ಮಂಡ್ಯ: ರಜೆಗೆ ಊರಿಗೆ ಬಂದಿದ್ದ ಯೋಧರೊಬ್ಬರು ಮನೆಯ ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಚಾಮನಹಳ್ಳಿಯಲ್ಲಿ ಇಂದು ಬೆಳಗ್ಗೆ ಜರುಗಿದೆ. ಸಿ.ಕೆ. ಸಂದೀಪ್ ಕುಮಾರ್ (38) ಮೃತ ಯೋಧ. ಹರಿಯಾಣದಲ್ಲಿ ಸೇವೆಯಲ್ಲಿದ್ದ ಅವರು ರಜೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಆಕಸ್ಮಿಕ ಅವಘಡ ಸಂಭವಿಸಿದೆ.
ಯೋಧನ ಮೃತದೇಹವನ್ನು ಮದ್ದೂರು ಸರ್ಕಾರಿ ಅಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ಮೃತ ಯೋಧ ಸಿ.ಕೆ.ಸಂದೀಪ್ ಕುಮಾರ್ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಯೋಧನ ಅಂತ್ಯಸಂಸ್ಕಾರವನ್ನು ಇಂದು ಮಧ್ಯಾಹ್ನ ಚಾಮನಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.