ಬೆಳಗಾವಿ: ಕಾಂತರಾಜ್ ಆಯೋಗ ಸಿದ್ದಪಡಿಸಿದ್ದ ಜಾತಿಗಣತಿ ವರದಿಯನ್ನು ಬಹಿರಂಗಪಡಿಸುವಂತೆ ಆಡಳಿತ ಪಕ್ಷದ ಸದಸ್ಯ ಕೆ ಪಿ ನಂಜುಂಡಿ ಧರಣಿಯ ಎಚ್ಚರಿಕೆ ಹಾಕಿ ಪಟ್ಟು ಹಿಡಿದು ಕೆಲ ಕಾಲ ಸರ್ಕಾರವನ್ನು ಪೇಚಿಗೆ ಸಿಲುಕುವಂತೆ ಮಾಡಿತು. ಮುಖ್ಯಮಂತ್ರಿಗಳ ಜೊತೆ ಕೂಡಲೇ ಚರ್ಚಿಸಿ ವರದಿಯನ್ನು ಮಂಡಿಸಲು ಬೇಕಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಆಡಳಿತ ಪಕ್ಷದ ಸದಸ್ಯನನ್ನು ಸಮಾಧಾನ ಪಡಿಸಲಾಯಿತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೆ ಪಿ ನಂಜುಂಡಿ ಪ್ರಶ್ನೆಗೆ ಉತ್ತರಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸಿದ್ದರಾಮಯ್ಯ ಸರ್ಕಾರದ ಅವರಿಯಲ್ಲಿ ನೇಮಿಸಿದ್ದ ಕಾಂತರಾಜ್ ಆಯೋಗ ಸಿದ್ದಪಡಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಬಹಿರಂಗಕ್ಕೆ ಬೇಡಿಕೆ ಇತ್ತು, ನಾನೂ ಕೂಡ ಈ ಹಿಂದೆ ವರದಿ ಬಹಿರಂಗಕ್ಕೆ ಒತ್ತಾಯಿಸಿದ್ದೆ. ಆದರೆ ಈಗ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ಕೆಲಸ ಮಾಡುತ್ತಿದೆ. ಕಾಂತರಾಜ್ ಆಯೋಗದ ವರದಿಯಲ್ಲಿ ಸದಸ್ಯರ ಸಹಿ ಮತ್ತು ಸೀಲ್ ಗಳು ಸರಿಯಾಗಿ ದಾಖಲಾಗಿಲ್ಲ. ಹಾಗಾಗಿ ವರದಿಯನ್ನು ಪುನರ್ ಪರಿಶೀಲನೆ ಮಾಡಿ ನಂತರ ವರದಿ ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಅವರು ಕೊಟ್ಟ ಕೂಡಲೇ ಬಹಿರಂಗಪಡಿಸಲಾಗುತ್ತದೆ ಎಂದರು.
ಸರ್ಕಾರದ ಉತ್ತರಕ್ಕೆ ನಂಜುಂಡಿ ಅಸಮಾಧಾನ ವ್ಯಕ್ತಪಡಿಸಿದರು. ಜಾತಿ ಗಣತಿ ವರದಿ ಬಹಿರಂಗ ಮಾಡಿದಿರುವುದಕ್ಕೆ ಕಾರಣವೇನು ಎಂದು ಕೇಳಿದರೆ ಎರಡು ವರ್ಷದ ಹಿಂದೆ ನೀಡಿದ ಉತ್ತರವನ್ನೇ ನೀಡಿದ್ದಾರೆ. ನಮ್ಮ ನಮ್ಮ ಸಮುದಾಯದ ಜನಸಂಖ್ಯೆ ಎಷ್ಟು ಎಂದು ನಮಗೆ ಗೊತ್ತಾಗುವುದು ಬೇಡವೇ? ಸಮಯ ತಿಳಿಸದಿದ್ದರೆ ಬಾವಿ ಗಿಳಿದು ಧರಣಿ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ನಂಜುಂಡಿ ಅವರಿಗೆ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಸಾಥ್ ನೀಡಿದರು. ನಮ್ಮ ಪಕ್ಷವನ್ನು ನಂಜುಂಡಿ ಬಿಡಲು ಹಿಂದುಳಿದ ವರ್ಗಕ್ಕೆ ನ್ಯಾಯ ಸಿಗುತ್ತಿಲ್ಲ ಎನ್ನುವುದೇ ಕಾರಣವಾಗಿದೆ. ಬೆಂಗಳೂರು ಖಜಾನೆ, ದಿಲ್ಲಿ ಖಜಾನೆ ತುಂಬಿಸಲು ಹಿಂದುಳಿದ ವರ್ಗದವರು ರಕ್ತ ಬಸಿಯುತ್ತಿದ್ದಾರೆ.ಆದರೆ ಅವರಿಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ಆಯೋಗದ ಈಗಿನ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಒಳ್ಳೆಯವರು ನನ್ನ ಬಳಿ ಹಣ ಪಡೆಯದೇ ರಾಜ್ಯಸಭೆ ಚುನಾವಣೆಯಲ್ಲಿ ನನಗೆ ಮತ ಹಾಕಿದ್ದರು. ಹಣ ಪಡೆಯದೆ ಮತ ಹಾಕಿದ ಮೂರ್ನಾಲ್ಕು ಜನರಲ್ಲಿ ಅವರೂ ಒಬ್ಬರು ಎಂದು ಅವರ ಸಚ್ಚಾರಿತ್ರ್ಯವನ್ನು ಸಮರ್ಥಿಸಿಕೊಳ್ಳುತ್ತಾ, ಜಾತಿವಾರು ಸಂಖ್ಯೆಯಡಿ ಅನುದಾನ ಕೊಡಿ ನಮ್ಮದೇನೂ ತಕರಾರಿಲ್ಲ. ಶೂದ್ರ, ದಲಿತ, ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಕೂಡಲೇ ವರದಿ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆ ನಡೆಸುತ್ತೇನೆ. ಸದಸ್ಯರ ಭಾವನೆಗಳನ್ನು ಅವರಿಗೆ ವಿವರಿಸಿ ಆದಷ್ಟು ಬೇಗ ವರದಿ ಬಹಿರಂಗಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.