Published : May 22, 2024, 8:03 PM IST
ಗಂಗಾವತಿ: ರಸ್ತೆ ದಾಟಿ ಬೆಟ್ಟದ ಕಡೆಗೆ ಓಡಿದ ಕರಡಿ ಹಿಂಡು; ಕ್ಯಾಮರಾದಲ್ಲಿ ಸೆರೆ, ಆತಂಕ - bears crossed the road
ಗಂಗಾವತಿ(ಕೊಪ್ಪಳ): ಕರಡಿ ಹಿಂಡು ರಸ್ತೆ ದಾಟಿ ಸಮೀಪದ ಬೆಟ್ಟದ ಕಡೆಗೆ ಓಡಿದ ಘಟನೆ ಕನಕಗಿರಿ ತಾಲೂಕಿನ ಸೋಮಸಾಗರ ಹಾಗೂ ಕನ್ನೇರಮಡು ಗ್ರಾಮದ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಡೆದಿದೆ. ಜನವಸತಿ ಪ್ರದೇಶದ ಸಮೀಪದಲ್ಲೇ ಮೂರ್ನಾಲ್ಕು ಕರಡಿಗಳ ಸಂಚಾರ ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ. ಇದೇ ರಸ್ತೆಯಲ್ಲಿ ಹೊಲ - ಗದ್ದೆಗಳಿಗೆ ಕೆಲಸಕ್ಕೆ ಹೋಗುವ ಕೃಷಿ ಕಾರ್ಮಿಕರು, ದ್ವಿಚಕ್ರ ವಾಹನ ಸವಾರರು ಕರಡಿಗಳ ಸಂಚಾರದಿಂದ ಭಯಭೀತಗೊಂಡಿದ್ದಾರೆ. ಕರಡಿ ಹಿಂಡಿನ ಸಂಚಾರದ ದೃಶ್ಯವನ್ನು ಯುವಕನೊಬ್ಬ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.
ಕನಕಗಿರಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಕರಡಿಗಳ ಉಪಟಳ ಹೆಚ್ಚಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಲಾದರೂ ಅಧಿಕಾರಿಗಳು ಎತ್ತೆಚ್ಚುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ರೈತರು ಒತ್ತಾಯಿಸುತ್ತಿದ್ದಾರೆ.
ಕರಡಿ ದಾಳಿಗೆ ವೃದ್ಧ ಬಲಿ: ಇತ್ತೀಚಿಗೆ, ಕನಕಗಿರಿ ತಾಲೂಕಿನ ರಾಂಪುರ ಗ್ರಾಮದ ಕೆರೆ ಬಳಿ ಇರುವ ಆಂಜನೇಯ ದೇವಸ್ಥಾನದ ಹತ್ತಿರ ವೃದ್ಧನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಜರುಗಿತ್ತು. ಕರಡಿ ದಾಳಿಯಿಂದ ವೃದ್ಧನಿಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಚನ್ನಪ್ಪ ಮೃತಪಟ್ಟಿದ್ದರು.
ಇದನ್ನೂ ಓದಿ: ಹೊಂಚುಹಾಕಿ ಪಾರಿವಾಳ ಬೇಟೆಯಾಡಿದ ಮೊಸಳೆ: ವಿಡಿಯೋ ನೋಡಿ - Crocodile Hunted Pigeon