಗಳ ಪೈಕಿ ಬಿಹಾರದ ತಾನ್ಯಾ ಸೋನಿ ಅವರು ಒಬ್ಬರಾಗಿದ್ದಾರೆ. ಇಂದು ಅವರ ಗ್ರಾಮಕ್ಕೆ ಶವ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ದೆಹಲಿಯ ಕೋಚಿಂಗ್​ ಸೆಂಟರ್ ದುರಂತ
ದೆಹಲಿಯ ಕೋಚಿಂಗ್​ ಸೆಂಟರ್ ದುರಂತ (ETV Bharat)

ಔರಂಗಾಬಾದ್ (ಬಿಹಾರ):"ಆಕೆ ಈ ವ್ಯವಸ್ಥೆ ಬದಲಿಸಲು ಬಯಸಿದ್ದಳು, ಸಮಾಜದಲ್ಲಿನ ಕೆಟ್ಟ ಪರಿಸ್ಥಿತಿಯನ್ನು ಸರಿ ದಾರಿಗೆ ತರಬೇಕು ಎಂದು ಕನಸು ಕಂಡಿದ್ದಳು. ಆದರೆ, ಅದೇ ವ್ಯವಸ್ಥೆ ಆಕೆಯನ್ನು ಬಲಿ ಪಡೆದುಕೊಂಡಿತು." ಇದು ದೆಹಲಿಯ ಕೋಚಿಂಗ್​ ಸೆಂಟರ್​​​ನಲ್ಲಿ ಮಳೆ ನೀರು ನುಗ್ಗಿ ಸಾವನ್ನಪ್ಪಿದ ಐಎಎಸ್​​ ಆಕಾಂಕ್ಷಿ ಬಿಹಾರದ ತಾನ್ಯಾ ಸೋನಿ ಅವರ ಕುಟುಂಬಸ್ಥರ ಅಳಲಾಗಿದೆ.

ತಾನ್ಯಾ ಅವರನ್ನು ಕಳೆದುಕೊಂಡ ಕುಟುಂಬದ ರೋಧನೆ ಕರುಳು ಕಿತ್ತು ಬರುವಂತಿದೆ. ಐಎಎಸ್​ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದ ಮಗಳು ಇನ್ನಿಲ್ಲ ಎಂಬುದು ಎಲ್ಲರನ್ನೂ ಧೃತಿಗೆಡಿಸಿದೆ. ಮುಂದೊಂದು ದಿನ ತಮ್ಮ ಮಗಳು ಅಧಿಕಾರಿಯಾಗಿ ಹದಗೆಟ್ಟ ವ್ಯವಸ್ಥೆಯನ್ನು ಸರಿ ಮಾಡುವ ದಿಟ್ಟೆಯಾಗುತ್ತಾಳೆ ಎಂದುಕೊಂಡವರಿಗೆ, ಅದೇ ಹಾಳಾದ ವ್ಯವಸ್ಥೆ ಭಾವಿ ಅಧಿಕಾರಿಣಿಯನ್ನು ಬಲಿ ಪಡೆದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತಾನ್ಯಾ ಸೋನಿ ಅವರ ಕುಟುಂಬದಲ್ಲಿ ಆಕೆಯ ಸಾವು ಆಘಾತವನ್ನೇ ತಂದಿದೆ. ತಾನ್ಯಾ ಅವರ ಮೃತದೇಹ ದೆಹಲಿಯಿಂದ ಬಿಹಾರದ ಔರಂಗಾಬಾದ್‌ಗೆ ತಂದಾಗ ಕುಟುಂಬಸ್ಥರ ಆರ್ತನಾದ ಅಲ್ಲಿದ್ದ ಎಲ್ಲ ಹೃದಯಗಳನ್ನು ನಡುಗಿಸಿತ್ತು. ತಂದೆ ವಿಜಯ್ ಅವರು ಮಗಳ ಶವ ಕಂಡು ಕೊರಗುತ್ತಿದ್ದರು. ಮೊಮ್ಮಗಳ ಸಾವಿನಿಂದ ಅಜ್ಜ ಗೋಪಾಲ್ ಪ್ರಸಾದ್ ಅವರು ಕುಂತಲ್ಲೇ ಕುಸಿದಿದ್ದರು. ಹಿರಿವಯಸ್ಸಿನ ಜೀವ ತನ್ನ ಕಣ್ಣ ಮುಂದೆ ಪುಟ್ಟ ಪ್ರಾಣ ಹೋಗಿದ್ದನ್ನು ಕಂಡು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದರು.

