ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ವಿಕಲಚೇತನ ಉದ್ಯೋಗಿಗಳು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದರು.
ತಮ್ಮ ಕುಟುಂಬ ಸಮೇತವಾಗಿ ಕುಮಾರಸ್ವಾಮಿ ಅವರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿಕೊಳ್ಳಲು ಈ ಸಿಬ್ಬಂದಿ, ರಾಜ್ಯದ ಎಲ್ಲ ಭಾಗಗಳಿಂದ ಬಂದಿದ್ದರು ಹಾಗೂ ಹಬ್ಬದ ದಿನ ಕುಮಾರಸ್ವಾಮಿ ಅವರು ಎಲ್ಲಿರುತ್ತಾರೋ ಅಲ್ಲಿಗೆ ಬಂದು ತಮ್ಮ ಮಕ್ಕಳ ಜತೆ ಸೇರಿಕೊಂಡು ಹಬ್ಬ ಆಚರಿಸುತ್ತಾರೆ. ಕಳೆದ ಆರು ವರ್ಷಗಳಿಂದ ಅವರು ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಈ ಹಬ್ಬಕ್ಕೆ ಉದ್ಯೋಗಿಗಳೆಲ್ಲ ಮಂಗಳವಾರ ಸಚಿವರ ಬೆಂಗಳೂರಿನ ಜೆ.ಪಿ.ನಗರದ ನಿವಾಸಕ್ಕೆ ಬಂದು ಹಬ್ಬ ಆಚರಿಸಿದರು.
![Union Minister HD Kumaraswamy celebrates Sankranti with disabled employees](https://etvbharatimages.akamaized.net/etvbharat/prod-images/14-01-2025/kn-bng-03-hd-kumaraswamy-celebrated-sankranti-with-disabled-employees-script-7208083_14012025144345_1401f_1736846025_139.jpg)
ಭಾವುಕರಾದ ಸಚಿವರು: ಈ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಸಚಿವ ಕುಮಾರಸ್ವಾಮಿ ಅವರು, ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ ಆಗಿದ್ದೇನೆ. ನಿಮ್ಮ ಹೃದಯದಲಿ ಸ್ಥಾನ ಕೊಟ್ಟಿದ್ದಕ್ಕೆ ನಾನು ಆಭಾರಿ. ನಿಮ್ಮ ಹಾರೈಕೆ ಪ್ರೀತಿಯೇ ನನಗೆ ಶ್ರೀರಕ್ಷೆ ಎಂದು ಭಾವುಕರಾದರು.
ಅವಕಾಶ ಸಿಕ್ಕಿದಾಗ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ವಿಕಲಚೇತನರಿಗೆ ಸಾಧ್ಯವಾದಷ್ಟು ನೆರವು ಕೊಟ್ಟಿದ್ದೇನೆ. ಮುಂದೆಯೂ ದೈಹಿಕವಾಗಿ ಶಕ್ತಿ ಇಲ್ಲದ ಯಾರೇ ಇದ್ದರೂ ಅವರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಪ್ರಾಮಾಣಿಕವಾಗಿ ಅಂತಹವರ ಒಳಿತಿಗಾಗಿ ಪ್ರಯತ್ನ ಮಾಡುತ್ತೇನೆ ಎಂದರು.
![Union Minister HD Kumaraswamy celebrates Sankranti with disabled employees](https://etvbharatimages.akamaized.net/etvbharat/prod-images/14-01-2025/kn-bng-03-hd-kumaraswamy-celebrated-sankranti-with-disabled-employees-script-7208083_14012025144345_1401f_1736846025_400.jpg)
ವಿಕಲಚೇತನರು, ದೈಹಿಕವಾಗಿ ಅಶಕ್ತರ ಬಗ್ಗೆ ನಮಗೆ ಅನುಕಂಪಕ್ಕಿಂತ ಮಿಗಿಲಾಗಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕೆಲಸ ಆಗಬೇಕಿದೆ. ನನಗೆ ಅವಕಾಶ ಸಿಕ್ಕಿದಾಗ ನಾನು ಇಂಥವರ ಪರವಾಗಿ ಕೆಲಸ ಮಾಡುತ್ತೇನೆ. ನನ್ನ ಪಾಲಿಗೆ ಇವರು ದೇವರ ಸಮಾನರು ಎಂದು ಹೇಳಿದರು.
![Union Minister HD Kumaraswamy celebrates Sankranti with disabled employees](https://etvbharatimages.akamaized.net/etvbharat/prod-images/14-01-2025/kn-bng-03-hd-kumaraswamy-celebrated-sankranti-with-disabled-employees-script-7208083_14012025144345_1401f_1736846025_931.jpg)
ಸಮಾಜದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಕಷ್ಟದಲ್ಲಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಮುಂದಿನ ಜನರು, ದೇವರು ಅವಕಾಶ ಕೊಡಬಹುದು ಎಂದು ನಂಬಿದ್ದೇನೆ. ನಿಮ್ಮ ಮಕ್ಕಳಿಗೆ ಶುಭವಾಗಲಿ, ಅವರನ್ನು ಚೆನ್ನಾಗಿ ಓದಿಸಿ ಎಂದರು.
