Published : Jun 21, 2024, 8:22 PM IST
'ಏಳೇಳು ಜನ್ಮಕ್ಕೂ ನೀನೇ ಗಂಡ': ಬೆಳಗಾವಿಯಲ್ಲಿ ವಟ ಸಾವಿತ್ರಿ ವ್ರತಾಚರಿಸಿದ ಮುತ್ತೈದೆಯರು - Vata Savitri Vrata
ಬೆಳಗಾವಿ: ಏಳೇಳು ಜನ್ಮಕ್ಕೂ ನೀನೇ ಗಂಡ, ನಾನೇ ನಿನ್ನ ಹೆಂಡ್ತಿ ಎಂದು ಗಂಡನ ಆಯುಷ್ಯ ಮತ್ತು ಆರೋಗ್ಯ ವೃದ್ಧಿಗೆ ಪ್ರಾರ್ಥಿಸಿ, ಬೆಳಗಾವಿಯಲ್ಲಿ ಮಹಿಳೆಯರು ಶ್ರದ್ಧಾಭಕ್ತಿಯಿಂದ ವಟ ಸಾವಿತ್ರಿ ವ್ರತಾಚರಿಸಿದರು.
ಪತಿ ಸತ್ಯವಾನ್ನನ್ನು ಯಮನಿಂದ ಬದುಕುಸಿದ ಸಾವಿತ್ರಿಯ ನೆನಪಿಗಾಗಿ ಹುಣ್ಣಿಮೆಯಂದು ವಟ ಸಾವಿತ್ರಿ ವ್ರತ ಆಚರಿಸುವುದು ವಾಡಿಕೆ. ಹಾಗಾಗಿ, ಶುಕ್ರವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಸಮೀಪದ ಹನುಮಾನ್ ಮಂದಿರದ ಆವರಣದಲ್ಲಿರುವ ಆಲದ ಮರಕ್ಕೆ ದಾರ ಸುತ್ತಿ, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಸಾಂಪ್ರದಾಯಿಕ ವೇಷ ತೊಟ್ಟ ಮಹಿಳೆಯರು ಪರಸ್ಪರ ಉಡಿ ತುಂಬಿ, ಪತಿಯ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡರು.
'ಈಟಿವಿ ಭಾರತ'ದ ಮಾತನಾಡಿದ ಪೂಜಾ ಪಾಟೀಲ, "ಗಂಡ-ಹೆಂಡತಿ ನಡುವೆ ಒಂದು ಬಾಂಧವ್ಯ ಇರುತ್ತದೆ. ಅದು ಮತ್ತಷ್ಟು ಹೆಚ್ಚಾಗಬೇಕು. ಏಳೇಳು ಜನ್ಮಕ್ಕೂ ಇದೇ ಗಂಡ ನನಗೆ ಸಿಗಬೇಕು ಎಂದು ಶ್ರದ್ಧೆಯಿಂದ ಪೂಜೆ ಸಲ್ಲಿಸಿದ್ದೇನೆ. ಇದು ಪತಿಯ ಮೇಲಿನ ಪ್ರೀತಿ ವ್ಯಕ್ತಪಡಿಸುವ ಸಂದರ್ಭ. ಮುತ್ತೈದೆಯರಿಗೆ ಐದು ತರಹದ ಹಣ್ಣು, ಎಲೆ ಅಡಿಕೆ ಇರುವ ಉಡಿ ತುಂಬಿದೆವು" ಎಂದರು.
ಇದನ್ನೂ ಓದಿ: ಧಾರವಾಡದಲ್ಲಿ ಸೋಬಾನೆ ಪದ ಹಾಡಿ ಮಹಿಳೆಯರಿಂದ ಯೋಗ ದಿನಾಚರಣೆ - Yoga Day in Dharwad