ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ವಿದ್ಯುತ್ ಬಳಕೆ ಮೇಲೆ ನಿಗಾ ಇರಿಸಲು ಹಾಗೂ ವಿದ್ಯುತ್ ವೆಚ್ಚ ಕಡಿಮೆ ಮಾಡಲು 50 ಗ್ರಾಮ ಪಂಚಾಯತ್ಗಳಲ್ಲಿ ಸೋಲಾರ್ ಬೀದಿ ದೀಪ ಅಳವಡಿಸುವ 'ಹೊಂಬೆಳಕು' ಯೋಜನೆ ಜಾರಿಗೆ ತರಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಈ ವರ್ಷದ ಆಯವ್ಯಯದಲ್ಲಿ ಘೋಷಿಸಿದ್ದಂತೆ ಹೊಂಬೆಳಕು ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದ್ದು, ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 25 ಕೋಟಿ ರೂ. ವೆಚ್ಚ ಮಾಡಲಾಗುವುದು. ಸೌರ ಬೀದಿ ದೀಪಗಳು ಪರಿಸರ ಸ್ನೇಹಿಯಾಗಿದ್ದು, ಇಂಧನ ಬಳಕೆ ಆಗದಿರುವುದರಿಂದ ಗ್ರಾಪಂಗಳಿಗೆ ವಿದ್ಯುತ್ ವೆಚ್ಚದ ಹೊರೆ ಕಡಿಮೆಯಾಗಲಿದೆ. ಅಳವಡಿಸಲಾಗುತ್ತಿರುವ ಸೌರ ಬೀದಿ ದೀಪಗಳು ಎಲ್ಇಡಿ ತಂತ್ರಜ್ಞಾನ ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಈ ವರ್ಷ ಸುಮಾರು 16,500 ಸೋಲಾರ್ ಬೀದಿ ದೀಪ ಅಳವಡಿಸುವ ಗುರಿ ಇದೆ. ಗ್ರಾಮೀಣ ಜನರು ಪ್ರಖರ ಬೆಳಕು ಪಡೆಯುವ ಜೊತೆಗೆ ವೆಚ್ಚದ ಮಿತವ್ಯಯದಿಂದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.