ವಿಕಲಚೇತನರು, ದೈಹಿಕವಾಗಿ ಶಕ್ತಿ ಇಲ್ಲದವರು ಧೃತಿಗೆಡಬೇಡಿ. ಅಂಗವೈಕಲ್ಯ ಬಂತೆಂದು ಹೆದರಬೇಡಿ.. ದೇವರಿದ್ದಾನೆ, ನಿಮಗೂ ಅವಕಾಶ ಬಂದೆ ಬರುತ್ತದೆ, ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಇವತ್ತು ಭಾರತ ಯಾರೂ ಊಹೆ ಮಾಡದ ರೀತಿಯಲ್ಲಿ ಪ್ರಗತಿ ಹೊಂದುತ್ತಿದೆ. ಅವಕಾಶಗಳು ಹೆಚ್ಚುತ್ತಿವೆ, ಯಾರು ದೃತಿಗೆಡಬಾರದು. ಕಷ್ಟಗಳು ಬಂದರೆ ಧೈರ್ಯವಾಗಿ ಎದುರಿಸಿ, ಯಾವುದೇ ಸಮಸ್ಯೆ ಬಂದರೂ ಕೆಚ್ಚೆದೆಯಿಂದ ಎದುರಿಸಿ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ. ಕೌಟುಂಬಿಕವಾಗಿ ಒಳ್ಳೆಯ ಬಾಂಧವ್ಯ ರೂಢಿಸಿಕೊಳ್ಳಿ ಎಂದು ಸಚಿವರು ಹೇಳಿದರು.
![Union Minister HD Kumaraswamy celebrates Sankranti with disabled employees](https://etvbharatimages.akamaized.net/etvbharat/prod-images/14-01-2025/kn-bng-03-hd-kumaraswamy-celebrated-sankranti-with-disabled-employees-script-7208083_14012025144345_1401f_1736846025_459.jpg)
ಸಚಿವರ ಕಳವಳ: ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ನಡೆದಿದೆ. ಆ ದೃಶ್ಯವನ್ನು ನಾನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ನೋಡಿ ತೀವ್ರ ಆಘಾತಕ್ಕೆ ಒಳಗಾದೆ. ಮನಸ್ಸಿಗೆ ಬಹಳ ನೋವಾಯಿತು. ಇಂಥ ಪರಿಸ್ಥಿತಿಯಿಂದ ಸಮಾಜ ಹೊರಕ್ಕೆ ತರಬೇಕಿದೆ ಎಂದರು.
ವಿಕಲಚೇತನರಿಗೆ ಹೆಚ್ಚು ಉದ್ಯೋಗಾವಕಾಶ ನೀಡಲು ಮನವಿ: ಈ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರಿಗೆ ಅಹವಾಲು ಸಲ್ಲಿಸಿದ ವಿಕಲಚೇತನ ಉದ್ಯೋಗಿಗಳು, ಇವತ್ತು ನಿಮಗೆ ಶುಭ ಕೋರಲು ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿದ್ದೇವೆ. ಮುಂದಿನ ವರ್ಷ ದೇಶದ ಎಲ್ಲೆಡೆಯಿಂದ ಬಂದು ನಿಮಗೆ ಶುಭ ಕೋರುವಂತಾಗಬೇಕು. ತಾವು ಹೆಚ್ಚು ಪ್ರಮಾಣದಲ್ಲಿ ದೇಶಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಲ್ಲಿ ವಿಕಲಚೇತನರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಆರೋಗ್ಯ ವಿಮೆ ಮರು ಜಾರಿ ಮಾಡಿಸಿ: ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ವಿಕಲಚೇತನರಿಗಾಗಿಯೇ ಸ್ವಾವಲಂಬನ ಆರೋಗ್ಯ ವಿಮೆ ಯೋಜನೆ ಜಾರಿಗೆ ತಂದಿದ್ದರು. ಆ ಯೋಜನೆ ಈಗ ನಿಂತು ಹೋಗಿದೆ. ₹300 ಕೊಟ್ಟರೆ ನಮಗೆ ಅತ್ಯುತ್ತಮವಾದ ಆರೋಗ್ಯ ಸೌಲಭ್ಯ ದೊರೆಯುತ್ತಿತ್ತು. ಈ ಯೋಜನೆಯನ್ನು ಮತ್ತೆ ಆರಂಭ ಮಾಡಿಸಬೇಕು ಎಂದು ಅವರು ಮನವಿ ಮಾಡಿದರು.
ಮನವಿಗೆ ಸ್ಪಂದನೆ: ವಿಮಾ ಯೋಜನೆ ಮರು ಜಾರಿ ಮಾಡುವುದಕ್ಕೆ ಸಂಬಂಧಪಟ್ಟ ಸಚಿವರ ಗಮನ ಸೆಳೆಯುತ್ತೇನೆ ಎಂದು ಅವರು ಭರವಸೆ ನೀಡಿದರು.
ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಉದ್ಯೋಗಿಗಳು: ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಾಗ ನಮ್ಮ ವೇತನ 3000 ರೂ. ಇತ್ತು. ನಮ್ಮ ಸೇವೆ ಕಾಯಂ ಆದ ಮೇಲೆ 80,000 ರೂ.ರಿಂದ 90,000 ರೂ. ಮೀರಿ ವೇತನ ಪಡೆಯುತ್ತಿದ್ದೇವೆ. ನಾವು ಸ್ವಂತ ಮನೆ ಕಟ್ಟಿಕೊಂಡಿದ್ದೇವೆ, ಸ್ವಂತ ಕಾರು ಖರೀದಿ ಮಾಡಿದೇವೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸುತ್ತಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ಕುಮಾರಸ್ವಾಮಿ ಅವರಿಂದ. ಹೀಗಾಗಿ ನಾವು ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಅವರ ಜತೆಯಲ್ಲಿ ಆಚರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕರಾಳ ಸಂಕ್ರಾಂತಿ ಆಚರಣೆ : ಆರ್.ಅಶೋಕ್ - ATTACK ON COWS