ಬೆಳಗಾವಿ : ಪರೀಕ್ಷೆ ನಡೆದ ಮೂರೇ ಗಂಟೆಯಲ್ಲಿ ಫಲಿತಾಂಶ ನೀಡಿ, ಇಡೀ ದೇಶದ ಗಮನ ಸೆಳೆದಿದ್ದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಈಗ ಮತ್ತೊಂದು ವಿನೂತನ ಚಿಂತನೆಗೆ ಮುಂದಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ "ಕಲಿಕೆ ಜೊತೆಗೆ ಗಳಿಕೆ" ಉದ್ದೇಶದಿಂದ ಅಮೆರಿಕ ಮೂಲದ ಮತ್ತು ದೇಶದ ವಿವಿಧ ಕಂಪನಿಗಳನ್ನು ಕ್ಯಾಂಪಸ್ಗೆ ಆಹ್ವಾನಿಸಿದೆ.
ತಾಂತ್ರಿಕ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅರಿವು ಮತ್ತು ತರಬೇತಿ ನೀಡುವ ಉದ್ದೇಶದಿಂದ ವಿಶ್ವವಿದ್ಯಾಲಯವು ವಿಶ್ವೇಶ್ವರಯ್ಯ ರಿಸರ್ಚ್ ಆಂಡ್ ಇನ್ನೊವೇಶನ್ ಫೌಂಡೇಶನ್ ಸ್ಥಾಪಿಸಿದೆ. ಇದರಡಿ ವಿದ್ಯಾರ್ಥಿಗಳಿಗೆ ಇಂಟರನ್ ಶಿಪ್, ಟ್ರೇನಿಂಗ್ ಮತ್ತು ಪ್ರೊಜೆಕ್ಟ್ ನೀಡಲಾಗುತ್ತದೆ. ಅಲ್ಲದೇ "ಕಲಿಕೆ ಜೊತೆಗೆ ಗಳಿಕೆ" ಧ್ಯೇಯವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿರುವ ಸಂಶೋಧನೆ ಮತ್ತು ನಾವಿನ್ಯತೆ ಮನೋಭಾವಕ್ಕೆ ಪ್ರೇರಣೆ ಕೊಟ್ಟು ಅವರನ್ನು ಕೌಶಲಪೂರ್ಣ ವಿದ್ಯಾರ್ಥಿಗಳನ್ನಾಗಿ ರೂಪಿಸುವ ಗುರಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೊಂದಿದೆ.
ಈಗಾಗಲೇ ಕೆಲ ಕಂಪನಿಗಳ ಜೊತೆಗೆ ವಿಶ್ವವಿದ್ಯಾಲಯ ಒಡಂಬಡಿಕೆ ಕೂಡ ಮಾಡಿಕೊಂಡಿದೆ. ಎಕ್ಸೆಲ್, ಕ್ಯೂಮ್ಯಾಗ್ನಾ ಸೇರಿ ಅನೇಕ ಕಂಪನಿಗಳು ಇಲ್ಲಿಗೆ ಬರಲು ಉತ್ಸುಕವಾಗಿವೆ. ಅಮೆರಿಕದ ಎಕ್ಸ್ಟ್ರಾನ್ಸ್ ಕಂಪನಿಯವರು ಈಗಾಗಲೇ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಯೆಟ್ ಮಾಡಿದ್ದು, ವಿದ್ಯಾರ್ಥಿಗಳಿಗೆ ತರಬೇತಿ ಶುರುವಾಗಿದೆ. ಇನ್ನು ಡ್ರೋನ್ ಉತ್ಪಾದನಾ ಕಂಪನಿ ಮತ್ತು ಹುಬ್ಬಳ್ಳಿಯ ಸಂಕಲ್ಪ ಎಲೆಕ್ಟ್ರಾನಿಕ್ಸ್ ಕಂಪನಿಗಳು ಕೂಡ ಸೆಮಿ ಕಂಡಕ್ಟರ್ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಯೆಟ್ ಮಾಡಿವೆ. ಗ್ರಾಮೀಣ ಭಾಗದಿಂದ ಬರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ನಾನು ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಶ್ವವಿದ್ಯಾಲಯದಲ್ಲಿ ಈ ಎಲ್ಲ ಬದಲಾವಣೆಗಳು ಆಗುತ್ತಿವೆ ಎಂದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ ಎಸ್ ಹೇಳಿದ್ದಾರೆ.
ಪ್ರೊಜೆಕ್ಟ್ ಲರ್ನಿಂಗ್ ಮತ್ತು ಎಕ್ಸ್ಪಿರಿಯನ್ಸ್ ಲರ್ನಿಂಗ್ ವಿದ್ಯಾರ್ಥಿಗಳಿಗೆ ಶಿಕ್ಷಣದ ದಿಕ್ಸೂಚಿಯಾಗಿವೆ. ಹಾಗಾಗಿ, ಅಮೆರಿಕ ದೇಶದ 50 ಕಂಪನಿಗಳನ್ನು ನಾವು ಆಹ್ವಾನಿಸಿದ್ದೇವೆ. ಈ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆ ಜೊತೆಗೆ ಉದ್ಯೋಗ ನೀಡಲಾಗುತ್ತದೆ. ಇದರಲ್ಲಿ ಕಂಪನಿಯ ಮೆಂಟರ್ಗಳು ವಿದ್ಯಾರ್ಥಿಗಳಿಗೆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು.
''50 ಕಂಪನಿಗಳನ್ನು ಆಹ್ವಾನಿಸಿದ್ದೇವೆ. ಆದರೆ, 15 ಕಂಪನಿಗಳಿಗಷ್ಟೇ ನಮ್ಮಲ್ಲಿ ಜಾಗ ಲಭ್ಯವಿದೆ. ಹೆಚ್ಚಿಗೆ ಕಂಪನಿಗಳು ಬಂದರೂ ಮೂಲಸೌಕರ್ಯ ಕಲ್ಪಿಸುತ್ತೇವೆ. ಈಗಾಗಲೇ ವಿಶ್ವವಿದ್ಯಾಲಯಕ್ಕೆ ಸೇರಿದ 1.5 ಲಕ್ಷ ಸ್ಕ್ವೇರ್ ಫೀಟ್ ಕಟ್ಟಡವನ್ನು ಮೀಸಲು ಇಟ್ಟಿದ್ದೇವೆ. ಬೇಡಿಕೆಗೆ ತಕ್ಕಂತೆ ಮತ್ತಷ್ಟು ಕಟ್ಟಡ ನಿರ್ಮಿಸಲಾಗುವುದು. ಅದೇ ರೀತಿ ಉಚಿತವಾಗಿ ನಾವು ಕಟ್ಟಡ ನೀಡುತ್ತಿಲ್ಲ. ಕಂಪನಿಯವರು ನಮಗೆ ಬಾಡಿಗೆ ನೀಡಲಿದ್ದಾರೆ. ಬರುವ ಒಂದು ವರ್ಷದಲ್ಲಿ ನಮ್ಮ ಕನಸು ಸಾಕಾರಗೊಳ್ಳಲಿದೆ'' ಎಂದಿದ್ದಾರೆ.