ಹುಬ್ಬಳ್ಳಿ : ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೆ ಐದು ಗ್ಯಾರಂಟಿ ಘೋಷಣೆ ಮಾಡಿತ್ತು. ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ದಿನನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಗ್ಯಾರಂಟಿಯಿಂದ ಉಚಿತ ಕೊಡ್ತೇವೆ ಅಂತ ದರ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಹೊರೆ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ನಗರದಲ್ಲಿಂದು ಮಾತನಾಡಿದ ಅವರು, ಇನ್ನು ಅನೇಕ ಕಡೆ ಬೆಳೆಗಳು ಸರಿಯಾಗಿ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬೆಲೆ ನಿಯಂತ್ರಣಕ್ಕೆ ಮುಂದಾಯಿತು. ಸರಿಯಾದ ರೀತಿಯಲ್ಲಿ ಪೂರೈಕೆ ಇರದ ಕಾರಣ ಆಹಾರ ಧಾನ್ಯ ಸಿಗಲಿಲ್ಲ. ಈಗಲೂ ಸಿಗುತ್ತಾ ಇಲ್ಲ. ನೈಸರ್ಗಿಕವಾಗಿ ಅದು ಆಗಿದ್ದು. ಇನ್ನು ಮಾನವ ನಿರ್ಮಿತವಾದ ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಮಾಡ್ತಾ ಇದ್ದಾರೆ. ಹಾಗಾದರೆ ಏನು ಗ್ಯಾರಂಟಿ ಕೊಟ್ಟಿರಿ. ಈಗ ಪೆಟ್ರೋಲ್ ಮೂರುವರೆ ರೂಪಾಯಿ ಜಾಸ್ತಿ ಮಾಡಿದಿರಿ, ಇದರಿಂದ ಬಸ್ ದರ, ಹಾಲಿನ ದರ, ಅಕ್ಕಿ, ಎಲ್ಲವೂ ಹೆಚ್ಚಾಗುತ್ತದೆ. ಸರ್ಕಾರದ ಬಡವರ ವಿರೋಧ ನೀತಿಯನ್ನು ವಿರೋಧಿಸುತ್ತೇನೆ. ಗ್ಯಾರಂಟಿ ಗ್ಯಾರಂಟಿ ಎಂದರು. ಜನರು ಈಗ ತಿರಸ್ಕಾರ ಮಾಡಿದ್ದಾರೆ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ದ್ವೇಷ ಸಾಧಿಸಿದ್ದರಿಂದಲೇ ಈ ರೀತಿ ಬೆಲೆ ಏರಿಕೆ ಮಾಡಿದ್ದಾರೆ.
ಜನಸಾಮಾನ್ಯರ ಮೇಲೆ ಹಗೆ ತೀರಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಿದ್ದಾರೆ. ರಾಜ್ಯ ಸರ್ಕಾರ ಹಿಂದೆ ಬೆಲೆ ಏರಿಕೆ ವಿರುದ್ಧ ಶವ ಯಾತ್ರೆ ಮಾಡಿದ್ದರು. ನಾವು ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಚೆಂಬನ್ನು ರಾಜ್ಯದ ಜನತೆಗೆ ಕೊಟ್ಟಿದೆ: ಮತ್ತೊಂದೆಡೆ ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ, ಜನರ ಜೇಬಿಗೆ ಕತ್ತರಿ ಹಾಕುವ ಮೂಲಕ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಚೊಂಬನ್ನು ರಾಜ್ಯದ ಜನತೆಗೆ ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಬೆಲೆ ಹೆಚ್ಚಿಗೆ ಮಾಡಿದ್ದು, ಈ ಸರ್ಕಾರ ಯಾರ ಪರವಾಗಿ ಕೆಲಸ ಮಾಡುತ್ತಿದೆ. ಪೆಟ್ರೋಲ್ ಬೆಲೆ ಏರಿಕೆ ಜನರ ದಿನನಿತ್ಯದ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದ್ರೆ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಿದೆ. ಇನ್ನೂ ಕೆಲ ರಾಜ್ಯಗಳಲ್ಲಿ ಹೆಚ್ಚಿಗೆ ಇದೆ. ಹೆಚ್ಚಿಗೆ ಇರುವ ರಾಜ್ಯಗಳ ಉದಾಹರಣೆಯನ್ನು ಈ ಸರ್ಕಾರ ಕೊಡುತ್ತಿದೆ. ಅಲ್ಲದೆ ಸ್ಟಾಂಪ್ ಡ್ಯೂಟಿ ಹಣವನ್ನು ಈ ಸರ್ಕಾರ ಹೆಚ್ಚಳ ಮಾಡಿದೆ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಮೂಲಕ ಜನರಿಗೆ ಅಕ್ಷಯ ಪಾತ್ರೆ ನೀಡುತ್ತೇವೆಂದು ಬೆಲೆ ಏರಿಕೆ ಮೂಲಕ ರಾಜ್ಯದ ಜನತೆಗೆ ಚೆಂಬು ಕೊಟ್ಟಿದ್ದಾರೆ ಎಂದು ಕಿಡಿಕಾರಿದ ಅವರು, ಪೆಟ್ರೋಲ್ ಮೇಲೆ ಹಾಕಿದ ಟ್ಯಾಕ್ಸ್ ನ್ನು ವಾಪಸ್ ಪಡೆಯಬೇಕು. ನಾಳೆ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ಧಾರವಾಡದಲ್ಲಿ ಗೋವುಗಳನ್ನು ರಕ್ಷಣೆ ಮಾಡಿದವನ ಮೇಲಿನ ಹಲ್ಲೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹಲ್ಲೆ ಆದಂತಹ ವ್ಯಕ್ತಿಯ ಮೇಲೆಯೇ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. ಕ್ರಿಮಿನಲ್ ಆ್ಯಕ್ಟಿವಿಟಿ ಇರುವಂತಹ ವ್ಯಕ್ತಿಗಳಿಗೆ ಕುಮ್ಮಕ್ಕು ನೀಡುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಈ ಸರ್ಕಾರ ಗೂಂಡಾಗಳ ವಿರುದ್ಧ ಸಮರ ಸಾರಬೇಕು. ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಗುಣ ಮಾಡುವುದನ್ನು ಬಿಡಬೇಕು ಎಂದರು.
ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ - ಜಗದೀಶ್ ಶೆಟ್ಟರ್ : ಗ್ಯಾರಂಟಿಯಿಂದ ಉಚಿತ ಕೊಡುತ್ತೇವೆಂದು ಹೇಳಿ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಆರೋಪಿಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಖಜಾನೆಯಿಂದ ದುಡ್ಡು ಖರ್ಚು ಮಾಡಲಾಗುತ್ತಿದೆ. ದಿನನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಗ್ಯಾರಂಟಿ ಯೋಜನೆಯನ್ನು ಏಕೆ ಮುಂದುವರೆಸುತ್ತೀರಿ? ಎಂದು ಕಾಂಗ್ರೆಸ್ ಶಾಸಕರೇ ಕೇಳುತ್ತಿದ್ದಾರೆ. ದರ ಇಳಿಕೆ ಮಾಡದೇ ಹೋದರೆ ನಾವು ಹೋರಾಟ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ ಶಿವಕುಮಾರ್ ಕೇಂದ್ರ ಸರ್ಕಾರ ದರ ಏರಿಕೆ ಮಾಡಿದಾಗ ಪ್ರತಿಭಟನೆ ಮಾಡಿದ್ದಾರೆ.ಇದೀಗ ಇವರು ರಾಜ್ಯದ ಜನರಿಗೆ ಹೆಚ್ಚಿನ ಒತ್ತಡ ಹಾಕಿ ಅನ್ಯಾಯ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ತಕ್ಷಣ ವಾಪಾಸ್ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.
ಬೆಲೆ ಏರಿಕೆ ಹೀಗೆ ಮುಂದುವರೆದರೆ ಸರ್ಕಾರಿ ನೌಕರರಿಗೂ ಸಂಬಳ ಕೊಡೋಕೆ ಆಗೋಲ್ಲ. ಸಿದ್ದರಾಮಯ್ಯ ಅವರು ಅನುಭವ ವ್ಯಕ್ತಿ ಅಂತಾರೆ. ಇದೀಗ ಅವರು ಫೇಲ್ಯೂರ್ ಆಗಿದ್ದಾರೆ ಎಂದರು.
ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಅವರ ಮೇಲೆ ಷಡ್ಯಂತ್ರ ಮಾಡುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಪ್ರಕರಣ ದಾಖಲಾದಾಗ ಗೃಹ ಮಂತ್ರಿಗಳೇ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದಿದ್ದರು. ವಾಲ್ಮೀಕಿ ಹಗರಣ, ನಾಗೇಂದ್ರ ಅವರ ರಾಜೀನಾಮೆ ಮುಚ್ಚಿ ಹಾಕಲು ಯಡಿಯೂರಪ್ಪ ಅವರ ಮೇಲೆ ಷಡ್ಯಂತ್ರ ಹೂಡಲಾಗಿದೆ. ರಾಜಕೀಯ ದ್ವೇಷ ಸಾಧಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಗ್ಯಾರಂಟಿ ಯೋಜನೆಗಾಗಿ ತೈಲ ದರ ಹೆಚ್ಚಳ : ಬಿ ವೈ ವಿಜಯೇಂದ್ರ - B Y Vijayendra