ಬೆಂಗಳೂರು : ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಏಳಿಗೆ ಹಿತದೃಷ್ಟಿಯಿಂದ ಮುಂಬರುವ 2025-26ರ ರಾಜ್ಯ ಆಯವ್ಯಯದಲ್ಲಿ ಪರಿಗಣನೆಗಾಗಿ ಬಜೆಟ್ ಪೂರ್ವ ಮನವಿ ಪತ್ರವನ್ನು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ವತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಬಜೆಟ್ ಪೂರ್ವ ಸಭೆ ನಡೆಸಿ ಅವರ ಬೇಡಿಕೆ ಮತ್ತು ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಹಾಗೂ ಪದಾಧಿಕಾರಿಗಳು ಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲೇನಿದೆ?:
ಇ-ಖಾತಾ ಕಡ್ಡಾಯ ಮುಂದೂಡುವಿಕೆ: ಇತ್ತೀಚೆಗೆ ರಾಜ್ಯ ಸರ್ಕಾರ ಆಸ್ತಿ ನೋಂದಣಿಗೆ ಇ - ಖಾತಾ ಕಡ್ಡಾಯಗೊಳಿಸಿದೆ. ಇ-ಖಾತಾ ಪಡೆಯಲು ಡಿಜಿಟಲ್ ಇಂಟೆಗ್ರೇಶನ್ ಖಾತಾ ನಿಯಮ ಪಾಲನೆ ಕಡ್ಡಾಯ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿ - ಖಾತಾ ಮತ್ತು ಕಂದಾಯ ನಿವೇಶನಗಳಿಗೆ ಇ-ಖಾತಾ ಇರುವುದಿಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.90ರಷ್ಟು ಆಸ್ತಿಗಳಿಗೆ ನಿಯಮಗಳನ್ವಯ ಇ-ಖಾತಾ ನೀಡುತ್ತಿಲ್ಲ, ನೀಡಲು ಆಗುವುದಿಲ್ಲ. ಪೂರ್ವ ತಯಾರಿ ಇಲ್ಲದೇ ಅನುಷ್ಠಾನಗೊಳಿಸಿರುವ ಇಂತಹ ನಿಯಮದಿಂದಾಗಿ ರಾಜ್ಯದಲ್ಲಿನ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ತಂತ್ರಾಶದಲ್ಲಿನ ದೋಷದಿಂದಾಗಿ ಇ-ಖಾತಾದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಬಹಳ ತಡವಾಗುತ್ತಿದೆ. ಕೆಲವು ಬಾರಿ ವರ್ಷಗಳೇ ಸಹ ಕಳೆದಿವೆ. ಅದಲ್ಲದೆ ಈ ಹಿಂದೆ ಸಿದ್ದಪಡಿಸಲಾದ ಇ-ಖಾತಾ ತಂತ್ರಾಂಶ ಕಾಲಕಾಲಕ್ಕೆ ತಂತ್ರಾಂಶ ಅಪ್ಡೇಟ್ ಆಗದ ಕಾರಣ ಹಾಗೂ ತಂತ್ರಾಂಶದಲ್ಲಿನ ಕೆಲವು ವಿವರಗಳನ್ನು, ಉದಾಹರಣೆಗೆ, ಗ್ರಾಮದ ಹೆಸರು ಬದಲಾವಣೆ (ಅಪ್ಡೇಟ್/ಬದಲಾವಣೆ ಮಾಡಲು) ಕೇವಲ ಎನ್ಐಸಿಗೆ ಮಾತ್ರ ಅಧಿಕಾರವಿರುವುದರಿಂದ ಅದಕ್ಕೆ ಸಂಬಂಧಪಟ್ಟ ಕಡತ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಆಯುಕ್ತರು, ಆರ್ಡಿಪಿಆರ್ ಕಚೇರಿಗಳನ್ನು ದಾಟಿ ಎನ್ಐಸಿಗೆ ಹೋಗಬೇಕಾಗುತ್ತದೆ. ಇಷ್ಟು ಕಚೇರಿಗಳನ್ನು ಹಾದು ಹೋಗಬೇಕಾಗಿರುವುದರಿಂದ ಪರಿಷ್ಕೃತ/ಸರಿಪಡಿಸಿದ ಇ-ಖಾತಾ ಪಡೆಯಲು ಅನಗತ್ಯ ವಿಳಂಬವಾಗುತ್ತಿದೆ. ಅಲ್ಲದೇ ಇ-ಖಾತಾ ಇಲ್ಲದೆ ಉದ್ದಿಮೆದಾರರು ಅಡಮಾನ ಸಾಲ ಮತ್ತು ಇತರ ಹಣಕಾಸಿನ ಸೌಲಭ್ಯಕ್ಕಾಗಿ ತಮ್ಮ ಸ್ವತ್ತುಗಳನ್ನು ನೋಂದಾಯಿಸಲು ಸಾಧ್ಯವಾಗದೇ ಇರುವುದರಿಂದ ಹಾಗೂ ಉದ್ದಿಮೆದಾರರು ನೋಂದಾಯಿತ ಕ್ರಯಪತ್ರ ಮತ್ತು ಇ-ಖಾತಾ ಸಲ್ಲಿಸಲು ಸಾಧ್ಯವಾಗದ ಕಾರಣ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಇಂತಹ ಸ್ವತ್ತುಗಳ ಮೇಲೆ ಸಾಲ ಸೌಲಭ್ಯಗಳನ್ನು ನೀಡಲು ನಿರಾಕರಿಸುತ್ತಿದ್ದು, ಸಾವಿರಾರು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿವೆ ಎಂದರು.
ಕಂದಾಯ ನಿವೇಶನಗಳಲ್ಲಿನ ಆಸ್ತಿಗಳಿಗೆ ಖಾತಾ ನೀಡುವುದು: ಬಹಳಷ್ಟು ಸಂಖ್ಯೆಯ ಕೈಗಾರಿಕೆಗಳು ಕಂದಾಯ ನಿವೇಶನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಕಟ್ಟಡಗಳು ಸಕ್ಷಮ ಪ್ರಾಧಿಕಾರಿಗಳಿಂದ ತಮ್ಮ ಯೋಜನೆಗಳಿಗೆ ಭೂ ಪರಿವರ್ತನೆ ಅಥವಾ ನಕ್ಷೆ ಅನುಮೋದನೆ ಪಡೆದಿರುವುದಿಲ್ಲ. ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಂತಹ ಸ್ವತ್ತುಗಳನ್ನು ಕ್ರಮಬದ್ಧವಲ್ಲದ ಸ್ವತ್ತು ಎಂದು ಪರಿಗಣಿಸಿ ಆಸ್ತಿಗಳನ್ನು ವರ್ಗಾಯಿಸಲಾಗದ 11(ಬಿ) ಖಾತಾ ನೀಡಲಾಗುತ್ತಿದೆ. ಇದರಿಂದಾಗಿ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಇಂತಹ ಸ್ವತ್ತುಗಳ ಮೇಲೆ ಸಾಲ ಸೌಲಭ್ಯಗಳನ್ನು ನೀಡಲು ನಿರಾಕರಿಸುತ್ತಿದ್ದು, ಸಾವಿರಾರು ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿವೆ. ಖಾತಾ ನೀಡುವುದು ನಿವೇಶನಕ್ಕೆ/ಜಾಗಕ್ಕೆ ಹೊರತು, ಕಟ್ಟಡಕ್ಕಲ್ಲ ಎಂಬ ಅಂಶವನ್ನು ಪರಿಗಣಿಸಿ ರಾಜ್ಯವನ್ನು ಉದ್ಯಮ ಸ್ನೇಹಿಯನ್ನಾಗಿ ಮಾಡಲು ನಿಟ್ಟಿನಲ್ಲಿ ಇಂತಹ ಕಾಯಿದೆಗಳನ್ನು ಪರಿಷ್ಕರಿಸುವಂತೆ ಪತ್ರದಲ್ಲಿ ಸರ್ಕಾರವನ್ನು ಅವರು ಕೋರಿದ್ದಾರೆ.
