ಕಾರವಾರ: ಬಂಗಾಳ ಕೊಲ್ಲಿಯಲ್ಲಿ ಅಪ್ಪಳಿಸಿರುವ ಅಸಾನಿ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿ ಜಿಲ್ಲೆಯ ಮೇಲೂ ಬೀಳುತ್ತಿದೆ. ಕಳೆದ ಒಂದು ವಾರದಿಂದ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಜೋರಾಗಿ ಬೀಸುವ ಗಾಳಿಯಿಂದ ಮೀನುಗಾರಿಕೆಗೆ ತೆರಳಲಾಗದೆ ಬೋಟ್ಗಳು ವಾಪಸ್ ಆಗಿದ್ದು, ಅವಧಿ ಮುಕ್ತಾಯಕ್ಕೂ ಮುಂಚೆಯೇ ಮೀನುಗಾರಿಕೆ ಬಂದ್ ಮಾಡುವ ಪರಿಸ್ಥಿತಿ ಉದ್ಭವಿಸಿದೆ.
ಕಾರವಾರ ಬಂದರಿನಿಂದ ಪ್ರತಿನಿತ್ಯ ನೂರಾರು ಬೋಟ್ಗಳು ಮೀನುಗಾರಿಕೆಗೆ ತೆರಳುತ್ತವೆ. ಆದರೆ ಒಂದು ವಾರದಿಂದ ಆಳ ಸಮುದ್ರದಲ್ಲಿ ಅಲೆಗಳ ಅಬ್ಬರ ಅಧಿಕವಾಗಿದ್ದು, ಜೋರಾಗಿ ಬೀಸುವ ಗಾಳಿಯಿಂದ ಮೀನುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರದ ಬೈತ್ಕೋಲದ ಬಂದರಿನಲ್ಲಿ ವಾರದಿಂದ ಬೋಟ್ಗಳನ್ನು ಲಂಗರು ಹಾಕಿ ಮೀನುಗಾರರು ಕಾಯುತ್ತಾ ಕುಳಿತಿದ್ದಾರೆ. ಮೇ ಅಂತ್ಯಕ್ಕೆ ಪ್ರತಿ ವರ್ಷ ಮೀನುಗಾರಿಕೆ ಬಂದ್ ಮಾಡಲಾಗುತ್ತದೆ. ಆದರೆ ಈ ಬಾರಿ ತಿಂಗಳ ಮುಂಚೆಯೇ ಚಂಡಮಾರುತದ ಎಫೆಕ್ಟ್ನಿಂದ ಮೀನುಗಾರಿಕೆ ಬಂದ್ ಮಾಡಿರುವುದಕ್ಕೆ ಮೀನುಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.