ಕರ್ನಾಟಕ

karnataka

ಕ್ಷೀಪಣಿ ಪರೀಕ್ಷೆ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ ಒಡಿಶಾ ಸರ್ಕಾರ - Missile Test

By ETV Bharat Karnataka Team

Published : Jul 31, 2024, 5:33 PM IST

ಜುಲೈ 31 ರಿಂದ ಆಗಸ್ಟ್ 2 ರವರೆಗೆ ಒಡಿಶಾ ಕರಾವಳಿ ಉದ್ದಕ್ಕೂ ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆ ನಿರ್ಬಂಧಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಏಕೆಂದರೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರಗಳಿಂದ ಕ್ಷಿಪಣಿಗಳನ್ನು ಪರೀಕ್ಷಿಸಲಿದೆ.

vDRDO TEAM  FISHING RESTRICTION IN BAY  MISSILE TESTS IN ODISHA  JAGATSINGHPUR ADMINISTRATION
ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ ಒಡಿಶಾ ಸರ್ಕಾರ (ETV Bharat)

ಪರದೀಪ್ (ಒಡಿಶಾ): ಬಾಲಸೋರ್​ನ ಚಂಡೀಪುರ ಕ್ಷಿಪಣಿ ಘಟಕದಿಂದ ದೂರಗಾಮಿ ಕ್ಷಿಪಣಿಗಳ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ ಒಡಿಶಾ ಕರಾವಳಿಯಲ್ಲಿ ಸರ್ಕಾರ ಎಚ್ಚರಿಕೆ ನೀಡಿದೆ. ಇಂದಿನಿಂದ (ಜುಲೈ 31) ಆಗಸ್ಟ್ 2 ರವರೆಗೆ ಬೆಳಗ್ಗೆ 9:30 ರಿಂದ ಸಂಜೆ 4:30 ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕೆ ಮತ್ತು ವನ್ಯಜೀವಿ ಇಲಾಖೆ ಸೂಚಿಸಿದೆ.

ಮೀನುಗಾರರಿಗೆ ಎಚ್ಚರಿಕೆ ನೀಡಲು ಪರದೀಪ್​ದ ಸ್ಯಾಂಡ್‌ಕುಡ್ ಬಸ್ತಿ, ನುಬಜಾರ್ ಬಸ್ತಿ, ಅಥರ್‌ಬಂಕಿ ಸ್ಯಾಂಡ್‌ಪ್ಲಾಟ್, ಚೌಮುಹಾನಿ ಮತ್ತು ನೆಹರುಬಂಗ್ಲಾ ಮೀನುಗಾರಿಕಾ ಬಂದರಿನಲ್ಲಿ ವಿಶೇಷ ಶಿಬಿರವನ್ನು ಸ್ಥಾಪಿಸಲಾಗಿತ್ತು. ಜುಲೈ 24 ಮತ್ತು 26 ರ ನಡುವಿನ ಕ್ಷಿಪಣಿ ಪರೀಕ್ಷಾ ಕಾರ್ಯಕ್ರಮವು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇಂದಿನಿಂದ 31 ರಿಂದ ಆಗಸ್ಟ್ 2 ರವರೆಗೆ ಬಹು ಕ್ಷಿಪಣಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ಮೀನು ಹಿಡಿಯಲು ಮೀನುಗಾರರು ತಮ್ಮ ದೋಣಿಗಳು ಮತ್ತು ಯಾಂತ್ರೀಕೃತ ದೋಣಿಗಳನ್ನು ತೆಗೆದುಕೊಂಡು ಹೋಗುವುದರಿಂದ ಮೀನುಗಾರರಿಗೆ ಮತ್ತು ದೋಣಿ ಮಾಲೀಕರಿಗೆ ಮೀನುಗಾರಿಕೆ ಮತ್ತು ವನ್ಯಜೀವಿ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ ಪ್ಯಾರಡೈಸ್ ಬಂದರಿನಲ್ಲೂ ಎಚ್ಚರಿಕೆ ನೀಡಲಾಗಿದೆ. ಅಂದು ಪ್ಯಾರಡೈಸ್ ಬಂದರಿಗೆ ಆಗಮಿಸುವ ಹಡಗುಗಳಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

ಕ್ಷಿಪಣಿಗಳ ದೊಡ್ಡ ಭಾಗಗಳು ಸಮುದ್ರ ಮತ್ತು ಅದರ ಹತ್ತಿರದ ಪ್ರದೇಶಗಳಿಗೆ ಬೀಳುವ ಕಾರಣ ಪರೀಕ್ಷೆಯ ಸಮಯದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಕ್ಷಿಪಣಿಯ ಭಾಗಗಳು ಕಡಲತೀರ, ಕಾಡುಗಳು ಮತ್ತು ಹತ್ತಿರದ ಹಳ್ಳಿಗಳಲ್ಲಿ ಬೀಳಬಹುದು ಎಂದು ಮೀನುಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ಕ್ಷಿಪಣಿಗಳ ಯಾವುದೇ ಭಾಗಗಳನ್ನು ಸಂಗ್ರಹಿಸಲು ಗ್ರಾಮಸ್ಥರಿಗೆ ಅನುಮತಿ ಇಲ್ಲ. ಚಂಡೀಪುರ ಮತ್ತು ಅಬ್ದುಲ್ ಕಲಾಂ ದ್ವೀಪದಲ್ಲಿ ಕ್ಷಿಪಣಿ ಪರೀಕ್ಷಾ ಶ್ರೇಣಿಗಳ ದಕ್ಷಿಣಕ್ಕೆ 55 ಕಿಮೀ ದೂರವನ್ನು ನಿಷೇಧಿತ ಪ್ರದೇಶಗಳೆಂದು ಅಧಿಕಾರಿಗಳು ಘೋಷಿಸಿದ್ದಾರೆ.

ಕಳೆದ ವಾರ ಡಿಆರ್​ಡಿಒ ನಡೆಸಿದ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗದ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಬಾಲಸೋರ್​ ಜಿಲ್ಲಾಡಳಿತ ಸುಮಾರು 10 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿತ್ತು. ಯಾವುದೇ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಈ ಕ್ರಮ ತೆಗೆದುಕೊಂಡಿತ್ತು. ಈ ಬಗ್ಗೆ ಕ್ಷಿಪಣಿ ಪರೀಕ್ಷೆ ನಡೆಯುವ ಸುತ್ತಮುತ್ತಲ ಗ್ರಾಮಗಳ ಜನರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.

ಓದಿ:ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್: ಜುಲೈ 31 ರಿಂದ ಆಗಸ್ಟ್​​ 4ರ ವರೆಗೆ ನೋಂದಣಿಗೆ ಅವಕಾಶ - NEET UG Counselling

ABOUT THE AUTHOR

...view details