ಪಂಚಾಯತ್ ವ್ಯಾಪ್ತಿಯಲ್ಲ್ಲಿ ಆಸ್ತಿ ತೆರಿಗೆ: ಕೆಐಎಡಿಬಿ/ಕೆಎಸ್ಎಸ್ಐಡಿಸಿ ವತಿಯಿಂದ ಅಭಿವೃದ್ದಿಪಡಿಸಿದ ಕೈಗಾರಿಕಾ ಪ್ರದೇಶ/ಕೈಗಾರಿಕಾ ವಸಾಹತುಗಳಲ್ಲಿ ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ಕೈಗಾರಿಕೋದ್ಯಮಿಗಳು ಸದರಿ ಸಂಸ್ಥೆಗಳಿಗೆ ಸೇವಾ ಶುಲ್ಕವನ್ನು ಪಾವತಿಸುತ್ತಿದ್ದಾರೆ. ಪುರಸಭೆ/ಸ್ಥಳೀಯ ಸಂಸ್ಥೆಗಳು ಈ ಪ್ರದೇಶಗಳ ಮೂಲಭೂತ ಸೌಕರ್ಯಗಳ ನಿರ್ವಹಣೆಯನ್ನು ನಿರ್ವಹಿಸುವುದಿಲ್ಲ. ಆದರೂ ಕೈಗಾರಿಕೋದ್ಯಮಿಗಳು ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದು ದ್ವಿಗುಣ ತೆರಿಗೆಗೆ ಸಮಾನವಾಗಿದೆ. ಆಯಾ ಸಂಸ್ಥೆಗಳು ಮೂಲಭೂತ ಸೌಕರ್ಯಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಔಪಚಾರಿಕವಾಗಿ ಹಸ್ತಾಂತರಿಸುವ ಮೊದಲು ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಇಂತಹ ಕ್ರಮದಿಂದ ಸ್ಥಳೀಯ ಸಂಸ್ಥೆಗಳು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊರೆಯಾಗುವಂತಹ ಯಾವುದೇ ಆಸ್ತಿ ತೆರಿಗೆಯನ್ನು ವಿಧಿಸುವುದಿಲ್ಲ. ಪಂಚಾಯತ್ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಮಾರ್ಗಸೂಚಿ ದರಗಳ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿದೆ. ಈ ವ್ಯವಸ್ಥೆಯು ಅತ್ಯಂತ ಅವೈಜ್ಞಾನಿಕವಾಗಿದೆ. ಏಕೆಂದರೆ ಆಸ್ತಿ ಮಾಲೀಕರು ಮಾರ್ಗಸೂಚಿ ದರಗಳೊಂದಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ. ಆದ್ದರಿಂದ ಇದನ್ನು ಬಿಬಿಎಂಪಿಯಂತೆ ಯೂನಿಟ್ ಏರಿಯಾ ವ್ಯಾಲ್ಯೂ (ಯುಎವಿ) ಆಧಾರದ ತೆರಿಗೆಗೆ ಬದಲಾಯಿಸಬೇಕಾಗಿದೆ ಎಂದು ಮನವಿ ಮಾಡಿದರು.
ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿ ಅವೈಜ್ಞಾನಿಕ ಅಂತಿಮ ಭೂಮಿ ದರಗಳನ್ನು ನಿಗದಿಪಡಿಸುತ್ತಿರುವ ಬಗ್ಗೆ: ಕೆಐಎಡಿಬಿ ನಿವೇಶನಗಳನ್ನು ತಾತ್ಕಾಲಿಕ ಭೂ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುತ್ತದೆ ಮತ್ತು ಹಂಚಿಕೆಯ ನಂತರ ನಿಯಮಿತವಾಗಿ ಆಗಿಂದ್ದಾಗೆ ಭೂ ದರವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ಈ ಪರಿಸ್ಥಿತಿಯನ್ನು ತಪ್ಪಿಸಲು ಸರ್ಕಾರವು 2018 ಸೆ. 5ರಂದು ಅಧಿಸೂಚನೆಯನ್ನು ಜಾರಿ ಮಾಡಿ ನಿವೇಶನಗಳ ಭೂ ದರಗಳನ್ನು ಹೆಚ್ಚಿಸಲು ನಿಯಮಗಳನ್ನು ನಿಗದಿಪಡಿಸಿರುತ್ತದೆ. ಅಂದರೆ ಭೂಮಿಯ ಬೆಲೆಯನ್ನು ಪರಿಷ್ಕರಿಸಲು 3 ವರ್ಷಗಳ ಕಾಲಮಿತಿಯೊಂದಿಗೆ ತಾತ್ಕಾಲಿಕ ಬೆಲೆಯ ಗರಿಷ್ಠ ಶೇ. 20 ಹೆಚ್ಚಿಸಲು ಆದೇಶಿಸಿರುತ್ತದೆ. ಇದು ಅಭಿವೃದ್ಧಿಪಡಿಸಿರುವ ಮತ್ತು ಅಭಿವೃದ್ಧಿಪಡಿಸುವ ಕೈಗಾರಿಕಾ ಪ್ರದೇಶಗಳಿಗೆ ಅನ್ವಯಿಸುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದಾಗ್ಯೂ ಮಂಡಳಿಯು ಅಧಿಸೂಚನೆ ದಿನಾಂಕವನ್ನು ಕಟ್ ಆಫ್ ದಿನಾಂಕವೆಂದು ಪರಿಗಣಿಸಿದೆ ಮತ್ತು ಅಧಿಚೂಚನೆಯ ದಿನಾಂಕಕ್ಕೆ ಮೊದಲು ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿನ ಭೂ ದರಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಕೆಐಎಡಿಬಿಯ ಅಧಿಸೂಚನೆಯ ವ್ಯಾಖ್ಯಾನವು ಸಮರ್ಥನೀಯವಲ್ಲ ಎಂದು ಕಾಸಿಯಾ ಅಧ್ಯಕ್ಷರು ವಿವರಿಸಿದರು.
ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ: ನಮ್ಮ ರಾಜ್ಯದಲ್ಲಿ ಸುಮಾರು 6 ಶೇಕಡಾ ಕೈಗಾರಿಕೆಗಳು ಮಾತ್ರ ಸರ್ಕಾರಿ ಸ್ವಾಮ್ಯದ ಕೆಎಸ್ಎಸ್ಐಡಿಸಿ ಹಾಗೂ ಕೆಐಎಡಿಬಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಳಿದೆಲ್ಲಾ ಕೈಗಾರಿಕೆಗಳು ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕೆಗಳು, ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಮೂಲ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿವೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಹಿತದೃಷ್ಟಿಯಿಂದ ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಈ ಕೆಳಕಂಡ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸುವ ಅಗತ್ಯವಿರುತ್ತದೆ ಎಂದರು.
