ಹುಬ್ಬಳ್ಳಿ ; ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಒಳಗೆ ಎಷ್ಟು ಬೇಗುದಿ ಇದೆ ಅಂತ ಅವರಿಗೇ ಗೊತ್ತಿದೆ. ಆದ್ರೆ ಬಹಿರಂಗವಾಗಿ ಅದನ್ನು ಹೇಳೋಕೆ ಆಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ನಲ್ಲಿ ಎರಡೂವರೆ ವರ್ಷದ ಅಧಿಕಾರಾವಧಿ ಬಗ್ಗೆ ಚರ್ಚೆ ಆಗಿದ್ದನ್ನು ಹೊರಗೆ ಬಿಟ್ಟಿದ್ದು ಯಾರು? ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಳಿ ಚರ್ಚೆ ಆಗಿದ್ದು ನಮಗೆ ಹೇಗೆ ಗೊತ್ತಾಗುತ್ತದೆ. ಆ ವಿಚಾರ ಹೊರಗೆ ಬಿಟ್ಟಿದ್ದು ಯಾರು? ಸುಮ್ನೆ ಒಳಗೊಳಗೆ ಬೇಗುದಿ ಇದೆ. ಅದನ್ನು ಬಹಿರಂಗವಾಗಿ ಮಾತನಾಡುತಿಲ್ಲ. ಇದು ಸಹಜವಾಗಿ ಆಡಳಿತದ ಮೇಲೆ ಪರಿಣಾಮ ಬೀರಿದೆ ಎಂದರು.
ಇನ್ನು, ಕರ್ನಾಟಕ ಸರ್ಕಾರ ದಿವಾಳಿಯಾಗಿದೆ ಎನ್ನಲು ಹಲವಾರು ಉದಾಹರಣೆಗಳು ಕಣ್ಮುಂದೆ ಕಾಣುತ್ತಿವೆ. ಈಗ ಗೃಹ ಲಕ್ಷ್ಮಿ, ಅನ್ನ ಭಾಗ್ಯದ ಹೆಚ್ಚುವರಿ ಅಕ್ಕಿ ಇಲ್ಲ, ಹಣನೂ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
ಎಲ್ಲದಕ್ಕೂ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಸರ್ಕಾರ ಅಂತ ಸಿಎಂ ಸಿದ್ದರಾಮಯ್ಯ ಬೊಟ್ಟು ಮಾಡುತ್ತಾರೆ. ಮೊದಲು ಮೆಟ್ರೊ ದರ ಏರಿಕೆಯನ್ನು ತಾವು ಮಾಡಿಲ್ಲ ಅಂದ್ರು, ಆಮೇಲೆ ಕಡಿಮೆ ನಾವೇ ಮಾಡಿದ್ದೇವೆ ಅಂದ್ರು. 28 ರೂಪಾಯಿಗೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಅಕ್ಕಿ ನೀಡಲು ಸಿದ್ಧವಿದೆ. ಈ ಬಗ್ಗೆ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಮೊದಲಿಗೆ ಸ್ಪಂದನೆ ಮಾಡಿದ್ರು. ಆದರೆ ಇಲ್ಲಿಯವರೆಗೆ ರಾಜ್ಯದಿಂದ ಆರ್ಡರ್ ನೀಡಿಲ್ಲ. ಕೇಂದ್ರದಿಂದ ಅಕ್ಕಿ ಖರೀದಿ ಮಾಡಲು ರಾಜ್ಯ ಸರ್ಕಾರ ಸಿದ್ಧವಿಲ್ಲ. 2 ಸಾವಿರದ 80 ಕೋಟಿ ರೂ. ರಾಜ್ಯಕ್ಕೆ ಉಳಿತಾಯ ಆಗುತ್ತೆ. ಇದನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಯಾಕೆಂದರೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಜೋಶಿ ಹೇಳಿದರು.
ರಾಜ್ಯ ಸರ್ಕಾರ ಒಂಬತ್ತು ವಿವಿಗಳನ್ನು ಬಂದ್ ಮಾಡುವ ತೀರ್ಮಾನ ಮಾಡಿದೆ. ಇದರ ಅರ್ಥ ರಾಜ್ಯ ಸರ್ಕಾರ ದಿವಾಳಿ ಹಂತಕ್ಕೆ ಬಂದು ನಿಂತಿದೆ. ಹಾಲಿನ ದರ, ಪೆಟ್ರೋಲ್, ಜನನ, ಮರಣ ಪತ್ರ ಪಡೆಯುವ ದರ ಸಹ ಜಾಸ್ತಿಯಾಗಿದೆ ಎಂದು ಸಚಿವ ಜೋಶಿ ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ಆರ್ ಎಸ್ ಎಸ್ ಬಗ್ಗೆ ನಿರುದ್ಯೋಗಿ ಲೀಡರ್ ಗಳು ಎಂದು ಹೇಳಿಕೆ ನೀಡುತ್ತಿದ್ದಾರೆ. ಪಾಕಿಸ್ತಾನಕ್ಕೆ, ಭಯೋತ್ಪಾದಕರಿಗೆ ಬೆಂಬಲದ ರೀತಿಯಲ್ಲಿ ಈ ಹಿಂದೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದರು. ದೇಶವನ್ನು ಮಾರಿಯಾದ್ರು, ದೇಶದ ಹಿತವನ್ನು ಕಡೆಗಣಿಸಿಯಾದ್ರು ಅಧಿಕಾರದಲ್ಲಿ ಇರಬೇಕು ಎನ್ನುವುದು ಕಾಂಗ್ರೆಸ್ ನೀತಿ. ಹಿಂದೂ ವಿರೋಧಿ ನೀತಿ ಬಗ್ಗೆ ಮಾತನಾಡಿದ್ರೆ ಅವರಿಗೆ ಕಾಂಗ್ರೆಸ್ ನಲ್ಲಿ ಹುದ್ದೆ ಕೊಡುತ್ತಾರೆ. ಹರಿಯಾಣ ಉಸ್ತುವಾರಿಗಳು ತಾವೇ ಪ್ರಧಾನಿಗಳಂತೆ ಮಾತನಾಡುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೆ ನೋಟಿಸ್ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ನಾಯಕರು ಕೊಟ್ಟಿದ್ದಾರೆ. ಅದನ್ನು ರಾಷ್ಟ್ರೀಯ ನಾಯಕರೇ ವಿಚಾರ ಮಾಡ್ತಾರೆ ಎಂದು ಹೇಳಿದರು.
ಇದನ್ನೂ ಓದಿ : ಡಿ.ಕೆ.ಶಿವಕುಮಾರ್ ಎಐಸಿಸಿ ಹೆಸರು ದುರ್ಬಳಕೆ ಮಾಡುವುದು ಬೇಡ : ಸಚಿವ ಕೆ.ಎನ್. ರಾಜಣ್ಣ