ಅಡಿಲೇಡ್:ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಚಿತ್ತ ಇಂಗ್ಲೆಂಡ್ ವಿರುದ್ಧ ನಾಳೆ ನಡೆಯಲಿರುವ ಸೆಮಿಫೈನಲ್ ಪಂದ್ಯದ ಮೇಲಿದೆ. ಈಗಾಗಲೇ ತಂಡದ ಆಟಗಾರರು ಆಡಿಲೇಡ್ ತಲುಪಿದ್ದು, ಕಠಿಣ ತಾಲೀಮಿನಲ್ಲಿ ತೊಡಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಹಣಾಹಣಿ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳನ್ನೂ ಜಯಿಸಿ ನಾಕೌಟ್ ಹಂತ ತಲುಪಿರುವ ಟೀಂ ಇಂಡಿಯಾಗೆ ತಂಡದ ವಿಕೆಟ್ ಕೀಪರ್ ಬ್ಯಾಟರ್ಗಳ ಪ್ರದರ್ಶನ ತಲೆನೋವಾಗಿ ಪರಿಣಮಿಸಿದೆ. ಸೆಮೀಸ್ನಲ್ಲಿ ಗ್ಲೌಸ್ ತೊಟ್ಟು ಯಾರು ಮೈದಾನಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
ವಿಶ್ವಕಪ್ನಲ್ಲಿ ಭಾರತ ವಿಕೆಟ್ ಕೀಪರ್ಗಳ ಬ್ಯಾಟ್ನಿಂದ ಯಾವುದೇ ಉತ್ತಮ ಇನ್ನಿಂಗ್ಸ್ ಮೂಡಿಬಂದಿಲ್ಲ. ನಾಲ್ಕು ಪಂದ್ಯಗಳಲ್ಲಿ ಆಡಿದ ಅನುಭವಿ ದಿನೇಶ್ ಕಾರ್ತಿಕ್ ಬ್ಯಾಟ್ ಮಂಕಾಗಿತ್ತು. ಬಳಿಕ 5ನೇ ಪಂದ್ಯದಲ್ಲಿ ಅವಕಾಶ ಪಡೆದ ರಿಷಭ್ ಪಂತ್ ಕೂಡ ಕೇವಲ ಮೂರು ರನ್ ಗಳಿಸಿ ನಿರಾಸೆ ಮೂಡಿಸಿದ್ದರು.
ಟೂರ್ನಿಗೂ ಮುನ್ನ ಕಾರ್ತಿಕ್ ಮೇಲೆ ಅಪಾರ ನಿರೀಕ್ಷೆಗಳಿದ್ದವು. ಕೀಪಿಂಗ್ನಲ್ಲಿ ಪಂತ್ಗಿಂತ ಕಾರ್ತಿಕ್ ಬಹಳ ಅನುಭವಿ. ಬ್ಯಾಟಿಂಗ್ನಲ್ಲಿ ಕೊನೆಯ 4-5 ಓವರ್ಗಳಲ್ಲಿ ಕ್ರೀಸ್ಗೆ ಬಂದರೆ ಅದ್ಭುತ ಹೊಡೆತಗಳ ಮೂಲಕ ರನ್ ಬಾರಿಸಬಲ್ಲರು. ತಂಡದ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು.
ಆದರೆ ವಿಶ್ವಕಪ್ನಲ್ಲಿ ಆಗಿದ್ದೇ ಬೇರೆ. ಕಾರ್ತಿಕ್ ಬ್ಯಾಟ್ ನಿರೀಕ್ಷಿತ ಮಟ್ಟದಲ್ಲಿ ಸಿಡಿಯಲಿಲ್ಲ. ಪಾಕ್ ವಿರುದ್ದ ಎಂಸಿಜಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 1 ರನ್, ಪರ್ತ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ಮತ್ತು ಅಡಿಲೇಡ್ನಲ್ಲಿ ಬಾಂಗ್ಲಾದೇಶದ ವಿರುದ್ಧ 7 ರನ್ಗಳೊಂದಿಗೆ ಕಾರ್ತಿಕ್ ಪೆವಿಲಿಯನ್ ಸೇರಿದ್ದರು. ಹೆಚ್ಚಿನ ಸ್ಟ್ರೈಕ್ ರೇಟ್ಗಳಲ್ಲಿ ಸ್ಕೋರ್ ಮಾಡಲೂ ಆಗದೆ, ಸ್ಥಿರತೆಯನ್ನೂ ಕಾಪಾಡಿಕೊಳ್ಳುವಲ್ಲಿ ಕಾರ್ತಿಕ್ ಎಡವಿದರು.
ಈ ನಡುವೆ ಟೂರ್ನಿಯಲ್ಲಿ ಭಾರತವಾಡಿದ 5ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸ್ಥಾನ ಪಡೆದ ರಿಷಭ್ ಪಂತ್ ಕೂಡ ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾದರು. ಚುಟುಕು ಕ್ರಿಕೆಟ್ನಲ್ಲಿ ಲೆಕ್ಕಾಚಾರಗಳು ಕೆಲ ನಿಮಿಷಗಳಲ್ಲೇ ತಲೆಕೆಳಗಾಗುವುದು ಸಾಮಾನ್ಯ. ಕೆಲವೊಮ್ಮೆ ಅದ್ಭುತ ಕ್ಯಾಚ್, ರನೌಟ್ಗಳೂ ಕೂಡ ಬ್ಯಾಟರ್ಗಳ ಪ್ರದರ್ಶನಕ್ಕೆ ಎರವಾಗುತ್ತವೆ. ಜಿಂಬಾಬ್ವೆ ವಿರುದ್ಧ ಬಲವಾದ ಹೊಡೆತಕ್ಕೆ ಮುಂದಾಗಿದ್ದ ಪಂತ್, ರಿಯಾನ್ ಬರ್ಲ್ ಡೈವಿಂಗ್ ಕ್ಯಾಚ್ಗೆ ಬಲಿಯಾಗಿದ್ದರು. ಕಾರ್ತಿಕ್ ಕೂಡ ಒಮ್ಮೆ ರನೌಟ್ ಬಲೆಗೆ ಬಿದ್ದಿದ್ದರು.