ಕೆಐಎಡಿಬಿ ಮತ್ತು ಕೆಎಸ್ಎಸ್ಐಡಿಸಿ ಕೈಗಾರಿಕಾ ಪ್ರದೇಶಗಳು/ವಸಾಹತುಗಳ ಮೂಲಭೂತ ಸೌಕರ್ಯಗಳ ಉನ್ನತೀಕರಣ: ಕೆಐಎಡಿಬಿ ಮತ್ತು ಕೆಎಸ್ಎಸ್ಐಡಿಸಿ ನಿರ್ವಹಿಸುತ್ತಿರುವ ಕೈಗಾರಿಕಾ ಪ್ರದೇಶಗಳು/ವಸಾಹತುಗಳು ಮೂಲಸೌಕರ್ಯಗಳ ಕೊರತೆಯಿಂದ ಬಹಳಷ್ಟು ಬಳಲುತ್ತಿವೆ. ಸಾಮಾನ್ಯವಾಗಿ ಈ ಕೈಗಾರಿಕಾ ಪ್ರದೇಶಗಳು/ವಸಾಹತುಗಳಲ್ಲಿನ ನಿವೇಶನಗಳನ್ನು ಮೂಲಸೌಕರ್ಯವಿಲ್ಲದೆ ಹಂಚಿಕೆ ಮಾಡಲಾಗುತ್ತಿದೆ. ಉದ್ಯಮಿಗಳು ಸಾಕಷ್ಟು ಪ್ರಮಾಣದ ಆಸ್ತಿ ತೆರಿಗೆಯನ್ನು ಪಾವತಿಸಿದರೂ, ಈ ಪ್ರದೇಶಗಳಲ್ಲಿ ಮೂಲಭೂತಸೌಕರ್ಯಗಳನ್ನು ಒದಗಿಸಲಾಗುತ್ತಿಲ್ಲ. ಆದುದರಿಂದ, ಅಂತಹ ಕೈಗಾರಿಕಾ ವಸಾಹತುಗಳಲ್ಲಿ/ಪ್ರದೇಶಗಳಲ್ಲಿ ಸಂಗ್ರಹಿಸಲಾದ ಆಸ್ತಿ ತೆರಿಗೆಯ 70% ಅನ್ನು ಕೈಗಾರಿಕಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಪ್ರತ್ಯೇಕವಾಗಿ ಮೀಸಲಿಡಲು ನಾವು ಮಾನ್ಯ ಹಣಕಾಸು ಸಚಿವರಲ್ಲಿ ಕೋರುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಹೆಚ್ಚುವರಿ ಅನುದಾನಕ್ಕಾಗಿ ಮನವಿ: ಕಾಸಿಯಾ ಶ್ರೇಷ್ಠತಾ ಹಾಗೂ ಅನ್ವೇಷಣಾ ಕೇಂದ್ರ ಸ್ಥಾಪನೆಗಾಗಿ ಕಾಸಿಯಾಗೆ 5.00 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿರುವುದಕ್ಕಾಗಿ ಹಾಗೂ ದಾಬಸ್ಪೇಟೆಯಲ್ಲಿ ರಿಯಾಯಿತಿ ದರದಲ್ಲಿ ಭೂಮಿ ಒದಗಿಸಿರುವುದಕ್ಕಾಗಿ ನಾವು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಈ ಕೇಂದ್ರವು ಕಾಸಿಯಾದ ಮಹತ್ವದ ಯೋಜನೆಯಾಗಿದ್ದು, ವಿಶೇಷವಾಗಿ ಗ್ರಾಮೀಣ ಯುವಜನತೆಗೆ ಕೈಗಾರಿಕೆಗೆ ಅಗತ್ಯವಾದ ಕೌಶಲ್ಯ ತರಬೇತಿ ನೀಡುವ ಮೂಲಕ ರಾಜ್ಯದಲ್ಲಿ ಎಂಎಸ್ಎಇಗಳ ಅಭಿವೃದ್ಧಿಗೆ ವಿಶ್ವದರ್ಜೆ ಸಾಂಸ್ಥಿಕ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಕಾಸಿಯಾ ಈಗಾಗಲೇ ಯೋಜನೆಯಲ್ಲಿ ಸರ್ಕಾರದ ಅನುದಾನ ಸೇರಿದಂತೆ 20.00 ಕೋಟಿ ಹೂಡಿಕೆ ಮಾಡಿದೆ ಮತ್ತು ಯೋಜನೆಗಾಗಿ ಅಗತ್ಯವಾದ ಉಳಿದ ನಿಧಿ ಕ್ರೋಢೀಕರಿಸಲು ತುಂಬಾಕಷ್ಟವಾಗುತ್ತಿದೆ. ಈ ಸಂಬಂದ ಪ್ರಸ್ತಾವನೆಯೊಂದನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದೆ. ಯೋಜನೆಯ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಹಣಕಾಸಿನ ಮುಗ್ಗಟ್ಟು ಮತ್ತು ಮಾನವ ಸಂಪನ್ಮೂಲದ ಕೊರತೆಯಿಂದಾಗಿ ಯೋಜನೆಯ ಅನುಷ್ಠಾನ ಕುಂಠಿತವಾಗಿದೆ. ಈ ಯೋಜನೆಗೆ ಸರ್ಕಾರದ ಅನುದಾನ ಸೇರಿದಂತೆ ಕಾಸಿಯಾ ಸುಮಾರು 20.00 ಕೋಟಿ ರೂ.ಗಳ ಹೂಡಿಕೆ ಮಾಡಿದೆ. ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು, ಕಾಸಿಯಾಗೆ ಹೆಚ್ಚುವರಿಯಾಗಿ 5.00 ಕೋಟಿ ರೂ.ಗಳ ಅವಶ್ಯಕತೆಯಿದೆ ಎಂದರು.
ಎಂಎಸ್ಎಂಇಗಳಿಗೆ ಯೋಜನೆಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು 5.00 ರೂ.ಗಳ ಕೋಟಿ ಹೆಚ್ಚುವರಿ ಅನುದಾನವನ್ನು ಒದಗಿಸಬೇಕೆಂದು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಕಾಸಿಯಾ ಶ್ರೇಷ್ಠತಾ ಹಾಗೂ ಅನ್ವೇಷಣಾ ಕೇಂದ್ರ ಯೋಜನೆಯು ನಮ್ಮ ರಾಜ್ಯದಲ್ಲಿ ಎಂಎಸ್ಎಂಇಗಳ ಏಳಿಗೆ ಮತ್ತು ಬೆಳವಣಿಗೆಗೆ ಹೆಚ್ಚಿನ ಅವಕಾಶ ನೀಡುವುದರೊಂದಿಗೆ ನಿರುದ್ಯೋಗಿಗಳಿಗೆ ವಿಸ್ತೃತ ಕೌಶಲ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮಗಳಿಗೆ ಅಗತ್ಯವಾದ ಮೂಲಸೌಕರ್ಯಾಭಿವೃದ್ಧಿಯನ್ನು ಅರ್ಥಪೂರ್ಣವಾಗಿ ಸೃಷ್ಟಿಸುವಲ್ಲಿ ಅಗತ್ಯ ಮೌಲ್ಯವುಳ್ಳದ್ದಾಗಿರುತ್ತದೆ. ಇದಕ್ಕೆ ಪ್ರತಿಯಗಿ ನಿರುದ್ಯೋಗಿಗಳು ರಾಜ್ಯದ ಎಂಎಸ್ಎಂಇಗಳಿಂದ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ ಎಂದು ಅವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಂದಾಯ ನಿವೇಶನಗಳಲ್ಲಿನ ಆಸ್ತಿಗಳಿಗೆ ಖಾತಾ ನೀಡುವುದು, ಪಂಚಾಯತ್ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ, ಬಿಬಿಎಂಪಿ ತೆರಿಗೆ ವಸೂಲಾತಿ ಸಂಬಂಧಿತ ವಿಷಯ, ಕೆಐಎಡಿಬಿ ಮತ್ತು ಕೆಎಸ್ಎಸ್ಐಡಿಸಿ ಕೈಗಾರಿಕಾ ಪ್ರದೇಶಗಳು/ವಸಾಹತುಗಳ ಮೂಲಭೂತ ಸೌಕರ್ಯಗಳ ಉನ್ನತೀಕರಣ, ಕೈಗಾರಿಕಾ ಪಟ್ಟಣ ಪ್ರಾಧಿಕಾರ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗಾಗಿ ನೂತನ ಕೈಗಾರಿಕಾ ವಸಾಹತುಗಳ ಸ್ಥಾಪನೆ, ವಿದ್ಯುತ್ ತೆರಿಗೆಯನ್ನು ಶೇ.9 ರಿಂದ ಶೇ.6ಕ್ಕೆ ಮರುಸ್ಥಾಪಿಸುವುದು, ಪ್ರತ್ಯೇಕ ವಿದ್ಯುತ್ ದರ, ಎಸ್ಕಾಂಗಳು ನೌಕರರ ಪಿಂಚಣಿ ಪಾವತಿಸುವ ಸಲುವಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹೇರಿಕೆ, ಶೇ.100ರಷ್ಟು ನವೀಕರಿಸಬಹುದಾದ ಇಂಧನ ಬಳಸುವ ಕೈಗಾರಿಕೋದ್ಯಮಿಗಳಿಗೆ ಬೆಂಬಲ, ಸರ್ಕಾರಿ ಸಂಗ್ರಹಣೆ, ಬೆಲ್ಲ ಉತ್ಪಾದಕರಿಗೆ ಬೆಂಬಲ, ತೊಗರಿ ಬೇಳೆ, ಬೆಲ್ಲ ಮತ್ತು ಮೆಣಸಿನಕಾಯಿ ರಫ್ತು, ತೊಗರಿ ಬೇಳೆ ಮತ್ತು ಇತರ ಧಾನ್ಯಗಳನ್ನು ಕೃಷಿ ಆಧಾರಿತ ಉದ್ಯಮವಾಗಿ ಪರಿಗಣಿಸುವುದು, ಸುಲಲಿತ ವ್ಯಾಪಾರ ವಹಿವಾಟು, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ಕೈಗಾರಿಕಾ ನೀತಿ (ರಾಜ್ಯ ಸರ್ಕಾರದಿಂದ), ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ಕಾರ್ಮಿಕ ನೀತಿ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ಕನಿಷ್ಠ ವೇತನ ನೀತಿ, ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು 2024, ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಂಬಂಧಿಸಿದ ವಿಷಯಗಳು, ಸ್ಟ್ಯಾಂಪ್ ಶುಲ್ಕದಿಂದ ವಿನಾಯಿತಿ ನೀಡುವ ಕುರಿತು, ಹೈಪೋಥಿಕೇಶನ್ ಮತ್ತು ಅಡಮಾನ ದಾಸ್ತಾವೇಜುಗಳ ನೋಂದಣಿಗೆ ಸ್ಟ್ಯಾಂಪ್ ಶುಲ್ಕ, ಕೇಂದ್ರ ಸರ್ಕಾರದ ವಿವಾದ್ ಸೆ ವಿಶ್ವಾಸ್ ಯೋಜನೆ ಮಾದರಿಯಂತೆ ರಾಜ್ಯದ ಎಂಎಸ್ಎಂಇಗಳಿಗೆ ವಿವಾದದಿಂದ ವಿಶ್ವಾಸ ಯೋಜನೆ ಜಾರಿಗೆ ತರುವ ಬಗ್ಗೆ, ಕೃಷಿ ಯಂತ್ರೋಪಕರಣಗಳ ಪರೀಕ್ಷಾ ವರದಿಗೆ ಕನಿಷ್ಠ ದರ, ಟೆಂಡರ್ ಭಾಗವಹಿಸುವಿಕೆ ನಿಯಮಗಳು ಮತ್ತು ಸಿಂಧುತ್ವ ನಿಗದಿಪಡಿಸುವ ಕುರಿತು ಹಾಗೂ ರೋಗಗ್ರಸ್ಥ ಘಟಕಗಳ ಪುನಃಶ್ಚೇತನವಾಗಬೆಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.