ಕಲಬುರಗಿ: ದಶಕದಿಂದ ಪಾಳು ಬಿದ್ದಿದ್ದ ಶಹಾಬಾದ್ ಇಎಸ್ಐಸಿ ಆಸ್ಪತ್ರೆಗೆ ಕೊನೆಗೂ ಕಾಯಕಲ್ಪ ಭಾಗ್ಯ ಒದಗಿ ಬಂದಿದೆ. ಈಗಾಗಲೇ ಆಸ್ಪತ್ರೆಯ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದ್ದು, ಮುಂದಿನ 3 ವಾರದಲ್ಲಿ ಸಂಪೂರ್ಣ ಕೆಲಸ ಮುಗಿಸಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದರ ಜೊತೆಗೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಶಹಾಬಾದ್-ವಾಡಿ ರಸ್ತೆಯಲ್ಲಿರುವ ಇಎಸ್ಐಸಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಬಗ್ಗೆ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ಜೊತೆ ಮಾತನಾಡಿದ್ದೇನೆ. ಇಲಾಖೆಯಿಂದಲೇ ಆಸ್ಪತ್ರೆ ದುರಸ್ತಿ ಮಾಡಿಸಿ ಕೊಡುತ್ತಾರೆ. ವೈದ್ಯರು, ಸಿಬ್ಬಂದಿ ಜೊತೆಗೆ ಅಗತ್ಯ ಔಷಧಿಗಳನ್ನು ಕೂಡ ಪೂರೈಸುವುದಾಗಿ ತಿಳಿಸಿದರು.
ಇಎಸ್ಐಸಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಮುರುಗೇಶ್ ನಿರಾಣಿ ಇದನ್ನೂಓದಿ : ಅಗತ್ಯಕ್ಕೆ ಅನುಗುಣವಾಗಿ ಆಮ್ಲಜನಕ ಪೂರೈಕೆ ಮಾಡಲು ಸಿಎಂಗೆ ಮಾಧುಸ್ವಾಮಿ ಮನವಿ
ಫ್ಲೋರಿಂಗ್ ದುರಸ್ತಿ, ವಿದ್ಯುತ್ತೀಕರಣ, ಸುಣ್ಣ-ಬಣ್ಣ, ಬೋರ್ವೆಲ್ ರಿಚಾರ್ಜ್, ಸ್ವಚ್ಛತಾ ಕಾರ್ಯ ಸೇರಿದಂತೆ ಆಸ್ಪತ್ರೆಯ ದುರಸ್ಥಿ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಎಇಇ ಅಣ್ಣೆಪ್ಪ ಕುದರಿ ಅವರಿಗೆ ಇದೇ ವೇಳೆ ಸಚಿವರು ನಿರ್ದೇಶನ ನೀಡಿದರು. ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಬೇಕಾದ ವೈದ್ಯಕೀಯ ಉಪಕರಣಗಳು ಹಾಗೂ ಇನ್ನಿತರ ಮೂಲ ಸೌಕರ್ಯಗಳ ಅವಶ್ಯಕತೆ ಬಗ್ಗೆ ಪಟ್ಟಿ ಕೊಡುವಂತೆ ಸೂಚಿಸಿದರು. ಅಲ್ಲದೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಮುಂದಿನ 2 ತಿಂಗಳಿನಲ್ಲಿ ಇದನ್ನು ಪೂರ್ಣ ಪ್ರಮಾಣದ ಅಸ್ಪತ್ರೆಯಾಗಿ ಮಾರ್ಪಡಿಸಲು ಪ್ರಯತ್ನಿಸಲಾಗುವುದು ಎಂದರು.
ಒಟ್ಟು 4.5 ಎಕರೆ ಜಾಗ ಹೊಂದಿರುವ ಶಹಬಾದ್ ಇಎಸ್ಐ ಆಸ್ಪತ್ರೆ 1997 ರಲ್ಲಿ ನಿರ್ಮಾಣಗೊಂಡು 1998 ರಲ್ಲಿ ಹೊರ ರೋಗಿಗಳ ಚಿಕಿತ್ಸೆ ಪ್ರಾರಂಭಿಸಿತು ಅರಂಭಿಕ 120 ಹುದ್ದೆ ಸೃಷ್ಟಿಸಿ 30 ಹುದ್ದೆಗಳನ್ನು ತುಂಬಲಾಗಿತ್ತು. ಕಾಲ ಕ್ರಮೇಣ ರೋಗಿಗಳು, ಸಿಬ್ಬಂದಿ ಕೊರತೆ ಇನ್ನಿತರ ಕಾರಣಗಳಿಂದ 2005 ರಲ್ಲಿ ಆಸ್ಪತ್ರೆ ಮುಚ್ಚಲಾಯಿತು. ಸದ್ಯ, ಆಸ್ಪತ್ರೆಯ ಪ್ಲೋರಿಂಗ್, ವಿದ್ಯುತ್ತೀಕರಣ, ಸುಣ್ಣ-ಬಣ್ಣ ಹಾಳಾಗಿದ್ದು, ದುರಸ್ತಿ ಮಾಡಿಸಬೇಕಿದೆ. ನೀರಿನ ಬೋರವೆಲ್ ಇದ್ದು, ರೀಚಾರ್ಜ್ ಮಾಡಬೇಕಿದೆ. ಎಲ್ಲಾ ಅಂದು ಕೊಂಡಂತೆ ಆದರೆ, ಮುಂದಿನ ಒಂದು ತಿಂಗಳಿನಲ್ಲಿ ಉತ್ತಮವಾದ ಇಎಸ್ಐ ಆಸ್ಪತ್ರೆ ಮತ್ತೆ ಜನರ ಸೇವೆಗೆ ಬಾಗಿಲು ತೆರೆಯಲಿದೆ.