ಕರ್ನಾಟಕ

karnataka

ಇಂದು ಕಾಶ್ಮೀರದಲ್ಲಿ ಮೊದಲ ಹಂತದ ಚುನಾವಣೆ: 24 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ - Phase 1 Of Kashmir Elections

By ETV Bharat Karnataka Team

Published : Sep 17, 2024, 8:04 PM IST

Updated : Sep 18, 2024, 6:25 AM IST

ಜಮ್ಮು ಕಾಶ್ಮೀರದಲ್ಲಿ ಬುಧವಾರ ಮೊದಲ ಹಂತದಲ್ಲಿ 24 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಪ್ರಮುಖವಾಗಿ ನಾಲ್ಕು ಕ್ಷೇತ್ರಗಳ ಮೇಲೆ ರಾಜಕೀಯ ಪಂಡಿತರು ಕಣ್ಣಿಡಲಿದ್ದಾರೆ.

assembly-seats-to-watch-out-for-in-first-phase-of-jammu-kashmir-elections
ಕಾಶ್ಮೀರದಲ್ಲಿ ಮೊದಲ ಹಂತದ ಚುನಾವಣೆ (ANI)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಒಂದು ದಶಕದ ನಂತರ ಇಲ್ಲಿ ಚುನಾವಣೆಗಳು ನಡೆಯುತ್ತಿವೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. 2019 ರಲ್ಲಿ ಈ ಹಿಂದಿನ ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಲಾಗಿತ್ತು. ಈ ವಿಭಜನೆಯ ನಂತರ ಮೊದಲ ಪ್ರಾದೇಶಿಕ ಚುನಾವಣೆ ಎಂದು ಪರಿಗಣಿಸಲಾಗುತ್ತಿದೆ.

ಈ ಜಿಲ್ಲೆಗಳಲ್ಲಿ ಮತದಾನ:2014 ರಲ್ಲಿ ಕೊನೆಯ ವಿಧಾನಸಭಾ ಚುನಾವಣೆ ಇಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಭಾರತೀಯ ಜನತಾ ಪಕ್ಷ ಒಗ್ಗೂಡಿ ಮೂರು ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರವನ್ನು ರಚಿಸಿ ಆಡಳಿತ ನಡೆಸಿದ್ದವು. ಬುಧವಾರ ಅಂದರೆ ಸೆಪ್ಟೆಂಬರ್ 18 ರಂದು ಮೊದಲ ಹಂತದಲ್ಲಿ 24 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಪುಲ್ವಾಮಾದ ನಾಲ್ಕು , ಶೋಪಿಯಾನ್‌ನ ಎರಡು, ಕುಲ್ಗಾಮ್‌ನ ಮೂರು, ಅನಂತನಾಗ್‌ನ ಏಳು, ರಾಂಬನ್ ಮತ್ತು ಬನಿಹಾಲ್‌ನ ತಲಾ ಎರಡು, ಕಿಶ್ತ್‌ವಾರ್‌ನ ಮೂರು ಮತ್ತು ದೋಡಾ ಜಿಲ್ಲೆಯ ಮೂರು ಸ್ಥಾನಗಳಲ್ಲಿ ಮತದಾನ ನಡೆಯಲಿದೆ.

ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿಗಳು ಮತದಾನಕ್ಕೆ ವ್ಯಾಪಕ ಭದ್ರತೆ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಮಾಡಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಬಹಿರಂಗ ಪ್ರಚಾರ ಸೋಮವಾರ ಸಂಜೆಯೇ ಮುಕ್ತಾಯಗೊಂಡಿದೆ. ಚುನಾವಣಾ ಆಯೋಗದ ಪ್ರಕಾರ 23.27 ಲಕ್ಷ ಮತದಾರರು ಮೊದಲ ಹಂತದಲ್ಲಿ ಮತದಾನ ಮಾಡಲಿದ್ದಾರೆ. ಇದರಲ್ಲಿ 5.66 ಲಕ್ಷ ಯುವ ಮತದಾರರು ಮತ್ತು 1.23 ಲಕ್ಷ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಚುನಾವಣಾ ಆಯೋಗ 24 ಕ್ಷೇತ್ರಗಳಲ್ಲಿ ಮತದಾನಕ್ಕಾಗಿ 3,276 ಮತಗಟ್ಟೆಗಳನ್ನು ಸ್ಥಾಪಿಸಿದೆ.

