ಕರ್ನಾಟಕ

karnataka

ETV Bharat / bharat

ರೈತರ ಪ್ರತಿಭಟನೆಯನ್ನು ಬಾಂಗ್ಲಾ ದಂಗೆಗೆ ಹೋಲಿಸಿದ ಕಂಗನಾ: ಸ್ವಪಕ್ಷ ಸೇರಿ ಹಲವು ರೈತ ಸಂಘಟನೆಗಳ ವಿರೋಧ - Kangana Ranaut Statement - KANGANA RANAUT STATEMENT

ರೈತರ ಪ್ರತಿಭಟನೆ ಬಗ್ಗೆ ಹೇಳಿಕೆ ನೀಡಿದ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿ ತಾವು ಮಾತನಾಡಿದ ವಿಡಿಯೋ ತುಣುಕುಗಳನ್ನು ತಮ್ಮ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಈ ವಿಡಿಯೋ ಇದೀಗ ವೈರಲ್​ ಆಗಿದ್ದು, ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಬಿಜೆಪಿ ಸಂಸದೆ ಕಂಗನಾ ರಣಾವತ್
ಬಿಜೆಪಿ ಸಂಸದೆ ಕಂಗನಾ ರಣಾವತ್ (ANI)

By ETV Bharat Karnataka Team

Published : Aug 26, 2024, 7:42 PM IST

ಮಂಡಿ (ಹಿಮಾಚಲ ಪ್ರದೇಶ): ಚಿತ್ರನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ರೈತರ ಪ್ರತಿಭಟನೆಯನ್ನು ಬಾಂಗ್ಲಾದೇಶದ ದಂಗೆಗೆ ಹೋಲಿಸುವ ಮೂಲಕ ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಅವರು, ರೈತರ ಚಳವಳಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೇ ಹೋಗದಿದ್ದರೆ, ಇಂದು ಚಳವಳಿಯು ದೇಶದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಕಾರಣವಾಗುತ್ತಿತ್ತು. ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟಗಳ ಹಿಂದೆ ಚೀನಾ ಮತ್ತು ಅಮೆರಿಕದಂತಹ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಹೇಳುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಂಗನಾ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಿಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ರತಿಪಕ್ಷ ಸೇರಿದಂತೆ ಹಲವು ರೈತ ಮುಖಂಡರು ಕಂಗನಾ ಹೇಳಿಕೆಗೆ ಕಿಡಿಕಾರಿವೆ. ಸ್ವಪಕ್ಷ ಬಿಜೆಪಿ ಕೂಡ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದೆ. ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದರಿಂದ ಇವರ ಹೇಳಿಕೆ ಈಗ ಚೆರ್ಚೆಗೆ ಗ್ರಾಸವಾಗಿದೆ.

ಕಂಗನಾ ಹೇಳಿಕೆಗೆ ಬಿಜೆಪಿ ಪಕ್ಷದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹರಿಯಾಣ ಬಿಜೆಪಿ ಘಟಕದ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಸಮಯದಲ್ಲಿ ಬಿಜೆಪಿ ಸಂಸದರು ಇಂತಹ ಹೇಳಿಕೆಗಳನ್ನು ನೀಡುವ ಅಗತ್ಯವಿಲ್ಲ ಎಂದಿರುವ ಬಿಜೆಪಿ ನಾಯಕರು, ಕಂಗನಾ ಅವರ ಹೇಳಿಕೆ ಕುರಿತು ವರಿಷ್ಠರೊಂದಿಗೆ ಚರ್ಚಿಸುತ್ತೇವೆ ಎಂದಿದ್ದಾರೆ. ಬಿಜೆಪಿ ಹೈಕಮಾಂಡ್​ ಕೂಡ ಭವಿಷ್ಯದಲ್ಲಿ ಅಂತಹ ಹೇಳಿಕೆಗಳನ್ನು ನೀಡದಂತೆ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದೆ.

ಕಾಂಗ್ರೆಸ್​ ನಾಯಕರು ಸೇರಿದಂತೆ ಹಲವರು ಕಂಗನಾ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಕಂಗನಾ ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಜ್ ಕುಮಾರ್ ವರ್ಕಾ, ಈ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ದಿಬ್ರುಗಢ ಜೈಲಿಗೆ ಕಳುಹಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಮನವಿ ಮಾಡಿದ್ದಾರೆ.