ತಾಯಿಯ ಕಣ್ಣೀರ ಕೋಡಿ :ತಾನ್ಯಾ ಅವರ ತಾಯಿ ಬಬಿತಾ ಅವರು ಕಣ್ಣಲ್ಲಿ ನೀರು ಉಕ್ಕಿ ಬರುತ್ತಿತ್ತು. ಭುಜದೆತ್ತರ ಬೆಳೆದ ಮಗಳ ಶವ ಮನೆ ಮುಂದೆ ನೋಡಿ ಆಕೆಯ ಹೃದಯವೇ ಹೊಡೆದು ಹೋಗಿತ್ತು. ಸಹೋದರ ಕೂಡ ನಿರಂತರವಾಗಿ ಅಳುತ್ತಿದ್ದ. ಗ್ರಾಮದ ಜನರು, ಶಾಸಕರು ಸ್ಥಳಕ್ಕೆ ಆಗಮಿಸಿದ್ದರು.

ಬದುಕಿನೊಂದಿಗೆ ಆಟವಾಡುವುದೇಕೆ? :ತಾನ್ಯಾ ಸಾವಿಗೆ ಯಾರು ಕಾರಣ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೋಚಿಂಗ್ ಸೆಂಟರ್​ ಅಥವಾ ದೆಹಲಿಯಲ್ಲಿನ ಹದಗೆಟ್ಟ ವ್ಯವಸ್ಥೆಯೇ ಎಂಬುದು ಪ್ರಶ್ನೆ. ಐಎಎಸ್ ಆಗುವ ಮೂಲಕ ದೇಶಸೇವೆ ಮಾಡಬೇಕೆಂದುಕೊಂಡಿದ್ದ ಯುವತಿಯ ವಿದ್ಯಾಭ್ಯಾಸದ ವೇಳೆ ಸರ್ಕಾರಗಳ ನಿರ್ಲಕ್ಷ್ಯ ಆಕೆಯ ಪ್ರಾಣವನ್ನೇ ಬಲಿಪಡೆದಿದೆ.

ಕೋಚಿಂಗ್ ಸಂಸ್ಥೆಯ ವಿರುದ್ಧ ಯಾವುದೇ ಕಠಿಣ ಕ್ರಮವಾಗಬೇಕು. ಅದನ್ನು ರದ್ದು ಮಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಏನೇ ಆದರೂ, ನನ್ನ ಸಹೋದರಿ ಹಿಂತಿರುಗಲು ಸಾಧ್ಯವಿಲ್ಲ ಎಂದು ತಾನ್ಯಾ ಸೋನಿ ಅವರ ಸೋದರಸಂಬಂಧಿ ಗೋಳಿಟ್ಟು ಅಳುತ್ತಿರುವುದು ಹೃದಯ ಹಿಂಡುತ್ತಿತ್ತು.

ತಾನ್ಯಾ ಅವರ ತಂದೆ ತೆಲಂಗಾಣ ಸರ್ಕಾರದ ಗಣಿ ಇಲಾಖೆಯಲ್ಲಿ ಎಂಜಿನಿಯರ್. ಮೂವರು ಸಹೋದರರು ಮತ್ತು ಸಹೋದರಿಯರು ಸಿಕಂದರಾಬಾದ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಸೋದರಿ ಪಾಲಕ್ ಅವರು ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಸಹೋದರ ಆದಿತ್ಯ ಸಿಕಂದರಾಬಾದ್‌ನಲ್ಲಿ ಓದುತ್ತಿದ್ದಾರೆ. ಈ ತಿಂಗಳಲ್ಲಿ ತಾನ್ಯಾ ತಮ್ಮ 21 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ, ವಿಧಿಯಾಟದಲ್ಲಿ ಸೋತಿದ್ದಾರೆ.

ಇದನ್ನೂ ಓದಿ:ದೆಹಲಿ ಕೋಚಿಂಗ್‌ ಕೇಂದ್ರ ದುರಂತ: ಸ್ಟೋರ್‌ ರೂಂ ಜಾಗದಲ್ಲಿ ಗ್ರಂಥಾಲಯ! 13 ಅಕ್ರಮ ಕೋಚಿಂಗ್​ ಸೆಂಟರ್‌ಗಳ ಮೇಲೆ ಕ್ರಮ - Delhi Coaching Centre Tragedy

ABOUT THE AUTHOR

...view details