ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನಲ್ಲಿ ಬುಧವಾರ ನಡೆದ ಲೋಕ ಅದಾಲತ್ ತುಂಬಾ ವಿಶೇಷವಾದಂತಹ ಒಂದು ಘಟನೆಗೆ ಸಾಕ್ಷಿಯಾಯಿತು. ವಿಚ್ಛೇದನಕ್ಕೆ ಹೋಗಿ ಲೋಕ ಅದಾಲತ್ ನಲ್ಲಿ ದಂಪತಿ ಒಂದಾಗಿ ಸಂಸಾರ ಪುನಾರಂಭಿಸಿದರು.
ಕಳೆದ 5 ವರ್ಷದ ಹಿಂದೆ ವಿಚ್ಛೇದನಕ್ಕೆ ಈ ದಂಪತಿ ಅರ್ಜಿ ಸಲ್ಲಿಸಿದ್ದರು. ಮದುವೆಯಾದ ಬಳಿಕ 2019 ರಿಂದ ಗಂಡ - ಹೆಂಡತಿ ದೂರವಿದ್ದರು. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ಕೋರ್ಟಿನ ಲೋಕ ಅದಾಲತ್ ನಲ್ಲಿ ದಂಪತಿ ಮತ್ತೆ ಒಂದಾದರು. ಜ್ಯೋತಿ - ನಾಗರಾಜ್ ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಯಾಗಿದ್ದಾರೆ. ಎನ್.ಆರ್.ಪುರ ನ್ಯಾಯಾಧೀಶರ ಬುದ್ಧಿ ಮಾತಿಗೆ ಜ್ಯೋತಿ - ನಾಗರಾಜ್ ಒಪ್ಪಿಗೆ ಸೂಚಿಸಿ, ನ್ಯಾಯಾಧೀಶರಾದ ರಘುನಾಥ್ ಹಾಗೂ ದಾಸರಿ ಕ್ರಾಂತಿ ಕಿರಣ್ ಎದುರು ಜೀವನ ಪುನಾರಂಭಿಸಿದರು. ನ್ಯಾಯಾಧೀಶರ ಎದುರು ಜ್ಯೋತಿ - ನಾಗರಾಜ್ ಹೂವಿನ ಹಾರ ಬದಲಾಯಿಸಿಕೊಂಡಿದ್ದು, ಇದಕ್ಕೆ ಹಲವರು ಸಾಕ್ಷಿಯಾದರು. ಮುಂದೆ ಸಹಬಾಳ್ವೆಯಿಂದ ಜೀವನ ಮಾಡುವುದಾಗಿ ಒಪ್ಪಿದರು. ನಗು ನಗುತ್ತಾ ಲೋಕ ಅದಾಲತ್ನಿಂದ ತೆರಳಿದರು.