thumbnail

ಚಿಕ್ಕಮಗಳೂರು : ಮುಂದುವರೆದ ಒಂಟಿ ಸಲಗ, ಬೀಟಮ್ಮ ಗ್ಯಾಂಗ್ ಉಪಟಳ; ಜನರಲ್ಲಿ ಭೀತಿ

By ETV Bharat Karnataka Team

Published : Feb 4, 2024, 8:03 PM IST

Updated : Feb 4, 2024, 8:21 PM IST

ಚಿಕ್ಕಮಗಳೂರು : ಕಳೆದ ಒಂದು ವಾರದಿಂದ ನಗರದ ಸುತ್ತಮುತ್ತ ಬೀಟಮ್ಮ ಗ್ಯಾಂಗ್ ಉಪಟಳ ಮುಂದುವರೆದಿದೆ. ಈ ಗ್ಯಾಂಗ್ ಗ್ರಾಮಕ್ಕೆ ನುಗ್ಗುತ್ತಿರುವುದರಿಂದ ಆತಂಕ ಉಂಟಾಗಿದೆ. ಹೀಗಾಗಿ ರೈತರು ಹಾಗೂ ಸಾರ್ವಜನಿಕರು ಕಂಗಾಲಾಗಿದ್ದಾರೆ. 

ಚಿಕ್ಕಮಗಳೂರು ತಾಲೂಕಿನ ಆಣೂರು ಗ್ರಾಮದಲ್ಲಿ ಶನಿವಾರ ರಾತ್ರಿ ಬೀಟಮ್ಮ ಗ್ಯಾಂಗ್ ಸಂಚಾರ ಮಾಡಿದೆ. ಮನೆ ಮುಂದೆಯೇ ಸಲಗದ ಸಂಚಾರ ನೋಡಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಆಣೂರು ಸಮೀಪದ ಕಾಫಿ ತೋಟದಲ್ಲಿ ಬೀಟಮ್ಮ ಗ್ಯಾಂಗ್ ಬೀಡುಬಿಟ್ಟಿದೆ. ನಿನ್ನೆ ಬೆಳಗ್ಗೆಯಿಂದಲೂ ಕೂಡ ತೋರಣಮಾವು, ಹುಣಸೆ ಮಕ್ಕಿ, ಮುಳುವಾರೆ, ಕೆಸರಿಕೆ ಗ್ರಾಮದಲ್ಲಿ ಕಾಡಾನೆ ಹಿಂಡು ಸಂಚಾರ ನಡೆಸುತ್ತಿದೆ. 

24 ಕಾಡಾನೆಗಳಿರುವ ಬೀಟಮ್ಮ ಗ್ಯಾಂಗ್​ನಿಂದ ಜೀವ ಭಯ ಉಂಟಾಗಿದ್ದು, ಕಳೆದ ಎರಡು ದಿನದಿಂದ ಈ ಭಾಗದಲ್ಲಿ ಕಾಫಿ ತೋಟಗಳ ಕೆಲಸಕ್ಕೆ ಹೋಗುವ ಎಲ್ಲಾ ಕಾರ್ಮಿಕರಿಗೂ ರಜೆ ನೀಡಲಾಗಿದೆ. ಅಲ್ಲದೆ ಗ್ರಾಮದ ಪ್ರತಿ ರಸ್ತೆ ಹಾಗೂ ತೋಟದ ಸುತ್ತ ಮುತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದು, ಬೀಟಮ್ಮ ಅಂಡ್ ಗ್ಯಾಂಗ್ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. 

ಅನಾವಶ್ಯಕವಾಗಿ ಯಾರೂ ರಸ್ತೆಗೆ ಇಳಿಯಬೇಡಿ ಎಂದು ಈ ಭಾಗದ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಕೆಲಸವಿದ್ದರೆ ಬೆಳಗ್ಗೆ ಮಾಡಿಕೊಳ್ಳಿ ಎಂಬ ಮಾತುಗಳನ್ನು ಮೈಕ್ ಮೂಲಕ ಅನೌನ್ಸ್ ಮಾಡಿದ್ದಾರೆ. ಕಾಫಿ ತೋಟ ಹಾಗೂ ಇತರೆ ಕೆಲಸಗಳಿಗೆ ಅನಾವಶ್ಯಕವಾಗಿ ಹೋಗಬೇಡಿ ಎಂದು ತಿಳುವಳಿಕೆ ಹೇಳಿದ್ದಾರೆ. ಆದರೆ ಇಲ್ಲಿನ ಜನರಲ್ಲಿ ಆನೆ ಭೀತಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ.

ಇದನ್ನೂ ಓದಿ : ಚಿಕ್ಕಮಗಳೂರು: ಗ್ರಾಮಗಳಿಗೆ ಬೀಟಮ್ಮ ಗ್ಯಾಂಗ್ ಲಗ್ಗೆ, ಅರಣ್ಯ ಇಲಾಖೆ ಅಧಿಕಾರಿಗಳಿಂದ ಗ್ರಾಮಸ್ಥರಿಗೆ ಎಚ್ಚರಿಕೆ

Last Updated : Feb 4, 2024, 8:21 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.