24 ಸ್ಥಾನಗಳ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮೇಲೆ ರಾಜಕೀಯ ಪಂಡಿತರು ಕಣ್ಣಿಟ್ಟಿದ್ದಾರೆ. ಈ ಮಹತ್ವದ ಕ್ಷೇತ್ರಗಳಲ್ಲಿ ಇಬ್ಬರು ಪಿಡಿಪಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ. ಇಬ್ಬರು ಸಿಖ್ ಸ್ಪರ್ಧಿಗಳು ಕೂಡಾ ಇದ್ದಾರೆ. ನಾಷನಲ್ ಕಾನ್ಫರೆನ್ಸ್​ ಮತ್ತು ಕಾಂಗ್ರೆಸ್ ಪರಸ್ಪರ ಸ್ಪರ್ಧೆಗಿಳಿದಿವೆ.

ಪುಲ್ವಾಮಾದಲ್ಲಿ ವಹೀದ್ ಪ್ಯಾರಾ ವಿರುದ್ಧ ಎನ್‌ಸಿ ಸ್ಪರ್ಧೆ:ಮೊದಲ ಮಹತ್ವದ ಕ್ಷೇತ್ರ ಎಂದರೆ ಅದು ಪುಲ್ವಾಮಾ ವಿಧಾನಸಭಾ ಕ್ಷೇತ್ರವಾಗಿದೆ. ಇಲ್ಲಿ ಪಿಡಿಪಿಯ ಯುವ ನಾಯಕ ವಹೀದ್ ಉರ್ ರೆಹಮಾನ್ ಪಾರಾ ಅವರು ತಮ್ಮ ಪಕ್ಷದ ಮಾಜಿ ಸಹೋದ್ಯೋಗಿ ಮುಹಮ್ಮದ್ ಖಲೀಲ್ ಬಂದ್ ವಿರುದ್ಧ ಹೋರಾಡಲಿದ್ದಾರೆ. 73ರ ಹರೆಯದ ಬಂದ್, 2002, 2008 ಮತ್ತು 2014ರ ವಿಧಾನಸಭೆ ಚುನಾವಣೆಗಳಲ್ಲಿ ಪಿಡಿಪಿ ಟಿಕೆಟ್‌ನಿಂದ ಗೆದ್ದು ಮೂರು ಬಾರಿ ಶಾಸಕರಾಗಿದ್ದರು. ಆದಾಗ್ಯೂ, 370 ನೇ ವಿಧಿ ರದ್ದುಗೊಳಿಸಿದ ನಂತರ PDP ತ್ಯಜಿಸಿ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷವನ್ನು ಸೇರ್ಪಡೆಗೊಂಡಿದ್ದರು.

36ನೇ ವಯಸ್ಸಿನ ವಹೀದ್ ಉರ್ ರೆಹಮಾನ್ ಪಾರಾ ಅವರು 2008 ಮತ್ತು 2014ರ ಚುನಾವಣೆಗಳಲ್ಲಿ ಪುಲ್ವಾಮಾದಿಂದ PDP ಯುವ ನಾಯಕರಾಗಿ ಪ್ರಚಾರ ಮಾಡಿದ್ದರು. ಈಗ ಇಬ್ಬರೂ ಚುನಾವಣಾ ಕಣದಲ್ಲಿ ಎದುರು ಬದುರಾಗಿದ್ದಾರೆ. ಶ್ರೀನಗರ - ಜಮ್ಮು ಹೆದ್ದಾರಿಯಲ್ಲಿ. ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ 2020ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಪಾರಾ ಅವರನ್ನು ಬಂಧಿಸಿ 18 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರಿಸಲಾಗಿತ್ತು.

ಕಾಶ್ಮೀರದಲ್ಲಿ ಮೊದಲ ಹಂತದ ಚುನಾವಣೆ (ANI)

