ಮೈಸೂರು ದಸರಾದ ಗಜಪಯಣವು ಭಾನುವಾರದಿಂದ ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಚೈತ್ರ(48) ಮತ್ತು ಲಕ್ಷ್ಮೀ(22) ಎರಡು ಹೆಣ್ಣಾನೆಗಳಿಗೆ ಮದ್ದೂರು ವಲಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಿ, ಗೋಪಾಲಸ್ವಾಮಿ ಬೆಟ್ಟದ ಅರ್ಚಕರಾದ ಗೋಪಾಲಕೃಷ್ಣ ಭಟ್ಟರಿಂದ ಆನೆಗಳಿಗೆ ಪೂಜೆ ನೆರವೇರಿಸಿ ಹಸಿರು ನಿಶಾನೆ ತೋರುವ ಮೂಲಕ ನಾಡಹಬ್ಬಕ್ಕೆ ಇಂದು ಸಂಜೆ ಕಳುಹಿಸಿಕೊಡಲಾಯಿತು. ಶಾಸಕ ಸಿ.ಎಸ್.ನಿರಂಜನಕುಮಾರ್ ಆನೆಗಳಿಗೆ ಬಾಳೆಹಣ್ಣು, ಬೆಲ್ಲ, ಕಬ್ಬು ತಿನ್ನಿಸಿ ಬೀಳ್ಕೊಟ್ಟರು. ಸದ್ಯ ಆನೆಗಳು ನಾಗರಹೊಳೆಗೆ ತೆರಳುತ್ತಿದ್ದು, ನಂತರ ಗಜ ಪಯಣದೊಂದಿಗೆ ಮೈಸೂರಿಗೆ ಹೋಗಲಿವೆ. ಒಟ್ಟು 9 ಆನೆಗಳ ಪೈಕಿ ಬಂಡೀಪುರದಿಂದ 2 ಆನೆಗಳು ಹೋಗುತ್ತಿದ್ದು, ಎರಡನೇ ಹಂತದಲ್ಲಿ ಪಾರ್ಥ ಸಾರಥಿ ಎಂಬ ಆನೆ ತೆರಳಲಿದೆ. ಚೈತ್ರ ಆನೆ ಈ ಹಿಂದೆ ದಸರಾಗೆ ಹೋಗಿತ್ತು. ಲಕ್ಷ್ಮೀ ಆನೆ ಮೊದಲ ಬಾರಿಗೆ ತೆರಳುತ್ತಿದೆ.