ಕಲಬುರಗಿ:ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಆಳಂದ ತಾಲೂಕಿನ ಅಮರ್ಜಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಯಾವುದೇ ಕ್ಷಣದಲ್ಲಾದರೂ ಅಮರ್ಜಾ ನದಿಗೆ ನೀರು ಹರಿಸಲಾಗುವುದು ಎಂದು ಅಮರ್ಜಾ ಯೋಜನೆಯ ಕಾರ್ಯಪಾಲಕ ಅಭಿಯಂತರ ಸೂರ್ಯಕಾಂತ ಮಾಲೆ ತಿಳಿಸಿದ್ದಾರೆ.
ಜಲಾಶಯದ ಸಾಮರ್ಥ್ಯ 1.554 ಟಿಎಂಸಿ ಇದ್ದು ಗುರುವಾರ ಸಾಯಂಕಾಲ 6 ಗಂಟೆವರೆಗೆ 1.250 ಟಿಎಂಸಿ ನೀರು ಸಂಗ್ರಹಗೊಂಡಿದೆ. ಸದ್ಯ ಜಲಾಶಯಕ್ಕೆ ಒಳಹರಿವಿನ ಪ್ರಮಾಣ 300 ಕ್ಯೂಸೆಕ್ ಇದ್ದು, ಮುಂಜಾಗ್ರತ ಕ್ರಮವಾಗಿ 500 ಕ್ಯುಸೆಕ್ ನೀರನ್ನು ಯಾವುದೇ ಕ್ಷಣದಲ್ಲಾದರೂ ಜಲಾಶಯದ ಗೇಟುಗಳ ಮೂಲಕ ನದಿಗೆ ಹರಿ ಬಿಡಲಾಗುವುದು.
ಆದ್ದರಿಂದ ನದಿ ದಡದಲ್ಲಿರುವ ಸಾರ್ವಜನಿಕರು ನದಿಯ ದಡಕ್ಕೆ ಹೋಗದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು. ನದಿಪಾತ್ರದ ಕೆಳಗಡೆ ಬರುವ ಕೊರಳ್ಳಿ, ಭೂಸನೂರ್, ದೇವಂತಗಿ, ಜವಳಿ (ಡಿ), ಧಂಗಾಪುರ, ಬಟ್ಟರಗಾ, ಹಿತ್ತಲ ಶಿರೂರ ಹಾಗೂ ಕುಡಕಿ ಗ್ರಾಮದ ಸಾರ್ವಜನಿಕರು ನದಿಯಲ್ಲಿ ಇಳಿಯುವುದಾಗಲಿ, ದನಕರುಗಳನ್ನು ಬಿಡುವುದಾಗಲಿ ಮಾಡಬಾರದು. ತಮ್ಮ ಆಸ್ತಿಪಾಸ್ತಿಗಳನ್ನು ಸಂರಕ್ಷಿಸಿಕೊಳ್ಳಬೇಕು. ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.