ಟ್ರಾಲ್‌ನಲ್ಲಿ ಸಿಂಗ್ ವಿರುದ್ಧ ಸಿಂಗ್:ಟ್ರಾಲ್ ಅಸೆಂಬ್ಲಿ ವಿಧಾನಸಭಾ ಕ್ಷೇತ್ರವು ಇಬ್ಬರು ಸಿಖ್ ಅಭ್ಯರ್ಥಿಗಳು, ಸ್ವತಂತ್ರ ಮುಸ್ಲಿಂ ಅಭ್ಯರ್ಥಿ ಮತ್ತು PDP ಯ ಹೊಸ ಅಭ್ಯರ್ಥಿ ನಡುವೆ ಆಸಕ್ತಿದಾಯಕ ಹೋರಾಟಕ್ಕೆ ವೇದಿಕೆಯನ್ನು ಕಲ್ಪಿಸಿದೆ. ಇಲ್ಲಿ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಸುರೀಂದರ್ ಸಿಂಗ್ ಚನ್ನಿ ಅವರನ್ನು ಕಣಕ್ಕಿಳಿಸಿದೆ, ಇಂಜಿನಿಯರ್ ರಶೀದ್ ಅವರ ಅವಾಮಿ ಇತೆಹಾದ್ ಪಾರ್ಟಿ (ಎಐಪಿ) ಶಾಂತಿ ಎಂದು ಕರೆಯಲ್ಪಡುವ ಸಿಖ್ ಅಭ್ಯರ್ಥಿ ಡಾ ಹರ್ಬಕ್ಷ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಸಿಂಗ್ PDP ಜೊತೆಗಿದ್ದರು, ಅವರು ಜಿಲ್ಲಾ ಅಭಿವೃದ್ಧಿ ಮಂಡಳಿ (DDC) ಸದಸ್ಯರಾಗಿ ಟ್ರಾಲ್‌ನ ಮುಸ್ಲಿಂ ಬಹುಮತದ ಸ್ಥಾನದಲ್ಲಿ ಚುನಾಯಿತರಾದ ಮೊದಲ ಸಿಖ್ ರಾಜಕಾರಣಿ ಕೂಡಾ ಆಗಿದ್ದಾರೆ.

ನಿವೃತ್ತಿಯಾದ ಒಂದು ತಿಂಗಳ ನಂತರ ಪಿಡಿಪಿಗೆ ಸೇರ್ಪಡೆಗೊಂಡ ಮಾಜಿ ಸರ್ಕಾರಿ ನೌಕರ ರಫೀಕ್ ನಾಯಕ್ ಅವರನ್ನು ಪಿಡಿಪಿ ಹೊಸ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಎನ್‌ಸಿಯ ಹಿರಿಯ ನಾಯಕರಾಗಿದ್ದ ಸ್ವತಂತ್ರ ಅಭ್ಯರ್ಥಿ ಡಾ ಗುಲಾಂ ನಬಿ ಭಟ್ ಅವರು ಪಕ್ಷದ ಮೈತ್ರಿ ಅಭ್ಯರ್ಥಿ ಚನ್ನಿ ಸಿಂಗ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಬಿಜ್‌ಬೆಹರಾದಲ್ಲಿ ಇಲ್ತಿಜಾ ಮುಫ್ತಿ ವಿರುದ್ಧ ಎನ್‌ಸಿ ಅಭ್ಯರ್ಥಿ ಕಣಕ್ಕೆ:PDP ಅಧ್ಯಕ್ಷೆ ಮೆಹಬೂಬಾ ಮುಫ್ತಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ಅವರು ತಮ್ಮ 37 ವರ್ಷದ ಮಗಳು ಇಲ್ತಿಜಾ ಮುಫ್ತಿ ಅವರನ್ನು ಕಣಕ್ಕಿಳಿಸಿದ್ದಾರೆ. ಇಲ್ತಿಜಾ ಅವರು ಬಿಜ್‌ಬೆಹರಾ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಸಿಯ ಹಿರಿಯ ನಾಯಕ ಮತ್ತು ಮಾಜಿ ಎಂಎಲ್‌ಸಿ ಡಾ ಬಶೀರ್ ಅಹ್ಮದ್ ಷಾ ವಿರುದ್ಧ ಸೆಣಸುತ್ತಿದ್ದಾರೆ. ಬಿಜ್​​ಬೆಹರಾ ಕ್ಷೇತ್ರವನ್ನು ಶ್ರೀಗುಫ್ವಾರಾ-ಬಿಜ್‌ಬೆಹರಾ ಎಂದು ಮರುನಾಮಕರಣ ಮಾಡಲಾಗಿದೆ. ಪಿಡಿಪಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಭಟ್ 1998ರ ವಿಧಾನಸಭಾ ಉಪಚುನಾವಣೆಯಿಂದ ಎನ್‌ಸಿ ವಿರುದ್ಧ ನಾಲ್ಕು ಬಾರಿ ಗೆದ್ದಿದ್ದರು. ಬಿಜೆಪಿ ಮಾಜಿ ಎಂಎಲ್ಸಿ ಸೋಫಿ ಯೂಸುಫ್ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಬುಧವಾರ ಇಲ್ತಿಜಾ ಮತ್ತು ಬಶೀರ್ ಅಹಮ್ಮದ್​ ಮಿರ್​ ನಡುವೆ ನೇರ ಸ್ಪರ್ಧೆ ನಡೆಯಲಿದೆ.