ಆಪ್​ ಪಕ್ಷದ ಪಂಜಾಬ್ ಹಿರಿಯ ವಕ್ತಾರ ನೀಲ್ ಗಾರ್ಗ್ ಕೂಡ ಕಿರಿಕಾರಿದ್ದು, ಕಂಗನಾ ನಿರಂತರವಾಗಿ ಪಂಜಾಬ್ ವಾತಾವರಣವನ್ನು ಹಾಳು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಕೆಲವೊಮ್ಮೆ ಪಂಜಾಬ್‌ನ ರೈತರನ್ನು ದೂಷಿಸುವ ಹೇಳಿಕೆಗಳನ್ನು ನೀಡುತ್ತಾರೆ, ಕೆಲವೊಮ್ಮೆ ಪಂಜಾಬಿಗಳನ್ನು ಭಯೋತ್ಪಾದಕರೆಂದು ಕರೆಯುತ್ತಾರೆ. ಏನೇ ಹೇಳಿಕೆ ನೀಡಿದರೂ ನಡೆಯುತ್ತದೆ. ತಮಗೆ ಕೇಂದ್ರದ ಬಲವಿದೆ ಅಂತ ಅಂದುಕೊಂಡಿರಬಹುದು. ಪಕ್ಷವು ಕೂಡ ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆಗಳನ್ನು ನೀಡುವಂತೆ ಪ್ರೇರೇಪಿಸುತ್ತಿರಬಹುದು ಎಂದಿದ್ದಾರೆ.

ಶಿರೋಮಣಿ ಅಕಾಲಿದಳದ ಮಾಜಿ ಸಂಸದ ಸುಖಬೀರ್ ಬಾದಲ್, ಕಂಗನಾ ವಿರುದ್ಧ 295ಎ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಂಗನಾ ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರಬಹುದು. ಮಾತನಾಡುವ ಎಲ್ಲ ಮಾತು ನಾಗ್ಪುರದಿಂದ ಬರೆಯಲಾಗಿದೆ. ಆದರೆ, ಇಂತಹವರ ಹೇಳಿಕೆಗಳ ಬಗ್ಗೆ ರೈತರು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಹೋರಾಟ ಹೀಗೆಯೇ ಮುಂದುವರೆಯುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ದಿಲ್ಬಾಗ್ ಸಿಂಗ್ ಗಿಲ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ದಿಲ್‌ಬಾಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖ್ಯಾತ ಯೂಟ್ಯೂಬರ್‌ ಧ್ರುವ ರಾಠಿ ಕೂಡ ಕಿಡಿಕಾರಿದ್ದಾರೆ. ಮೊದಲ ಹೊಡೆತ ತಿಂದ ಗುರುತು ಇನ್ನೂ ಹೋಗಿಲ್ಲ, ಇದೀಗ ಮತ್ತೆ ಅದೇ ಮಾತನ್ನು ಹೇಳಿದ್ದೀರಿ. ನಿಮ್ಮ ಈ ಮಾತು ಕೇಳಿದರೇ ಆ ಮಹಿಳೆ ನಿನ್ನ ಎರಡೂ ಕೆನ್ನೆಗಳಿಗೆ ಬಾರಿಸಬಹುದು. ನಿಮ್ಮ ಪ್ರತಿ ಹೆಜ್ಜೆಗಳು ಎಲ್ಲರನ್ನೂ ಬೆಚ್ಚಿಬೀಳಿಸುತ್ತಿವೆ ಎಂದಿದ್ದಾರೆ.

ಮತ್ತೊಂದೆಡೆ, ಕಂಗನಾ ರಣಾವತ್ ಅವರ ಮುಂಬರುವ ಎಮರ್ಜೆನ್ಸಿ ಚಿತ್ರಕ್ಕೆ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ನಿರಂತರ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಪರಬಂಧಕ್ ಸಮಿತಿಯು ಚಿತ್ರವನ್ನು ನಿಷೇಧಿಸುವಂತೆ ಕೋರಿದೆ.

ಇದನ್ನೂ ಓದಿ:ಜಮ್ಮು & ಕಾಶ್ಮೀರ ಚುನಾವಣೆ: 44 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಹಿಂಪಡೆದ ಬಿಜೆಪಿ - J and K polls

ABOUT THE AUTHOR

...view details