ಬೆಂಗಳೂರು : ನಾನು ಯಾರಿಗೂ ಮೋಸ ಮಾಡಿಲ್ಲ. ಬೇರೆಯವರಿಂದ ನಮಗೆ ಮೋಸ ಆಗಿದೆ ಎಂದು ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಯುವರಾಜ್ ಜತೆ ಹಣಕಾಸು ಆರೋಪ ವಿಚಾರವಾಗಿ ಬೆಂಗಳೂರಿನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಸ್ವಾಮಿ ಅವರು ನನ್ನ ಖಾತೆಗೆ ₹1 ಕೋಟಿಗೂ ಅಧಿಕ ಹಣ ಹಾಕಿದ್ದಾರೆ ಎಂಬ ವಿಚಾರ ಸುಳ್ಳು. ನಮ್ಮ ತಂದೆಯ ಕಾಲದಿಂದಲೂ ಅವರು ನಮಗೆ ಪರಿಚಯ. 17 ವರ್ಷದಿಂದಲೂ ನಮಗೆ ಅವರ ಪರಿಚಯವಿದೆ. ನಮ್ಮ ತಂದೆ ತೀರಿ ಹೋಗುವ ಮುಂಚೆ ಇವರು ನಮ್ಮ ಮನೆಗೆ ಬರುತ್ತಿದ್ದರಂತೆ. ಆದರೆ, ಸ್ವಾಮಿ ಇಂತಹ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ನಮಗೆ ಗೊತ್ತಿರಲಿಲ್ಲ ಎಂದರು. ರಾಜಕೀಯದ ಬಗ್ಗೆ ಈಗ ನಾನು ಮಾತನಾಡಲ್ಲ. ನಾನು ಸಿನಿಮಾ ಕೆಲಸಗಳನ್ನು ಮುಗಿಸಿ ಮುಂದೆ ರಾಜಕೀಯಕ್ಕೆ ಬರುತ್ತೇನೆ ಎಂದರು ರಾಧಿಕಾ ಕುಮಾರಸ್ವಾಮಿ.