ಕಮ್ಯುನಿಸ್ಟ್ ನಾಯಕ ಮುಹಮ್ಮದ್ ಯೂಸುಫ್ ಹೋರಾಟ: ಕುಲ್ಗಾಮ್ ವಿಧಾನಸಭಾ ಕ್ಷೇತ್ರದಲ್ಲಿ ಕಾಶ್ಮೀರ ಕಣಿವೆಯ ಏಕೈಕ ಕಮ್ಯುನಿಸ್ಟ್ ನಾಯಕ ಮುಹಮ್ಮದ್ ಯೂಸುಫ್ ರಾಥರ್ , ಇದೇ ಮೊದಲ ಬಾರಿಗೆ ತನ್ನ ರಾಜಕೀಯ ಪ್ರತಿಸ್ಪರ್ಧಿ ನಿಷೇಧಿತ ಜಮ್ಮತ್ - ಎ - ಇಸಾಮಿ ಅವರನ್ನು ಎದುರಿಸುತ್ತಿದ್ದಾರೆ. ಇಲ್ಲಿ ನೇರ ಚುನಾವಣಾ ಹೋರಾಟವಿದೆ. 2019ರ ಪುಲ್ವಾಮಾ ಆತ್ಮಾಹುತಿ ದಾಳಿಯ ನಂತರ ನಿಷೇಧ ಎದುರಿಸುತ್ತಿರುವ ಧಾರ್ಮಿಕ-ರಾಜಕೀಯ ಸಂಘಟನೆ, ಮಾಜಿ ಜೆಐ ಸದಸ್ಯ ಸಯರ್ ಅಹ್ಮದ್ ರೇಶಿ ಅವರನ್ನು ಬೆಂಬಲಿಸುತ್ತಿದೆ. 45 ವರ್ಷ ವಯಸ್ಸಿನ ರಾಜ್ಯಶಾಸ್ತ್ರ ಉಪನ್ಯಾಸಕ ರೇಶಿ ಅವರು 1996 ರಿಂದ ನಾಲ್ಕು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ 75 ವರ್ಷ ವಯಸ್ಸಿನ ನಾಲ್ಕು ಬಾರಿ ಶಾಸಕರಾದ ತಾರಿಗಾಮಿ ಅವರನ್ನು ಸೋಲಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಈ ನಾಲ್ಕು ಸ್ಥಾನಗಳ ಜೊತೆಗೆ, ಬನಿಹಾಲ್ ಮತ್ತು ಝೈನಾಪೋರಾ ವಿಧಾನಸಭಾ ಕ್ಷೇತ್ರಗಳು ಕುತೂಹಲ ಕೆರಳಿಸಿವೆ. ಬನಿಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಸಿ ಮತ್ತು ಕಾಂಗ್ರೆಸ್ ನೇರ ಹಣಾಹಣಿಯಲ್ಲಿದೆ. ಪ್ರಚಾರದ ಸಮಯದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಸ್ನೇಹಪರವಾಗಿ ಏನನ್ನೂ ಇಟ್ಟುಕೊಳ್ಳದಿದ್ದರೂ ಸಹ INDI ಬ್ಲಾಕ್ ಪಾಲುದಾರರು ಇದನ್ನು "ಸ್ನೇಹಿ" ಸ್ಪರ್ಧೆ ಎಂದು ಹೆಸರಿಸಿದ್ದಾರೆ. ಕಾಂಗ್ರೆಸ್‌ನ ಎರಡು ಬಾರಿ ಶಾಸಕ ಮತ್ತು ಪಕ್ಷದ ಮಾಜಿ ಅಧ್ಯಕ್ಷ ವಿಕಾರ್ ರಸೂಲ್ ಮತ್ತು ಎನ್‌ಸಿಯ ಸಜಾದ್ ಶಾಹೀನ್ ಅವರು ಚೆನಾಬ್ ವ್ಯಾಲಿ ಕ್ಷೇತ್ರದಲ್ಲಿ ನೇರ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಎರಡೂ ಪಕ್ಷಗಳು 90 ಕ್ಷೇತ್ರಗಳ ಪೈಕಿ 83 ಸ್ಥಾನಗಳಲ್ಲಿ ಮೈತ್ರಿಕೂಟದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ:ಜಮ್ಮು ಕಾಶ್ಮೀರ ಚುನಾವಣೆ: ಪರಂಪರೆ ಹಾಗೂ ಪೀಳಿಗೆಯ ಬದಲಾವಣೆಗಾಗಿ ಹೋರಾಟ - Fight For Legacy Generational Shift

Last Updated : Sep 18, 2024, 6:25 AM IST

ABOUT THE AUTHOR

...view details