ಮೈಸೂರು: ಕೊಟ್ಟಿಗೆಯಲ್ಲಿ ದನ ಕಟ್ಟುವ ವಿಚಾರದಲ್ಲಿ ದೊಡ್ಡಮ್ಮನ ಮೇಲೆ ಮೈದುನನ ಪುತ್ರ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿಂಗಣ್ಣ ಎಂಬುವರ ಪತ್ನಿ ವಿನೋದಾ (45) ಮೃತ ದುರ್ದೈವಿ. ಸಹೋದರರಾದ ನಿಂಗಣ್ಣ ಮತ್ತು ಸ್ವಾಮಿ ಇಬ್ಬರ ನಡುವೆ ಕೊಟ್ಟಿಗೆಯಲ್ಲಿ ದನ ಕಟ್ಟುವ ವಿಚಾರದಲ್ಲಿ ಗಲಾಟೆ ನಡೆಯುತ್ತಿತ್ತು. ಮಾತಿನ ಚಕಮಕಿ ನಡೆದು ಜಗಳ ವಿಕೋಪಕ್ಕೆ ತಿರುಗಿ ಸ್ವಾಮಿ ಅವರ ಪುತ್ರ ಅಭಿಷೇಕ್ (25) ತನ್ನ ದೊಡ್ಡಮ್ಮನ ಮೇಲೆ ಕುಡುಗೋಲಿನಿಂದ ಕೈಗೆ ಹಲ್ಲೆ ನಡೆಸಿ, ಹೊಟ್ಟೆಗೆ ಕಾಲಿನಿಂದ ಹಲ್ಲೆ ನಡೆಸಿದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು.
ಮಹಿಳೆಯನ್ನು ಆಸ್ಪತ್ರೆಗೆ ರವಾನಿಸುತ್ತಿದ್ದ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಆರೋಪಿ ಅಭಿಷೇಕ್ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಎಎಸ್ಪಿಯಾದ ನಂದಿನಿ, ನಾಗೇಶ್, ಡಿವೈಎಸ್ಪಿ ರಘು, ಸಿಪಿಐ ಚಂದ್ರಶೇಖರ್, ಪಿಎಸ್ಐ ಕೃಷ್ಣಕಾಂತ ಭೇಟಿ, ನೀಡಿ ಪರಿಶೀಲಿಸಿದರು. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಕುಡಿದ ನಶೆಯಲ್ಲಿ ಹೆಂಡತಿಯನ್ನೇ ಕೊಂದ ಗಂಡ